ಕೊನೆಗೂ ಎಚ್ಚೆತ್ತ ಪುರಾತತ್ವ ಇಲಾಖೆ: ಸೋರುತ್ತಿದ್ದ ಬನವಾಸಿ ದೇಗುಲದ ದುರಸ್ತಿ ಕಾರ್ಯ ಆರಂಭ
ಸಾರ್ವಜನಿಕರ ತೀವ್ರ ಪ್ರತಿಭಟನೆಯ ಎಚ್ಚರಿಕೆಯ ಬೆನ್ನಲ್ಲೇ ಎಚ್ಚೆತ್ತ ಪುರಾತತ್ವ ಇಲಾಖೆಯು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಐತಿಹಾಸಿಕ 1500 ವರ್ಷ ಹಳೆಯ ಬನವಾಸಿ ಮಧುಕೇಶ್ವರ ದೇವಸ್ಥಾನದ ಮೇಲ್ಛಾವಣಿ ಸೋರಿಕೆ ದುರಸ್ತಿ ಕಾರ್ಯವನ್ನು ಆರಂಭಿಸಿದೆ. ಹೀಗಾಗಿ ಇನ್ನಾದರೂ ದೇಗುಲ ಸೋರುವುದು ನಿಲ್ಲಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

ಶಿರಸಿ, ಜೂನ್ 17: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ವರದಾ ನದಿ ದಡದಲ್ಲಿರುವ 1500 ವರ್ಷಗಳ ಇತಿಹಾಸಿರುವ ಮಧುಕೇಶ್ವರ ದೇವಸ್ಥಾನ ಕನ್ನಡಿಗರ ಅಸ್ಮಿತೆ ಹಾಗೂ ಸಾಂಸ್ಕೃತಿಕ ಪ್ರತೀಕ. ಹೀಗಾಗಿಯೇ ಇಲ್ಲಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡುತ್ತಾರೆ. ಹೀಗಿದ್ದರೂ ಕಳೆದ ಕೆಲ ವರ್ಷಗಳಿಂದ ದೇವಸ್ಥಾನ ಸೋರುತ್ತಿತ್ತು. ಎಲ್ಲವನ್ನೂ ಕಂಡು ಕಾಣದಂತಿದ್ದ ಪುರಾತತ್ವ ಇಲಾಖೆಯ ವಿರುದ್ಧ ಸಿಡಿದೆದ್ದ ಸಾರ್ವಜನಿಕರು ಅರೆ ಬೆತ್ತಲೆ ಹೋರಾಟಕ್ಕೆ ಮುಂದಾಗಿದ್ದರು. ಈ ಬಗ್ಗೆ ಟಿವಿ9 ಕೂಡ ವರದಿ ಮಾಡಿತ್ತು. ಆ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಕೊನೆಗೂ ಕ್ರಮ ಕೈಗೊಂಡಿದೆ.
ಕಳೆದೆರಡು ವರ್ಷಗಳಿಂದ ದೇವಸ್ಥಾನ ನಿರಂತರ ಸೋರುತ್ತಿದ್ದ ಹಿನ್ನೆಲೆ ಟರ್ಪಾಲ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಆದರಿಂದ ಇದರಿಂದ ದೇಗುಲದ ಅಂದವೇ ಹಾಳಾಗಿದೆ ಎಂದು ಭಕ್ತರು, ಸ್ಥಳೀಯರು ಆಕ್ರೊಶ ಹೊರಹಾಕಿದ್ದರು. ಸದ್ಯ ಇದರ ದುರಸ್ತಿಗೆ ಪುರಾತತ್ವ ಇಲಾಖೆ ಮುಂದಾಗಿದ್ದು, ವಾಟರ್ ಪ್ರೂಫ್ ಪೇಂಟಿಂಗ್ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಇನ್ನಾದರೂ ದೇಗುಲ ಸೋರುವುದು ನಿಲ್ಲಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಕರಾವಳಿಯ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ! ಶರಾವತಿ ಹಿನ್ನೀರಿನ ಸೌಂದರ್ಯ ಬಣ್ಣಿಸಿ ಪೋಸ್ಟ್
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಹಳೆಯ ವಾಸ್ತು ಶಿಲ್ಪ ಹೊಂದಿರುವ ಈ ಮಧುಕೇಶ್ವರ ದೇವಸ್ಥಾನ ಸೋರುತ್ತಿದ್ದ ಹಿನ್ನೆಲೆ ಸೋರಿಕೆ ತಡೆಯಲು ಈ ಹಿಂದೆ ಕೆಮಿಕಲ್ ಹಾಕಲಾಗಿತ್ತು. ಆದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಬಳಿಕ ತಗಡಿನ ಶೇಡ್ ಕೂಡ ಹಾಕಲಾಗಿತ್ತಾದರೂ ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ 50 ಲಕ್ಷ ವೆಚ್ಚದಲ್ಲಿ ಇನ್ನೊಂದು ಹೊಸ ಪ್ರಯೋಗ ಮಾಡುವುದಾಗಿ ಕಳೆದ ಮೂರು ವರ್ಷಗಳಿಂದ ಪುರಾತತ್ವ ಇಲಾಖೆ ಹೇಳುತ್ತಲೇ ಬಂದಿತ್ತು. ಆದರೆ ದುರಸ್ತಿಗೆ ಮಾತ್ರ ಮುಂದಾಗಿರಲಿಲ್ಲ. ಹೀಗಾಗಿ ಇಲಾಖೆ ವಿರುದ್ಧ ಸಿಡಿದೆದ್ದಿದ್ದ ಸ್ಥಳೀಯರು ಬನವಾಸಿಯಲ್ಲಿ ಅರೆ ಬೆತ್ತಲೆ ಮೆರವಣಿಗೆ ಮಾಡುವುದಾಗಿ ಎಚ್ಚರಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



