ಉತ್ತರ ಕನ್ನಡದಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ನಾಲ್ಕು ತಾಲೂಕಿನಲ್ಲಿ 36 ಗಂಟೆ ನಿರಂತರ ಮಳೆ ಸುರಿದಿದೆ. ಪರಿಣಾಮ ಹಲವೆಡೆ ಅವಾಂತರ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆಯಲಿದ್ದು, ಹೀಗಾಗಿ ಜುಲೈ 2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಜನರಿಗೆ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ
- ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.2ರವರೆಗೆ ಆರೆಂಜ್ ಅಲರ್ಟ್
- ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಮನವಿ
ಕಾರವಾರ, ಜೂನ್ 29: ಕರ್ನಾಟಕದಲ್ಲಿ ಬಹುತೇಕ ಕಡೆ ಮಳೆ (Rain) ಇಲ್ಲದೆ ಬರಗಾಲದ ಛಾಯೆ ಆವರಿಸಿದೆ. ಆದರೆ ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಮಾತ್ರ ಮಳೆ ಅಬ್ಬರಿಸುತ್ತಿದೆ. ಧಾರಾಕಾರ ಮಳೆಗೆ ಕೆಲ ಅವಾಂತರಗಳು ಸಂಭವಿಸಿವೆ. ರಸ್ತೆಗಳೆಲ್ಲಾ ಹಳ್ಳದಂತಾಗಿದ್ದು, ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೆಶ್ವರನ ಗರ್ಭಗುಡಿಗೆ ನೀರು ನುಗ್ಗಿದೆ. ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ನದಿ ದಡ ಹಾಗೂ ಕಡಲತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದು, ಜಿಲ್ಲೆಯಲ್ಲಿ ಜು.2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
36 ಗಂಟೆ ಸುರಿದ ಭಾರೀ ಮಳೆ
ಹವಾಮಾನ ಇಲಾಖೆ ವರದಿಯ ಪ್ರಕಾರ ಕಳೆದ 36 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿದಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಕಡೆ ಜಲಪ್ರಳಯ ಉಂಟಾಗಿದೆ. ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ಗರ್ಭಗುಡಿಗೆ ನೀರು ನುಗ್ಗಿ ಆತ್ಮಲಿಂಗ ಜಾಲವೃತವಾಗಿದೆ. ಹಾಗಾಗಿ ಆತ್ಮಲಿಂಗ ಸ್ಪರ್ಶ್ ದರ್ಶನಕ್ಕೆ ಮಧ್ಯಾಹ್ನ 12 ಗಂಟೆ ಬಳಿಕ ನಿರ್ಬಂಧ ಹೇರಲಾಯಿತು.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ
ಅಷ್ಟೇ ಅಲ್ಲದೆ ನಿತ್ಯ ಮಧ್ಯಾಹ್ನ 12;30ರ ಸುಮಾರಿಗೆ ನಡೆಯುವ ಮಹಾಪೂಜೆ ಮಾಡುವುದಕ್ಕೂ ಆಗದ ಪರಿಸ್ಥಿತಿ ಉಂಟಾಯಿತು. ಬಳಿಕ ಪಂಪಸೆಟ್ ಮೂಲಕ ಗರ್ಭ ಗುಡಿಯಲ್ಲಿನ ನೀರನ್ನ ಹೊರತೆಗೆಯಲಾಯ್ತು. ಇನ್ನು ಗೋಕರ್ಣದ ಪ್ರಮುಖ ಬಿದಿಗಳು ಕೆರೆಯಂತಾಗಿದ್ದು, ದೂರ ದೂರಿನಿಂದ ಬಂದಿದ್ದ ಪ್ರವಾಸಿಗರು, ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು.
ಕುಮಟಾ -ಸಿದ್ಧಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತ
ಮಳೆಯ ಅಬ್ಬರ ಕೇವಲ ಗೋಕರ್ಣಕ್ಕೆ ಮಾತ್ರ ಸೀಮಿತವಾಗಿದೆ ಜಿಲ್ಲೆಯ ಕರಾವಳಿಯ ನಾಲ್ಕು ತಾಲೂಕಿನಲ್ಲಿ 36 ಗಂಟೆ ನಿರಂತರ ಮಳೆ ಸುರಿದಿದೆ. ಇದರ ಪರಿಣಾಮದಿಂದ ಕುಮಟಾ -ಸಿದ್ಧಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು, ಕುಮಟಾ ತಾಲೂಕಿನ ವಾಲಗಳಿ ಬಳಿ ದ್ವಿಚಕ್ರ ವಾಹನ ಸವಾರರು ಮತ್ತು ಕೆಲ ಬೃಹತ್ ವಾಹನಗಳು ಪರದಾಡಿದರು. ಇನ್ನಷ್ಟು ಮಳೆ ಸುರಿದರೆ ಅಕ್ಕಪಕ್ಕದ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿ ಆಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಮಳೆ ಅಬ್ಬರ ಕಡಿಮೆ ಆದ ಹಿನ್ನೆಲೆ ಸಮಸ್ಯೆ ತಪ್ಪಿದೆ.
ಇದನ್ನೂ ಓದಿ: ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 36 ಗಂಟೆ ಸುರಿದ ಮಳೆಯಿಂದ ಭಾರೀ ಅವಾಂತರಗಳು ಸಂಭವಿಸಿದೆ. ಈ ಮಧ್ಯೆ ಮತ್ತೆ ಮಳೆ ಸುರಿದರೆ ಯಾವ ರೀತಿ ಅನಾಹುತ ಆಗಬಹುದೆಂಬ ಆತಂಕ ಜನರಿಗೆ ಕಾಡುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಮಳೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




