ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್ ಪ್ರಪೋಸಲ್ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್
ಪ್ರೇಮ ನಿವೇದನೆ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಬಿಯರ್ ಬಾಟಲ್ ಚೂರಿನಿಂದ ಇರಿದಿದ್ದಾನೆ. ಶಿವಮೊಗ್ಗದ ತೀರ್ಥಹಳ್ಳಿ ಬಳಿ ಪ್ರೇಮಿಗಳ ದಿನದಂದೇ ಘಟನೆ ನಡೆದಿದೆ. ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಘಟನೆ ನಂತರ ಯುವತಿ ಕಡೆಯವರಿಂದ ಯುವಕನ ಮೇಲೂ ಹಲ್ಲೆ ನಡೆದಿದ್ದು, ಅವನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ, ಫೆಬ್ರವರಿ 16: ಲವ್ ಪ್ರಪೋಸಲ್ ಒಪ್ಪದಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಬಿಯರ್ ಬಾಟಲ್ ಚೂರಿನಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಗ್ರಾಮದಲ್ಲಿ ನಡೆದಿದೆ. ಪ್ರೇಮಿಗಳ ದಿನವಾದ ಫೆ.14ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಯುವಕ ಸ್ವರೂಪ್ ವಿರುದ್ಧ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆರೋಪಿ ಯುವಕ ಪ್ರೇಮಿಗಳ ದಿನಾಚರಣೆಯಂದು ಯುವತಿ ಬಳಿ ತನ್ನ ಪ್ರೇಮ ನಿವೇದನೆ ಮಾಡಿದ್ದ. ಆದರೆ ಯುವತಿ ಆತನ ಪ್ರಪೋಸಲ್ ಒಬ್ಬಪದ ಕಾರಣ ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿಯ ಕೈ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆಗೆ ಪಟ್ಟಣದ ಜೆ.ಸಿ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಣಿಪಾಲಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ: ಸೆಪ್ಟಿಕ್ ಟ್ಯಾಂಕ್ನಲ್ಲಿದ್ದಿದ್ದು ಸಿಯಾಳ ಶವ, ಕೊಲೆ ಮಾಡಿದ್ದು ಆಕೆಯ ಪ್ರೇಮಿ, ಅಂತೂ ಪ್ರಕರಣ ಇತ್ಯರ್ಥ
ಯುವತಿ ಕಡೆಯವರಿಂದ ಯುವಕನ ಮೇಲೂ ಹಲ್ಲೆ
ಇನ್ನು ತನ್ನ ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟಲಿ ಚೂರಿನಿಂದ ಸ್ವರೂಪ್ ಇರಿದ ವಿಚಾರ ಗೊತ್ತಾಗುತ್ತಿದ್ದಂತೆ ಇತ್ತ ಯುವಕನ ಮೇಲೂ ಹಲ್ಲೆ ನಡೆದಿದೆ. ಗಾಯಾಳು ಯುವತಿಯ ಕಡೆಯವರು ಸ್ವರೂಪ್ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ಆತನಿಗೂ ತಲೆ ಭಾಗ ಸೇರಿ ಕೆಲವೆಡೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.