AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಚಿನ್ನದಂಗಡಿ ದರೋಡೆಕೋರರ ಬಂಧನಕ್ಕೆ ಹೆದ್ದಾರಿಯೇ ಬಂದ್! ಪೊಲೀಸರ ಜತೆಗೂಡಿ ಸ್ಥಳೀಯರ ಸಿನಿಮೀಯ ಚೇಸಿಂಗ್

ತುಮಕೂರಿನ ಜಗದಂಬಾ ಜ್ಯುವೆಲ್ಲರಿ ಶಾಪ್​ನಲ್ಲಿ ಸೋಮವಾರ ನಡೆದ ದರೋಡೆ ಭೇದಿಸಿ ತಕ್ಷಣವೇ ದರೋಡೆಕೋರರನ್ನು ಹಿಡಿಯುವಲ್ಲಿ ಸ್ಥಳೀಯರು ಸಿನಿಮೀಯ ಸಾಹಸ ಮೆರೆದಿದ್ದಾರೆ. ದರೋಡೆಕೋರರನ್ನು ಸಿನಿಮಾ ರೀತಿಯಲ್ಲಿ ಕಾರಿನಲ್ಲಿ ಬೆನ್ನಟ್ಟಿದ ಸ್ಥಳೀಯರು ಪೊಲೀಸರ ಜತೆ ಕೈಜೋಡಿಸಿದ್ದರಿಂದ ಕಳ್ಳರ ಸೆರೆ ಸುಲಭವಾಗಿದೆ. ಸ್ಥಳೀಯರ ಸಾಹಸ ಹಾಗೂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯ ರೋಚಕ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.

ತುಮಕೂರು: ಚಿನ್ನದಂಗಡಿ ದರೋಡೆಕೋರರ ಬಂಧನಕ್ಕೆ ಹೆದ್ದಾರಿಯೇ ಬಂದ್! ಪೊಲೀಸರ ಜತೆಗೂಡಿ ಸ್ಥಳೀಯರ ಸಿನಿಮೀಯ ಚೇಸಿಂಗ್
ದರೋಡೆಕೋರರ ಸಿನಿಮೀಯವಾಗಿ ಕಾರಲ್ಲಿ ಚೇಸ್ ಮಾಡಿದ ಸ್ಥಳೀಯರುImage Credit source: tv9
Jagadisha B
| Edited By: |

Updated on:Feb 24, 2026 | 10:44 AM

Share

ತುಮಕೂರು, ಫೆಬ್ರವರಿ 24: ಸಿನಿಮಾ ಕಥೆಯನ್ನೇ ಮೀರಿಸುವ ರೋಚಕ ಚೇಸಿಂಗ್ ದೃಶ್ಯಕ್ಕೆ ತುಮಕೂರು (Tumakuru) ಜಿಲ್ಲೆ ಸೋಮವಾರ ಸಾಕ್ಷಿಯಾಗಿದೆ. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ಜಗದಂಬಾ ಜ್ಯುವೆಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ನಡೆದ ಕಾರ್ಯಾಚರಣೆ ವೇಳೆ, ರಾಷ್ಟ್ರೀಯ ಹೆದ್ದಾರಿಯನ್ನೇ ಕೆಲಕಾಲ ಬಂದ್ ಮಾಡಲಾಗಿತ್ತೆಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಸ್ಥಳೀಯರ ಸಾಹಸಮಯ ಚೇಸಿಂಗ್ ಮತ್ತು ಪೊಲೀಸರ ಕ್ಷಿಪ್ರ ಕ್ರಮದಿಂದ ನಾಲ್ವರು ಆರೋಪಿಗಳು ಕೊನೆಗೂ ಬಲೆಗೆ ಬಿದ್ದಿದ್ದಾರೆ.

