ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನವನ್ನೇ ಬದಲಾಯಿಸಿದ್ದೇಗೆ ಕಮಲಾಕರ್ ಭಟ್ ಪರಿಚಯ? ಸತ್ಯ ಬಿಚ್ಚಿಟ್ಟ ಸ್ನೇಹಿತೆ
ಒಂದು ಕಾಲದಲ್ಲಿ 10 ರೂ. ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನ ಜ್ಯೋತಿಷಿ ಕಮಲಾಕರ ಭಟ್ ಪರಿಚಯದಿಂದ ಸಂಪೂರ್ಣ ಬದಲಾಗಿತ್ತು. ಹಣದ ಮೇಲಿನ ವ್ಯಾಮೋಹಕ್ಕೆ ಒಳಗಾಗಿದ್ದ ಈಕೆ ಪ್ರೀತಿಸಿ ಮದುವೆಯಾದವನಿಗೇ ಕೈಕೊಟ್ಟು ಬಂದಿದ್ದಳು. ಹೆತ್ತ ಮಕ್ಕಳ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದ ಸುಚಿತ್ರಾ, ಕಮಲಾಕರ್ ಭಟ್ನಿಂದ ಬೈಕ್ ಮತ್ತು ಕಾರುಗಳನ್ನು ಉಡುಗೊರೆಯಾಗಿ ಪಡೆದಿದ್ದಳು. ಆತನ ಆಶ್ರಮವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದಳು ಎಂಬ ವಿಚಾರವೀಗ ಬಯಲಾಗಿದೆ.

ಕಾರವಾರ, ಫೆಬ್ರವರಿ 10: ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ಸುಚಿತ್ರಾಳ ಕುರಿತ ಒಂದೊಂದೇ ಮಾಹಿತಿಯೀಗ ಬಯಲಾಗುತ್ತಿದೆ. ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಸಿರಿವಂತರನ್ನು ಬುಟ್ಟಿಗೆ ಹಾಕಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಇದೇ ಸುಚಿತ್ರಾ ಒಂದು ಕಾಲದಲ್ಲಿ 10 ರೂಪಾಯಿಗೂ ಲಾಟರಿ ಹೊಡೆಯುತ್ತಿದ್ದಳು. ಅಷ್ಟಕ್ಕೂ ಈಕೆ ಜ್ಯೋತಿಷಿ ಕಮಲಾಕರ್ ಭಟ್ಗೆ ಪರಿಚಯವಾಗಿದ್ದು ಹೇಗೆ ಎಂಬ ಮಾಹಿತಿಯೀಗ ಬಹಿರಂಗಗೊಂಡಿದೆ. ಸುಚಿತ್ರಾಳನ್ನು ಕಮಲಾಕರ ಭಟ್ಗೆ ಪರಿಚಯಿಸಿದ್ದು ನಾನೇ ಎಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ ಸುಮಾ ಎಂಬವರು ಟಿವಿ9ಗೆ ತಿಳಿಸಿದ್ದಾರೆ.
ಕಮಲಾಕರ ಭಟ್ ಪರಿಚಯದ ಬಳಿಕ ಸುಚಿತ್ರಾ ಜೀವನವೇ ಬದಲು!
