ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ರೆಡಿ ಮಾಡಿ ಸೈಟ್ ಮಾರಾಟ; ಬೀದಿಗೆ ಬಿದ್ದ ವೃದ್ದ ದಂಪತಿ, ವಂಚಕರ ವಿರುದ್ಧ ಎಫ್ಐಆರ್
ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ವೃದ್ದ ದಂಪತಿಗಳಿಗೆ ಮಹಾ ವಂಚನೆ ಆಗಿದೆ. ಬದುಕಿರುವಾಗಲೇ ವೃದ್ದ ದಂಪತಿಗಳು ಮೃತಪಟ್ಟಿದ್ದಾರೆ ಎಂದು ಡೆತ್ ಸರ್ಟಿಫಿಕೇಟ್ ಪಡೆದಿದ್ದಾರೆ. ಇದೇ ಡೆತ್ ಸರ್ಟಿಫಿಕೆಟ್ ಬಳಿಸಿ ವೃದ್ದ ದಂಪತಿಗಳ ಹೆಸರಿನಲ್ಲಿ ಇದ್ದ ಸೈಟ್ ಪೋರ್ಜರಿ ಮೂಲಕ ಗುಳಂ ಮಾಡಿದ್ದಾರೆ. ಏನಿದು ಕಥೆ ಅಂತೀರಾ ಇಲ್ಲಿದೆ ನೋಡಿ.

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ವಿಠಲ ಗ್ರಾಮದಲ್ಲಿ ಸೀನಪ್ಪ ಮತ್ತು ಬೇಬಿ ಎಂಬ ದಲಿತ ದಂಪತಿಗಳಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಇತ್ತೀಚೆಗೆ ಎರಡು ಮಕ್ಕಳು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಸೊಸೆಯಂದಿರು ಮತ್ತು ಮೊಮ್ಮಕ್ಕಳು ಇದ್ದಾರೆ. ಆದರೂ ಕೂಡ ಪತ್ನಿ ಬೇಬಿ ಕೂಲಿ ಮಾಡಿಕೊಂಡು ವೃದ್ಧ ಪತಿ ಸೀನಪ್ಪನನ್ನು ಆರೈಕೆ ಮಾಡಿಕೊಂಡಿದ್ದಾಳೆ. ಈ ದಂಪತಿಗಳಿಗೆ 1991 ರಲ್ಲಿ ಆಶ್ರಯ ಯೋಜನೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿಯಲ್ಲಿ ಸರ್ವೆ ನಂ. 38ರ ವಸತಿ ಬಡಾವಣೆಯಲ್ಲಿ, 30 ಬೈ 40 ಸೈಟ್ ನಂ. 20 ಮಂಜೂರು ಆಗಿತ್ತು. ಜೊತೆಗೆ ಇಂದಿರಾ ಆವಾಜ್ ಯೋಜನೆಯಲ್ಲಿ ಮನೆ ಕಟ್ಟಿಕೊಂಡಿದ್ದರು. ಸದ್ಯ ಈ ಹಳೆ ಮಣ್ಣಿನ ಮನೆ ಬಿದ್ದು ಹೋಗಿದೆ. ಅದು ಈಗ ಖಾಲಿ ಸೈಟ್ ಆಗಿದೆ. ಇದರ ಮೇಲೆ ಪಕ್ಕದ ಬೆಟ್ಟಮಕ್ಕಿ ಗ್ರಾಮದ ವಿಶ್ವನಾಥ್ ಶೆಟ್ಟಿ ಕಣ್ಣು ಬಿದ್ದಿದೆ. ಈತ ವೃದ್ದ ದಂಪತಿಗಳು ಮೃತಪಟ್ಟಿದ್ದಾರೆಂದು ಡೆತ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾನೆ.
ಹೌದು ಇದೇ ಸೈಟ್ನಲ್ಲಿ ಗ್ರಾಮ ಪಂಚಾಯತಿಯ ಕುಡಿಯುವ ಟ್ಯಾಂಕ್ ಇತ್ತು. ಈ ಸೈಟ್ ಆಸೆಗಾಗಿ ಕುಡಿಯುವ ನೀರಿನ ಟ್ಯಾಂಕ್ ನೆಲಸಮ ಮಾಡಿದ್ದಾನೆ. ಸೈಟ್ನ ದಾಖಲೆಗಳನ್ನು ಗ್ರಾಮಸ್ಥರು ಪರಿಶೀಲಿಸಿದಾಗ ವೃದ್ಧ ದಂಪತಿಗಳ ಸೊಸೆ ರೇಣುಕಾಳಿಂದ ಈತ ಸೈಟ್ ಖರೀದಿಸಿರುವುದಾಗಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾನೆ. ವೃದ್ಧ ದಂಪತಿಗಳು ಬದುಕಿದ್ದಾಗಲೇ ಅವರ ಹೆಸರಿನಲ್ಲಿ ಇದ್ದ ಮನೆ ಮೃತ ಸೊಸೆಗೆ ಹೋಗಿದ್ದು ಹೇಗೆ. ಹೀಗೆ ವಿಶ್ವನಾಥ್ ಶೆಟ್ಟಿ ಜೊತೆ ಪಿಡಿಓ, ವಿಎ, ಆರ್ಐ ಮತ್ತು ಇತರೆ ಅಧಿಕಾರಿಗಳು ಶಾಮೀಲು ಆಗಿ ವೃದ್ಧ ದಂಪತಿಗೆ ಸೇರಿದ ಸೈಟ್ ದೋಖಾ ಮಾಡಿದ್ದಾರೆ. ಸದ್ಯ ಸೈಟ್ ವಂಚನೆ ಕುರಿತು ತೀರ್ಥಹಳ್ಳಿ ಪೊಲೀಸರಿಗೆ ವೃದ್ದ ಸೀನಪ್ಪನು ದೂರು ಕೊಟ್ಟಿದ್ದಾನೆ. ವಿಶ್ವನಾಥ್ ಶೆಟ್ಟಿ, ಸೊಸೆ ರೇಣುಕಾ ಮತ್ತು ಪಿಡಿಓ, ವಿಎ ಮತ್ತು ಆರ್ ಐ ಕಂದಾಯ ಅಧಿಕಾರಿಗಳು ಸೇರಿದಂತೆ ಒಟ್ಟು 7 ಜನರು ವಿರುದ್ದ ಎಫ್ಐಆರ್ ದಾಖಲಾಗಿದೆ. ಸದ್ಯ ಈ ಪ್ರಕಣದಲ್ಲಿ ವೃದ್ಧ ದಂಪತಿಗಳ ಸೊಸೆ ರೇಣಾಕಾ ಮೃತಪಟ್ಟಿದ್ದಾಳೆ.