ಫೆಬ್ರವರಿ 22ರಂದು ಮಧ್ಯಾಹ್ನ ನಡೆದ ದರೋಡೆ ಬಳಿಕ ಬೊಲೇರೋ ಕಾರಿನಲ್ಲಿ ಪರಾರಿಯಾದ ಆರೋಪಿಗಳನ್ನು ಸ್ಥಳೀಯರು ಸುಮಾರು 8ರಿಂದ 10 ನಿಮಿಷಗಳ ಕಾಲ, ಅಂದಾಜು 15 ಕಿಲೋಮೀಟರ್‌ಗಳಷ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆನ್ನಟ್ಟಿದ್ದರು. ಆರೋಪಿಗಳ ಕಾರು ತಾವರೆಕೆರೆಯವರೆಗೆ ತಲುಪಿತ್ತು. ಇದೇ ವೇಳೆ ಚೇಸಿಂಗ್ ಮಾಡಿದ ಸ್ಥಳೀಯರು ಪೊಲೀಸರಿಗೆ ದರೋಡೆಕೋರರ ವಾಹನದ ಮಾಹಿತಿ ನೀಡಿದ್ದರು.

ವಿಡಿಯೋ ಇಲ್ಲಿ ನೋಡಿ

ಹೆದ್ದಾರಿ ಬಂದ್, ಬ್ಯಾರಿಕೇಡ್ ಹಾಕಿ ಬಲೆ

ಮಾಹಿತಿ ತಿಳಿದ ಪೊಲೀಸರು ತಾವರೆಕೆರೆಯಲ್ಲಿ ತಕ್ಷಣ ಬ್ಯಾರಿಕೇಡ್ ಹಾಕಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಆರೋಪಿಗಳಿಗೆ ಬಲೆ ಬೀಸಿದರು. ಆದರೆ ಪೊಲೀಸರು ಅಲರ್ಟ್ ಆಗಿರುವುದನ್ನು ಗಮನಿಸಿದ ಆರೋಪಿಗಳು ಹೆದ್ದಾರಿಯಲ್ಲೇ ಯೂ-ಟರ್ನ್ ತೆಗೆದುಕೊಂಡು ತಪ್ಪಿಸಿಕೊಂಡರು. ಕೆಲಕಾಲ ಪೊಲೀಸರ ಕೈಗೂ ಸಿಗದಂತೆ ಪರಾರಿಯಾದರು.

ಕಾಡಿಗೆ ಪರಾರಿ, ರಾತ್ರೋರಾತ್ರಿ ಕುಂಬಿಂಗ್

ತುಮಕೂರು ಜಿಲ್ಲೆ ಬಿಟ್ಟು ಓಡಿಹೋಗಲು ಸಾಧ್ಯವಾಗದೆ ಆರೋಪಿಗಳು ಹುಯಿಲು ದೊರೆ ಅರಣ್ಯ ಪ್ರದೇಶಕ್ಕೆ ತೆರಳಿ ಅಡಗಿಕೊಂಡರು. ಮಾಹಿತಿ ಆಧರಿಸಿ ಪೊಲೀಸರು ರಾತ್ರೋರಾತ್ರಿ ಕಾಡಿನಲ್ಲಿ ಕುಂಬಿಂಗ್ ಕಾರ್ಯಾಚರಣೆ ನಡೆಸಿದರು.

ಮೊದಲಿಗೆ ಡುಂಗರ್ ಸಿಂಗ್ ಎಂಬಾತ ಪೊಲೀಸರ ಬಲೆಗೆ ಬಿದ್ದ. ಬಳಿಕ ಮಧ್ಯರಾತ್ರಿ ಮಹೇಂದ್ರ ಸಿಂಗ್ ಹಾಗೂ ಮಧು ಸಿಂಗ್ ಬಂಧಿತರಾದರು. ಮುಂಜಾನೆ ಅದೇ ಕಾಡಿನಲ್ಲಿ ಅರವಿಂದ್ ಕೂಡ ಪತ್ತೆಯಾಗಿದ್ದು, ಅರಣ್ಯದಲ್ಲಿದ್ದ ಮುರಿದು ಬಿದ್ದ ಬೃಹತ್ ಮರದ ಕೆಳಗೆ ಚಿನ್ನಾಭರಣಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಯಿತು.

ಚಿನ್ನ ಸಮೇತ ಆರೋಪಿಗಳ ಬಂಧನ

ಪೊಲೀಸರು ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ತುಮಕೂರು ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ

ಸ್ಥಳೀಯರ ಧೈರ್ಯ ಹಾಗೂ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮೀಯ ಚೇಸಿಂಗ್‌ನ ರೋಚಕ ದೃಶ್ಯಗಳು ಇದೀಗ ವೈರಲ್ ಆಗುತ್ತಿದ್ದು, ಗಮನ ಸೆಳೆಯುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Tue, 24 February 26