‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಯುವಕನ ತಾಯಿ!
ತುಮಕೂರಿನ ಡಿ. ರಾಂಪುರ ಯುವಕ ಮನೋಜ್ ಇರಾನ್ನಲ್ಲಿ ಮರ್ಚೆಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್-ಇರಾನ್ ಯುದ್ಧದ ಕಾರಣ ಸಂಪರ್ಕ ಕಡಿತಗೊಂಡು ಸಿಲುಕಿಕೊಂಡಿದ್ದಾರೆ. ಮಗನನ್ನು ಸುರಕ್ಷಿತವಾಗಿ ಕರೆತರಲು ಕುಟುಂಬ ಮನವಿ ಮಾಡಿದೆ. ಸರ್ಕಾರಿ ಅಧಿಕಾರಿಗಳು ಮನೋಜ್ ಸುರಕ್ಷಿತನಾಗಿದ್ದಾನೆ ಎಂದು ಕುಟುಂಬಕ್ಕೆ ಭರವಸೆ ನೀಡಿ, ಶೀಘ್ರದಲ್ಲೇ ಕರೆತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತುಮಕೂರು, ಮಾರ್ಚ್ 03: ಉದ್ಯೋಗ ಅರಸಿ ಇರಾನ್ಗೆ ತೆರಳಿದ್ದ ತುಮಕೂರಿನ (Tumkuru) ಯುವಕ ಯುದ್ಧ ಪರಿಸ್ಥಿತಿಯ ನಡುವೆ ಅಲ್ಲಿಯೇ ಸಿಲುಕಿರುವ ಘಟನೆ ಆತಂಕ ಮೂಡಿಸಿದ್ದು, ಆತನನ್ನು ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ನಿವಾಸಿ ಮನೋಜ್ (25) ಇರಾನ್ನಲ್ಲಿ ಮರ್ಚೆಂಟ್ ನೇವಿ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್–ಇರಾನ್ ಯುದ್ಧ ಆರಂಭವಾದ ನಂತರ ಸಂಪರ್ಕ ಕಡಿತಗೊಂಡಿರುವುದು ಕುಟುಂಬದವರಲ್ಲಿ ಕಳವಳ ಉಂಟುಮಾಡಿದೆ.
ನಾನು ಸೇಫಾಗಿದ್ದೀನಿ ಎಂದಿರುವ ಯುವಕ
ಮನೋಜ್ ರೈತ ಶಿವಕುಮಾರ್ ಹಾಗೂ ಲೀಲಾವತಿ ದಂಪತಿಯ ಪುತ್ರ. ತುಮಕೂರಿನ ಸಿಐಟಿ ಕಾಲೇಜಿನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ನಂತರ, ಆನ್ಲೈನ್ ಮೂಲಕ ಇರಾನ್ನ ಮರ್ಚೆಂಟ್ ನೇವಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ. ಉತ್ತರ ಪ್ರದೇಶದಲ್ಲಿ ತರಬೇತಿ ಪಡೆದು ಸುಮಾರು ಎಂಟು ತಿಂಗಳ ಹಿಂದೆ ಇರಾನ್ಗೆ ತೆರಳಿದ್ದಾನೆ.
ಅಲ್ಲಿ ಪೋರ್ಟ್ನಿಂದ ಕಾರ್ಮಿಕರನ್ನು ತೈಲ ನಿಕ್ಷೇಪ (ರಿಗ್) ಪ್ರದೇಶಗಳಿಗೆ ಕರೆದೊಯ್ಯುವುದು ಹಾಗೂ ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಜೆ ಪಡೆದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಯುದ್ಧ ಆರಂಭಗೊಂಡಿದೆ. ಯುದ್ಧ ಪ್ರಾರಂಭವಾದ ನಂತರ ಮನೋಜ್ ಒಮ್ಮೆ ಮಾತ್ರ ಕರೆ ಮಾಡಿ, ನಾನು ಸುರಕ್ಷಿತವಾಗಿದ್ದೇನೆ, ನಾನು ಇರುವ ಸ್ಥಳದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಾಯಿಗೆ ಧೈರ್ಯ ತುಂಬಿದ್ದ. ಆದರೆ ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ ದುಬೈನಲ್ಲಿ ಎಂಜಾಯ್ ಮಾಡ್ತಿರುವಾಗ್ಲೇ ದಾಳಿ ಆಯ್ತು: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಟಿವಿ9 ಜೊತೆ ಮಾತನಾಡಿದ ಮನೋಜ್ ತಾಯಿ ಲೀಲಾವತಿ, ತಮ್ಮ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಮನವಿ ಮಾಡಿದ್ದಾರೆ. ನಮ್ಮ ಮಗ ಕ್ಷೇಮವಾಗಿ ಮನೆಗೆ ಬರಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಧಿಕಾರಿಗಳು ಕುಟುಂಬದವರನ್ನು ಸಂಪರ್ಕಿಸಿ, ಮನೋಜ್ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಅವನನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Tue, 3 March 26