ಸಿದ್ದಾಪುರದಲ್ಲಿ ಕವಡೆ ಕಾಸಿಗೂ ಪರದಾಡುತ್ತಿದ್ದ ಸುಚಿತ್ರಾ ಕಮಲಾಕರ ಭಟ್ ಪರಿಚಯದ ನಂತರ ಹೈಫೈ ಆಗಿಬಿಟ್ಟಳು. ಒಮ್ಮೆ ಆಶ್ರಮಕ್ಕೆ ಹೋದಾಗ ನನ್ನನ್ನೇ ಯಾರೋ ಅನ್ನೋ ತರ ನೋಡಿದ್ಲು. ಕಮಲಾಕರ ಭಟ್ನ ಆಶ್ರಮವನ್ನು ಮ್ಯಾನೇಜ್ ಮಾಡ್ತಿದ್ದ ಈಕೆ ಒಂದು ಹೋಮ ಕಾರ್ಯಕ್ರಮಕ್ಕೆ ಮದುವೆ ಹೆಣ್ಣಿನ ತರ ಬಂದಿದ್ಲು. ಹೊಸ ತಾಳಿ, ಕಾಲುಂಗುರ ಧರಿಸಿ ಕಮಲಾಕರ ಭಟ್ ಜೊತೆ ಹೋಮದಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಸುಚಿತ್ರಾಳನ್ನು ಮದುವೆ ಆಗಿದ್ದೀರಾ ಎಂದು ಕಮಲಾಕರ ಭಟ್ಗೆ ಕೇಳಿದ್ದೆ. ಧರ್ಮಸ್ಥಳದ ಅಣ್ಣಪ್ಪನ ಆಣೆಗೂ ಮದುವೆಯಾಗಿಲ್ಲವೆಂದು ಈ ವೇಳೆ ಅವರು ಹೇಳಿದ್ದರು. ಆರೋಗ್ಯ ಸರಿಯಿಲ್ಲ, ಅದೆಲ್ಲ ನಂಗ್ಯಾಕೆ ಎಂದು ನನಗೆ ತಿಳಿಸಿದ್ದರು. ನನ್ನನ್ನು ಮಗಳೇ ಎಂದು ಕರೆಯುತ್ತಿದ್ದ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾಳ ಬಂಧನ ವಿಚಾರ ಕೇಳಿ ತನಗೆ ಶಾಕ್ ಆಗಿದೆ ಎಂದು ಸುಮಾ ಹೇಳಿದ್ದಾರೆ.
ಇದನ್ನೂ ಓದಿ: ಕಮಲಾಕರ ಭಟ್ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ ಬಹಿರಂಗ
ಹಣದ ದಾಹಕ್ಕೆ ಪ್ರೀತಿಸಿ ಮದುವೆ ಆಗಿದ್ದವನನ್ನೇ ತೊರೆದ ಸುಚಿತ್ರಾ
ಇನ್ನು ಐಷಾರಾಮಿ ಜೀವನದ ಕನಸು ಕಂಡಿದ್ದ ಸುಚಿತ್ರಾ ಅದನ್ನು ಪಡೆಯಲು ನಾನಾ ಸರ್ಕಸ್ ನಡೆಸಿದ್ದಳು. ಕಮಲಾಕರ್ ಭಟ್ ಮಾತ್ರವಲ್ಲದೆ ಕಲಬುರಗಿ ಜಿಲ್ಲೆಯ ಜಮೀನ್ದಾರನ ಜೊತೆ ಲವ್ ರಿಲೇಷನಲ್ಲಿದ್ದ ಈಕೆ ಆತನ ಹಣದಲ್ಲೇ ಆರ್ಕೆಸ್ಟ್ರಾ ಕೂಡ ನಡೆಸುತ್ತಿದ್ದಳು. ಸಾಲದ್ದಕ್ಕೆ ಆತನ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಬಳಿಕ ಕಮಲಾಕರ್ ಭಟ್ನಿಂದಲೂ ಸುಲಿಗೆಗೆ ಇಳಿದಿದ್ದ ಸುಚಿತ್ರಾ ಕಾರು, ಬೈಕ್ಗಳನ್ನ ಉಡುಗರೆಯಾಗಿ ಪಡೆದಿದ್ದಳು. ಈಕೆಗಾಗಿ ಜ್ಯೋತಿಷಿ ಜಮೀನು ಕೂಡ ಖರೀದಿಸಿದ್ದ ಎಂಬ ಸುದ್ದಿಯೂ ಇದೆ. ಹಣದ ಆಸೆಗೆ ಪ್ರೀತಿಸಿ ಮದುವೆಯಾಗಿದ್ದವನನ್ನೇ ತೊರೆದು ಹೋಗಿದ್ದ ಈಕೆ, ಹೆತ್ತ ಮಕ್ಕಳಿಗೂ ಹಿಂಸೆ ಕೊಡುತ್ತಿದ್ದಳು ಎಂಬ ವಿಚಾರವೀಗ ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.