ಬೆಂಗಳೂರು, (ಮಾರ್ಚ್ 06): ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚವ ಬಗ್ಗೆ ಚರ್ಚೆ ನಡೆದಿದ್ದು, ಇದರ ವಿರುದ್ಧ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಇಂದು(ಮಾರ್ಚ್ 06) ವಿಧಾನಸಭೆ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಲೇ ಎದ್ದು ನಿಂತು ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಅಷ್ಟೇ. ಮುಚ್ಚುತ್ತಿದ್ದೇವೆ ಅಂತಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಈ ಬಗ್ಗೆ ವಿಜಯೇಂದ್ರ ಅವರ ಅಕ್ಕನ ಮಗನಿಗೆ ವಿದೇಶದಲ್ಲಿ ಸೀಟು ಸಿಗದಿದ್ದನ್ನು ಉದಾಹರಣೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೂ ಚಾಮರಾಜನಗರ ಅಥವಾ ಮಂಡ್ಯ ವಿವಿಯಲ್ಲಿ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಎಸ್.ಎಂ. ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ ವಿಜಯೇಂದ್ರ ಅವರ ಅಕ್ಕನ ಮಗನಿಗೆ ಪಿಇಎಸ್ ವಿವಿಯಲ್ಲಿ ಓದಿದ್ದರೂ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಗಲಿಲ್ಲ. ಬೆಂಗಳೂರಿಗೆ ಪಿಇಎಸ್ ಫೇಮಸ್ ಕಾಲೇಜು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವೇಶ ಸಿಗಲಿಲ್ಲ. ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಅಷ್ಟೇ ಮುಚ್ಚುತ್ತಿದ್ದೇವೆ ಅಂತಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿವಿಗಳಿಗೆ ಅವುಗಳದ್ದೇ ಆದ ಸ್ಥಾನ, ಮೌಲ್ಯ ಇದೆ ಎಂದು ಹೇಳಿದ ಡಿಕೆ ಶಿವಕುಮಾರ್, ಬೈ ಚಾಯ್ಸ್ ಐಯಾಮ್ ಎಜ್ಯುಕೇಶನಿಸ್ಟ್, ಪೊಲಿಟಿಕ್ಸ್ ಈಸ್ ಮೈ ಫ್ಯಾಷನ್ ಎಂದರು. ಬಳಿಕ ವಿಪಕ್ಷ ನಾಯಕ ಅಶೋಕ್ ಮಧ್ಯಪ್ರವೇಶಿಸಿ ಮತ್ತೊಮ್ಮೆ ಆ ಡೈಲಾಗ್ ಹೇಳಿ ಎಂದರು.
ಬಳಿಕ ಮಾತು ಮುಂದುವರಿಸಿದ ಡಿಕೆಶಿ, ನೀವು ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದ ಮೇಲೆ ನಾನು ಅಲ್ಲಿಂದ ಬಂದು ಪಕ್ಷದ ಕಚೇರಿಯಲ್ಲಿ ಒಂದು ಮಾತು ಆಡಿದ್ದೆ. ನಾನು ಬೈ ಬರ್ತ್ ನಾನು ಅಗ್ರಿಕಲ್ಚರಿಸ್ಟ್, ಬೈ ಚಾಯ್ಸ್ ನಾನು ಎಜುಕೇಷನಿಸ್ಟ್, ಬೈ ಪ್ರೊಫೆಷನ್ ನಾನು ಬ್ಯುಸಿನೆಸ್ ಮ್ಯಾನ್, ಬೈ ಪ್ಯಾ಼ಷನ್ ನಾನೊಬ್ಬ ಪೊಲಿಟಿಷಿಯನ್. ಹೊಸ ವಿವಿಗಳನ್ನು ವಿಲೀನ ಮಾಡುತ್ತಿದ್ದೇವೆ. ಯಾರೂ ಲೆಕ್ಚರರ್ ಗಳು ಹೋಗುತ್ತಿರಲಿಲ್ಲ. ನಾವು ಮುಚ್ಚಿಲ್ಲ, ವಿಲೀನ ಮಾಡುತ್ತಿದ್ದೇವೆ. ನೀವು ಭಾಗ ಮಾಡುತ್ತೀರಿ, ನಾವು ವಿಲೀನ ಮಾಡುತ್ತೇವೆ. ನಮಗೂ ನಿಮಗೂ ಇಷ್ಟೇ ವ್ಯತ್ಯಾಸ, ನೀವು ಜನರನ್ನು ವಿಭಜಿಸುತ್ತೀರಿ, ನಾವು ಒಂದು ಮಾಡುತ್ತೇವೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.