ಪುಟ್ಟ ಮಣ್ಣಿನ ಮನೆ ಬಿದ್ದ ಬಳಿಕ ವೃದ್ಧ ದಂಪತಿಗಳು ಬೇರೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಮಾಡಿಕೊಂಡು ಅವರು ತಮ್ಮ ಜೀವನ ನಿರ್ವಹಣೆ ಇಷ್ಟು ವರ್ಷಗಳ ಕಾಲ ಮಾಡಿಕೊಂಡಿದ್ದರು. ತಮಗೊಂದು ಸೈಟ್ ಇದೆ ಕೊನೆ ಕಾಲದಲ್ಲಿ ಅದು ಆಸರೆ ಆಗುತ್ತದೆ ಎಂದು ಅಂದುಕೊಂಡಿದ್ದರು. ಯಾವಾಗ ಗ್ರಾಮಕ್ಕೆ ನೀರು ಪೂರೈಕೆಯ ಟ್ಯಾಂಕ್ ನ್ನು ವಿಶ್ವನಾಥ್ ಶೆಟ್ಟಿ ತನ್ನ ಸಹಚರರಿಂದ ನೆಲಸಮ ಮಾಡಿದನೋ ಆವಾಗ ಆ ಸೈಟ್ ದಾಖಲೆಗೆ ಗ್ರಾಮಸ್ಥರು ಮುಂದಾಗಿದ್ದರು. ಆವಾಗ ಬದುಕಿದ್ದ ಸೀನಪ್ಪ ಮೃತಪಟ್ಟಿದ್ದಾನೆಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದು ಕಂಡು ಬಂದಿದೆ. ಸದ್ಯ ವೃದ್ದ ಸೀನಪ್ಪ ಮತ್ತು ಆತನ ಪತ್ನಿ ಅನೇಕ ವರ್ಷಗಳ ಹಿಂದೆ ಸರಕಾರ ಕೊಟ್ಟಿರುವ ಸೈಟ್ ಪಡೆಯುವುದ್ದಕ್ಕಾಗಿ ಪರದಾಡುವಂತಾಗಿದೆ. ಈಗಾಗಲೇ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ಎಫ್ಐಆರ್ ಕೂಡ ಆಗಿದೆ.
ವಿಶ್ವನಾಥ್ ಶೆಟ್ಟಿ ವಿರುದ್ದ ಎಫ್ ಐ ಆರ್ ದಾಖಲು ಆಗುತ್ತಿದ್ದಂತೆ ಆತ ನಾಪತ್ತೆಯಾಗಿದ್ದಾನೆ. ಹೀಗೆ ತನ್ನ ಹಣ ಮತ್ತು ರಾಜಕೀಯ, ತೋಳ್ಬಲ ಬಳಸಿಕೊಂಡು ವೃದ್ದ ದಲಿತ ದಂಪತಿಗಳ ಮೇಲೆ ದೌರ್ಜನ್ಯ ಮಾಡಿದ್ದಾನೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಸದ್ಯ ವಂಚನೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿ ವೃದ್ಧ ದಂಪತಿಗಳಿಗೆ ನ್ಯಾಯಕೊಡಬೇಕೆಂದು ಒತ್ತಾಯಿಸಿದ್ದಾರೆ.
ನಗರ ಪಟ್ಟಣದಲ್ಲಿ ಈ ಪೋರ್ಜರಿ ದಂಧೆ ನಡೆಯುವುದು ಕಾಮನ್ ಆಗಿತ್ತು. ಆದರೆ ಈಗ ಹಳ್ಳಿಯಲ್ಲೂ ಈ ನಕಲಿ ದಾಖಲೆ ಸೃಷ್ಟಿಸಿ ಸೈಟ್ ಜಮೀನು ಗುಳಂ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿವೆ. ವೃದ್ದ ದಲಿತ ದಂಪತಿಗಳಿಗೆ ಸೇರಿದ ಸೈಟ್ ಈಗ ವಿಶ್ವನಾಥ ಶೆಟ್ಟಿ ಹೆಸರಿಗೆ ವರ್ಗಾವಣೆ ಆಗಿದೆ. ಈ ವಂಚನೆ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಿ, ವೃದ್ಧ ದಂಪತಿಗಳ ಸೈಟ್ ಅವರಿಗೆ ವಾಪಸ್ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Mon, 27 March 23