ಮತಗಳ್ಳತನ ಆರೋಪ: ಸಂಸದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರ ವಿರುದ್ಧ ಜೆಡಿಎಸ್ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮತಗಳ್ಳತನದ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ. ವಿವಿಧ ರಾಜಕೀಯ ನಾಯಕರು ಈ ಘಟನೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಆಗಸ್ಟ್ 11: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಜೆಡಿಎಸ್ (JDS) ನಿಯೋಗ ಕರ್ನಾಟಕ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ. ಬೆಂಗಳೂರಲ್ಲಿ ಪ್ರತಿಭಟನೆ ವೇಳೆ ಮತಗಳ್ಳತನದ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ, ಚುನಾವಣಾ ಆಯೋಗದ ವಿರುದ್ಧವೂ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಎಂಎಲ್ಸಿ ಕೆ.ಎ.ತಿಪ್ಪೇರುದ್ರಸ್ವಾಮಿ, ಮುಖಂಡರಾದ ಜವರಾಯಿಗೌಡ ಮತ್ತು ಹೆಚ್. ಎನ್. ದೇವರಾಜ್ ಸೇರಿದಂತೆ ಇತರರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬ್ರಿಟಿಷ್ ಆಡಳಿತವನ್ನ ನೆನಪಿಸುತ್ತೆ: ಹೆಚ್ಕೆ ಪಾಟೀಲ್
ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾತನಾಡಿ, ರಾಹುಲ್ ಗಾಂಧಿಯವರು ನೀಡಿದ ಮಾಹಿತಿಯನ್ನು ಸುಮೋಟೋ ಎಂದು ಪರಿಗಣಿಸಿ. ಒಂದು ಪೋಸ್ಟ್ ಕಾರ್ಡ್ ಬರೆದರೆ PIL ಎಂದು ಪರಿಗಣಿಸುತ್ತೇವೆ. ನೋಟಿಸ್ ಕ್ರಮ ಬ್ರಿಟಿಷ್ ಮಾದರಿಯ ಆಡಳಿತವನ್ನ ನೆನಪಿಸುತ್ತೆ. ಮೋದಿ ಮತಗಳ್ಳತನ ಮಾಡಿ ಪ್ರಧಾನಿ ಆಗಿದ್ದಾರೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಅದು ಸರಿಯಾದದ್ದಲ್ವಾ ಎಂದ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರಶ್ನಿಸಿದರು.
ಎಐಸಿಸಿ, ಕೆಪಿಸಿಸಿ ನೋಡಿಕೊಳ್ಳುತ್ತೆ: ಪರಮೇಶ್ವರ್
ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ ವಿಚಾರವನ್ನು ಎಐಸಿಸಿ, ಕೆಪಿಸಿಸಿಯವರು ನೋಡಿಕೊಳ್ಳುತ್ತಾರೆ. ಕೆಪಿಸಿಸಿ ಅಧ್ಯಕ್ಷರ ಬಳಿಯೂ ಸ್ಪಷ್ಟನೆಯನ್ನು ಕೇಳಿದ್ದಾರೆ, ಕೊಡುತ್ತಾರೆ. ದಾಖಲೆಗಳು ಕೊಡಿ ಅಂತ ಚುನಾವಣಾ ಆಯೋಗ ಕೇಳಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಮತಗಳ್ಳತನ ಆರೋಪ: ಸಂಸದ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ನೋಟೀಸ್ಗೆ ಹೆದರಲ್ಲ: ಡಿಕೆ ಶಿವಕುಮಾರ್
ಸಂಸದ ರಾಹುಲ್ ಗಾಂಧಿ ಈ ದೇಶಕ್ಕೆ ಎಲ್ಲಾ ಮಾಹಿತಿ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಪರಿಶೀಲನೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ಹೇಳಿದೆ. ಏನು ತಪ್ಪಾಗಿದೆ ಅಂತ ಆಯೋಗಕ್ಕೆ ಮಾಹಿತಿ ತಿಳಿಸುತ್ತೇವೆ. ಕಾನೂನು ರೀತಿ ಕ್ರಮಕೈಗೊಳ್ಳುವುದು ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ನಾವು ತಪ್ಪು ಹೇಳಿದರೇ ಕೇಸ್ ಹಾಕಲಿ. ನೋಟೀಸ್ಗೆ ಹೆದರಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲೆಂದು ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಮತ ದುರ್ಬಳಕೆಯಾಗಬಾರದೆಂದು ಅಂತ ಪ್ರತಿಭಟಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




