ಹುಚ್ಚಾಟ ಮೆರೆದು ದಾರುಣ ಅಂತ್ಯಕಂಡ ಪಾಗಲ್ ಪ್ರೇಮಿ: ನಾಗೇಂದ್ರಗೆ ಸ್ಫೋಟಕ ಸಿಕ್ಕಿದ್ದೇಗೆಂದು ಖಾಕಿ ತನಿಖೆ
ತುಮಕೂರಿನ ಶಿರಾದಲ್ಲಿ ಪ್ರೇಯಸಿಗೆ ಚಾಕುವಿನಿಂದ ಇರಿದು, ಕಾರಿನಲ್ಲಿ ಬಾಂಬ್ ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣದ ಬೆನ್ನು ಬಿದ್ದ ಪೊಲೀಸರೇ ನಾಗೇಂದ್ರನ ಹುಚ್ಚಾಟ ಕಂಡು ಶಾಕ್ ಆಗಿದ್ದಾರೆ. ಘಟನೆಗೂ ಮುನ್ನ ಪ್ರಿಯತಮೆ ರೋಂಗೆ ತೆರಳಿದ್ದ ಈತ ಸುಮಾರು 3 ಗಂಟೆಗೂ ಹೆಚ್ಚಿನ ಸಮಯ ಹೈಡ್ರಾಮಾ ನಡೆಸಿದ್ದ. ಯುವತಿಯ ಸ್ನೇಹಿತೆ ಮೇಲೆಯೂ ದಾಳಿಗೆ ಯತ್ನಿಸಿದ್ದ ಎಂಬ ಶಾಕಿಂಗ್ ವಿಚಾರ ಬಯಲಾಗಿದೆ.

ತುಮಕೂರು, ಜೂನ್ 28: ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಕಾರು ಸ್ಫೋಟಿಸಿಕೊಂಡು ಪಾಗಲ್ ಪ್ರೇಮಿ ನಾಗೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ (ಜೂನ್ 27) ನಡೆದಿತ್ತು. ಈ ಸಂಬಂಧ ತನಿಖೆ ವೇಳೆ ಬಗೆದಷ್ಟು ಶಾಕಿಂಗ್ ಮಾಹಿತಿ ಬಯಲಾಗುತ್ತಿವೆ. ಬೆಂಗಳೂರಿನಿಂದ (Bengaluru) ಕಾರಿನಲ್ಲಿ ಯುವತಿಯೋರ್ವಳನ್ನು ಈತ ಕರೆತಂದಿದ್ದ. ಮಾರ್ಗಮಧ್ಯೆ ನಾಗೇಂದ್ರ, ಯುವತಿ ನಡುವೆ ಜಗಳವಾಗಿದ್ದು, ಜಗಳದ ನಡುವೆ ಯುವತಿಗೆ ಚಾಕುವಿನಿಂದ ನಾಗೇಂದ್ರ ಇರಿದಿದ್ದ. ಕೂಡಲೇ ಕಾರಿನ ಡೋರ್ ತೆಗೆದು ಯುವತಿ ಹೊರಗಡೆ ಇಳಿದಿದ್ದಳು. ಯುವತಿ ಕಾರಿನಿಂದ ಇಳಿದಾಗ ಸಹಾಯಕ್ಕೆ ಚಾಲಕ ಕೂಡ ತೆರಳಿದ್ದು, ಈ ವೇಳೆ ಡೋರ್ ಲಾಕ್ ಮಾಡಿಕೊಂಡಿದ್ದ ನಾಗೇಂದ್ರ ಏಕಾಏಕಿ ಕಾರನ್ನು ಸ್ಫೋಟಿಸಿಕೊಂಡು ಪ್ರಾಣಬಿಟ್ಟಿದ್ದಾನೆ ಎಂಬುದು ಗೊತ್ತಾಗಿದೆ.
ಇನ್ನು ಪೊಲೀಸರ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಬಾಂಬ್ ಪತ್ತೆಯಾಗಿದ್ದು, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಬಳಿಕ ಪಾಗಲ್ ನಾಗೇಂದ್ರ ತಂದಿದ್ದ ಜೀವಂತ ಬಾಂಬ್ನ ಅಧಿಕಾರಿಗಳು ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟಿಸಿದ್ದು, ಬಾಂಬ್ ತೀವ್ರತೆ ಕಂಡು ಶಾಕ್ ಆಗಿದ್ದಾರೆ. ಬಾಂಬ್ಗೆ ಪಟಾಕಿ ಮದ್ದು ತುಂಬಿದ್ದ ಮಾಹಿತಿ ಸಿಕ್ಕಿದ್ದು, ಜಿಲೆಟಿನ್ ಇತ್ತಾ ಎಂಬ ಶಂಕೆಯೂ ವ್ಯಕ್ತವಾಗಿದೆ. ಹೀಗಾಗಿ ಇದರ ಸ್ಯಾಂಪಲ್ಸ್ ಸಂಗ್ರಹಿಸಿ ಬೆಂಗಳೂರಿನ FSLಗೆ ರವಾನಿಸಲಾಗಿದೆ. ಮತ್ತೊಂದೆಡೆ ನಾಗೇಂದ್ರಗೌಡ ಯಲ್ಲಾಪುರ ಭಾಗದಿಂದ ಬಾಂಬ್ ತಂದಿರುವ ಶಂಕೆ ವ್ಯಕ್ತವಾದ ಹಿನ್ನಲೆ ತನಿಖೆ ಚುರುಕುಗೊಳಿಸಲಾಗಿದೆ. ಯಲ್ಲಾಪುರ ಭಾಗದಲ್ಲಿ ನಾಗೇಂದ್ರ ಗೆಳೆತನ ಹೊಂದಿದ್ದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಬೈಕ್ ಖರೀದಿಸಿದ ಮರುದಿನವೇ ಭೀಕರ ಅಪಘಾತ; ದಾರುಣ ಅಂತ್ಯ ಕಂಡ ಯುವಕ
ಪ್ರೇಯಸಿಯ ಹತ್ಯೆಗೂ ಯತ್ನಿಸಿದ್ದ ನಾಗೇಂದ್ರ!
