ಪೊಲೀಸರ ಮೇಲೆ ಕೈಮಾಡಿದ್ದ ರೌಡಿ ಮಚ್ ಮಂಜ ಕೊನೆಗೂ ಅರೆಸ್ಟ್!
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಸಾರ್ವಜನಿಕವಾಗಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದ ಕುಖ್ಯಾತ ರೌಡಿ ಶೀಟರ್ ಮಚ್ ಮಂಜನನ್ನು ಕೊನೆಗೂ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಲಾಗಿದೆ. ಈ ಘಟನೆ ವೇಳೆ ಜೀಪಿನಿಂದ ಇಳಿಯದೆ ನಿರ್ಲಕ್ಷ್ಯ ವಹಿಸಿದ್ದ ಪಿಎಸ್ಐ ಬಸವರಾಜ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ.

ಉತ್ತರ ಕನ್ನಡ, ಜೂನ್ 22: ಜಿಲ್ಲೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರ್ಪ ತೋರಿದ್ದ ಕುಖ್ಯಾತ ಮಾಜಿ ರೌಡಿ ಶೀಟರ್ ಮಚ್ ಮಂಜನನ್ನು ಹಳಿಯಾಳ (Haliyal) ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಈತನನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವದಲ್ಲಿ ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿ ಸೆರೆಹಿಡಿದಿದೆ.
ಮುಖ್ಯಾಂಶಗಳು
- ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ರೌಡಿ ಮಚ್ ಮಂಜನನ್ನು ಬಂಧಿಸಲಾಗಿದೆ.
- ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾದ ಪ್ರಮುಖ ಕಾರ್ಯಾಚರಣೆ.
- ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹಳಿಯಾಳ ಪಿಎಸ್ಐ ಬಸವರಾಜ್ ಅಮಾನತುಗೊಂಡಿದ್ದಾರೆ.
ವೈರಲ್ ಆಗಿದ್ದ ರೌಡಿಯ ಹುಚ್ಚಾಟ
ಕಳೆದ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಈ ಹೈಡ್ರಾಮಾ ನಡೆದಿತ್ತು. ಹೆಂಡತಿಯ ವಿಚ್ಛೇದನಕ್ಕೆ ಪೊಲೀಸರೇ ಕಾರಣ ಎಂಬ ಸಿಟ್ಟಿನಲ್ಲಿ, ಕುಡಿದ ಅಮಲಿನಲ್ಲಿದ್ದ ಮಾಜಿ ರೌಡಿ ಶೀಟರ್ ಮಚ್ಚುಮಂಜ ಪೊಲೀಸ್ ಸಿಬ್ಬಂದಿಯ ಕೊರಳ ಪಟ್ಟಿ ಹಿಡಿದು ಸಾರ್ವಜನಿಕವಾಗಿಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದ. ನಡುರಸ್ತೆಯಲ್ಲೇ ಈತ ಗೂಂಡಾವರ್ತನೆ ತೋರುತ್ತಿದ್ದರೂ, ಸ್ಥಳದಲ್ಲಿದ್ದ ಆರು ಜನ ಪೊಲೀಸರು ಅಸಹಾಯಕರಾಗಿ ನಿಂತು ನೋಡುತ್ತಿದ್ದರು. ರೌಡಿಯ ಈ ಆಟಾಟೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ
ಪಿಎಸ್ಐ ಅಮಾನತು ಮತ್ತು ಸಿಬ್ಬಂದಿ ವರ್ಗಾವಣೆ
ಈ ಘಟನೆ ನಡೆದಾಗ ಸ್ಥಳಕ್ಕೆ ಆಗಮಿಸಿದ್ದ ಹಳಿಯಾಳ ಪಿಎಸ್ಐ ಬಸವರಾಜ್ ಮಬನೂರ, ತಮ್ಮದೇ ಸಿಬ್ಬಂದಿ ಮೇಲೆ ಹಲ್ಲೆಯಾಗುತ್ತಿದ್ದರೂ ಜೀಪಿನಿಂದ ಕೆಳಗೆ ಇಳಿಯದೇ ಮೂಕಪ್ರೇಕ್ಷಕರಂತೆ ಕುಳಿತಿದ್ದರು. ಪೊಲೀಸರ ಈ ಅಸಹಾಯಕ ನಡೆ ಇಲಾಖೆಗೆ ತೀವ್ರ ಮುಜುಗರ ತಂದಿಟ್ಟಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಉತ್ತರ ಕನ್ನಡ ಎಸ್ಪಿ ದೀಪನ್, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಿಎಸ್ಐ ಬಸವರಾಜ್ ಅವರನ್ನು ಅಮಾನತು ಮಾಡಿದ್ದರು. ಇದರೊಂದಿಗೆ ಠಾಣೆಯ ಮತ್ತೂ 8 ಜನ ಪೊಲೀಸ್ ಸಿಬ್ಬಂದಿಯನ್ನು ಬೇರೆಡೆಗೆ ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