ಇನ್ನು ಡಿಕೆ ಶಿವಕುಮಾರ್ ಸ್ಪಷ್ಟನೆಗೂ ಮುನ್ನವೇ ವಿಪಕ್ಷ ನಾಯಕ ಅಶೋಕ್ ಅವರು ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿವಿ ಮುಚ್ಚುವ ಬಗ್ಗೆ ಪ್ರಸ್ತಾಪಿಸಿದರು. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ಮಾಡಿ ಸರ್ಕಾರ 9 ವಿವಿ ಮುಚ್ಚುವ ನಿರ್ಧಾರ ಮಾಡಿದೆ. ನಾವು ವಿವಿಗಳನ್ನು ಮಾನದಂಡಗಳ ಮೇಲೆ ಆರಂಭಿಸಿದ್ದೆವು. ಸುಮ್ಮ ಸುಮ್ಮನೆ ವಿವಿಗಳಿಗೆ ಅನುಮತಿ ಕೊಡಲಿಲ್ಲ. ಮಂಡ್ಯ ವಿವಿಗೆ ಕೇಂದ್ರ ಸರ್ಕಾರ 50 ಕೋಟಿ ಕೊಟ್ಟಿದೆ, ಕಟ್ಟಡ ಇದೆ, ವಿದ್ಯಾರ್ಥಿಗಳು ಇದ್ದಾರೆ. ಆದ್ರೆ, ಕಾಂಗ್ರೆಸ್ ಸರ್ಕಾರ ಮಂಡ್ಯ ವಿವಿ ರದ್ದು ಮಾಡುತ್ತೇವೆ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಶಾಸಕ ರವಿ ಗಣಿಗ ಎಲ್ಲಪ್ಪ? ಗಣಿಗ ನೀನು ಮಂಡ್ಯಕ್ಕೆ ಹೋದರೆ ಅಲ್ಲಿನವರು ಗಾಣಕ್ಕೆ ಹಾಕಿ ರುಬ್ಬಿ ಬಿಡುತ್ತಾರೆ ಎಂದರು. ಅಶೋಕ್ ಮಾತಿಗೆ ಪ್ರತಿಕ್ರಿಯಿಸಿದ ಮಂಡ್ಯ ಶಾಸಕ ರವಿ ಗಣಿಗ, ನಾನು ಈಗಾಗಲೇ ಡಿಸಿಎಂಗೆ ಹಾಗೂ ಮಂತ್ರಿಗಳಿಗೆ ಮಂಡ್ಯ ವಿವಿ ರದ್ದು ಬೇಡ, ಮಂಡ್ಯದ ಜನರ ಪರವಾಗಿ ವಿವಿ ಬೇಕು ಅಂತಾ ಕೇಳಿಕೊಂಡಿದ್ದೇನೆ ಎಂದು ಹೇಳಿದರು.
ರವಿ ಗಣಿಗ ಅವರ ಈ ಮಾತಿಗೆ ಅಶೋಕ್ ಶ್ಲಾಘಿಸಿದ್ದು, ಇದು ಚಾಲೆಂಜ್ ಅಂದರೆ. ಶಾಸಕರಿಗೆ ಇರುವ ಧಮ್ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ಮಾತಿನಲ್ಲೇ ತಿವಿದರು.
ಇನ್ನು 450 ಕೋಟಿ ರೂಪಾಯಿ ಅಷ್ಟೇ 9 ವಿವಿಗಳಿಗೆ ಬೇಕಾಗಿರುವುದು. ಸರ್ಕಾರ ಈ ಹಣ ಕೊಡದಷ್ಟು ಪಾಪರ್ ಆಗಿದೆಯಾ ಅಂತ ಟೀಕಿಸಿದರು. ನಂತರ ಅಶೋಕ್ ಬಳಸಿದ ಪಾಪರ್ ಪದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.