ಪಾಗಲ್ ಪ್ರೇಮಿ ನಾಗೇಂದ್ರ ತಾನು ಆತ್ಮಹತ್ಯೆ ಮಅಡಿಕೊಳ್ಳುವ ಜೊತೆಗೆ ಪ್ರೇಯಸಿಯ ಹತ್ಯೆಗೂ ಸಂಚು ರೂಪಿಸಿದ್ದ. ಹೀಗಾಗಿಯೇ ಬೆಂಗಳೂರಿನ ಜಯನಗರದಲ್ಲಿರುವ ಸಿದ್ದಾಪುರದ ಯುವತಿ ರೂಂಗೆ ಬ್ಯಾಗ್ನಲ್ಲಿ ಚಾಕು ಮತ್ತು ಬಾಂಬ್ ಇಟ್ಟುಕೊಂಡೇ ಬಂದಿದ್ದ. ಯುವತಿಯ ಕೊಠಡಿಯಲ್ಲಿ ಬರೋಬ್ಬರಿ 3 ಗಂಟೆ ಹೈಡ್ರಾಮಾವನ್ನೂ ನಡೆಸಿದ್ದ. ಬೆಳಿಗ್ಗೆ 7.50ರಿಂದ 8 ಗಂಟೆ ಸುಮಾರಿಗೆ ಯುವತಿ ರಮ್ಯಾಳ ರೂಂ ಬಾಗಿಲನ್ನು ಈತ ತಟ್ಟಿದ್ದ. ಈ ವೇಳೆ ರಮ್ಯಾ ಗೆಳತಿಯೂ ಅಲ್ಲಿದ್ದಳು. ರಮ್ಯಾ ಜೊತೆ ಮದುವೆ ಬಗ್ಗೆ ಮಾತಾಡಿದ್ದ ನಾಗೇಂದ್ರ, ನೀನು ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದೀಯ. ನಿನ್ನನ್ನು ಜೀವಂತವಾಗಿ ಬಿಡೋದಿಲ್ಲ ಎಂದು ಚಾಕು ತೆಗೆದಿದ್ದ. ಈ ವೇಳೆ ಇಬ್ಬರ ನಡುವೆ ಎಂಟ್ರಿ ಕೊಟ್ಟ ರಮ್ಯಾ ಗೆಳತಿ ಇಲ್ಲಿ ಗಲಾಟೆ ಮಾಡಬೇಡ, ಸರಿ ಇರೊದಿಲ್ಲ. ಮರ್ಯಾದೆಯಿಂದ ಹೊರಗೆ ಹೊಗು ಎಂದಿದ್ದಳು. ರಮ್ಯಾ ಗೆಳತಿ ಮಾತಿಗೆ ಮತ್ತಷ್ಟು ಕೆರಳಿದ ನಾಗೇಂದ್ರ, ಚಾಕುವಿನಿಂದ ಆಕೆ ಮೇಲೆಯೂ ದಾಳಿಗೆ ಮುಂದಾಗಿದ್ದ ಎಂಬುದು ಗೊತ್ತಾಗಿದೆ. ಕೆರಳಿದ್ದ ನಾಗೇಂದ್ರನ ಸಮಾಧಾನ ಮಾಡಿದ್ದ ರಮ್ಯಾ, ನಿನ್ನೊಂದಿಗೆ ನಾನು ಬರುತ್ತೇನೆ, ಮದುವೆಯಾಗುತ್ತೇನೆ ಎಂದಿದ್ದಳು. ರಮ್ಯಾಳ ಈ ಮಾತಿನ ಬಳಿಕ ತಣ್ಣಗಾದ ನಾಗೇಂದ್ರ, ಸರಿಸುಮಾರು ಮೂರುವರೆ ಗಂಟೆಗಳ ಕಾಲ ರಮ್ಯಾ ಜೊತೆ ಅದೇ ರೂಂನಲ್ಲಿದ್ದ. ಬಳಿಕ ಕಾರ್ ಬುಕ್ ಮಾಡಿ ರಮ್ಯಾ ಜೊತೆಗೇ ಅಂಕೋಲಾದ ಕಡೆ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ.
ಗಾಯಗೊಂಡಿದ್ದ ಯುವತಿ ಡಿಸ್ಚಾರ್ಜ್
ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವತಿ ರಮ್ಯಾಳನ್ನು ತುಮಕೂರು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಮುಂಜಾನೆಯೇ ಆಸ್ಪತ್ರೆಯಿಂದ ಆಕೆಯನ್ನು ಸೋದರನ ಸ್ನೇಹಿತರು, ಸಂಬಂಧಿಕರು ಕರೆದೊಯ್ದಿದ್ದಾರೆ. ತಲೆ, ಕೈ ಭಾಗಕ್ಕೆ ಚಾಕುವಿನಿಂದ ನಾಗೇಂದ್ರ ಇರಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Sun, 28 June 26



