Kargil Vijay Diwas 2025: ಕಾರ್ಗಿಲ್ ಯುದ್ಧ ನಡೆದದ್ದು ಯಾಕಾಗಿ? ಈ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಭಾರತವೂ ಪಾಕಿಸ್ತಾನದ ಕುತಂತ್ರವನ್ನು ಸದೆಬಡಿದು, ಭಾರತದ ಭಾಗವನ್ನು ಪಡೆದ ದಿನವೇ ಜುಲೈ 26. ಈ ದಿನವು 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಮೇಲೆ ಭಾರತದ ಸೇನೆಯ ವಿಜಯವಾದ ಆಪರೇಷನ್ ವಿಜಯವನ್ನು ಸ್ಮರಿಸಲಾಗುತ್ತದೆ. ಪಾಕಿಸ್ತಾನದ ವಿರುದ್ಧ ನಿರಂತರವಾಗಿ ಮೂರು ತಿಂಗಳವರೆಗೂ ನಡೆದ ಯುದ್ಧದಲ್ಲಿ ಭಾರತದ 500ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ಹೋರಾಡಿ ಹುತಾತ್ಮರಾದರು. ಈ ಯುದ್ಧದಲ್ಲಿ ನಮ್ಮ ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರನ್ನು ನೆನಪಿಸುವ, ಅವರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನ ಸಲ್ಲಿಸುವ ದಿನವಿದು. ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಕುರಿತಾದ ಮಾಹಿತಿ ಇಲ್ಲಿದೆ.

ಕಾರ್ಗಿಲ್ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ದಿನ. ಹೌದು, ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನ ಇದಾಗಿದೆ. ಇದರ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ. ಈ ವಿಶೇಷ ದಿನದ ಇನ್ನಷ್ಟು ಮಾಹಿತಿ ಇಲ್ಲಿದೆ.
ಕಾರ್ಗಿಲ್ ವಿಜಯ್ ದಿವಸ್ ಇತಿಹಾಸ:
ಪಾಕ್ ಹಾಗೂ ಭಾರತ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿತ್ತು. ಆದರೆ 1998 ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 1999 ರಲ್ಲಿ ಲಾಹೋರ್ ಘೋಷಣೆಗೆ ಸಹಿ ಹಾಕಿದವು. ಆ ಮೂಲಕ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಭರವಸೆ ನೀಡಿತಾದರೂ ಪಾಕಿಸ್ತಾನವು ತನ್ನ ಕುತಂತ್ರಿ ಬುದ್ದಿಯನ್ನು ತೋರಿಸಿತು. ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳ ಒಳನುಸುಳಿದರು. ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಭಾರತ ಸರ್ಕಾರವು ಆಪರೇಷನ್ ವಿಜಯ್ ವನ್ನು ಪ್ರಾರಂಭಿಸಿತು.
ಆದರೆ, ನಮ್ಮ ಭಾರತೀಯ ಪಡೆಗಳಿಗೆ ಪಾಕಿಸ್ತಾನದ ಒಳನುಸುಳುವಿಕೆಯ ಪ್ರಮಾಣದ ಬಗ್ಗೆ ತಿಳಿದಿರಲಿಲ್ಲ ಅದು ಸಣ್ಣ ಪ್ರಮಾಣದಲ್ಲಿದೆ ಎಂದು ಭಾವಿಸಿತು. ಆರಂಭದಲ್ಲಿ ಪಾಕಿಸ್ತಾನ ಸೇನೆಯು ಯುದ್ಧದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಆಕ್ರಮಣಕ್ಕೆ ಕಾಶ್ಮೀರಿ ಉಗ್ರಗಾಮಿಗಳನ್ನು ದೂಷಿಸಿತು. ಆದರೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಗಳು ಯುದ್ಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿದೆ ಎಂದು ಸಾರಿ ಹೇಳಿತ್ತು.
ಕೊನೆಗೆ ಭಾರತವು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಪಾಕಿಸ್ತಾನದ ವಿರುದ್ಧ ಆಪರೇಷನ್ ವಿಜಯ್ಗಾಗಿ 20,000 ಸೈನಿಕರನ್ನು ಕಳುಹಿಸಿತು. ಪಾಕಿಸ್ತಾನಿ ಸೈನಿಕರನ್ನು ತನ್ನ ಭೂಪ್ರದೇಶದಿಂದ ಹೊರಹಾಕುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾದರು. 60 ದಿನಗಳಿಗಿಂತ ಹೆಚ್ಚು ಕಾಲ ನಡೆದ ಈ ಯುದ್ಧದಲ್ಲಿ 527 ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣ ತೆತ್ತರು. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತವು ವಿಜಯಶಾಲಿಯಾಯಿತು. ಆದರೆ ಈ ಯುದ್ಧವು ಜುಲೈ 26 ರಂದು ಕೊನೆಗೊಂಡಿತು. ಈ ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕರನ್ನು ಗೌರವಿಸುವ ನಿಟ್ಟಿನಲ್ಲಿ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.
ಇದನ್ನೂ ಓದಿ: National Flag Day 2025: ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ
ಕಾರ್ಗಿಲ್ ವಿಜಯ್ ದಿವಸ್ ಮಹತ್ವ ಹಾಗೂ ಆಚರಣೆ:
ಕಾರ್ಗಿಲ್ ವಿಜಯ್ ದಿವಸ್ ಭಾರತೀಯ ಪಾಲಿಗೆ ಮರೆಯದ ದಿನ. ಆದರೆ ಈ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವು ಬಹಳ ಮಹತ್ವ ಪೂರ್ಣ. ಹೀಗಾಗಿ ಈ ದಿನದಂದು ಭಾರತದ ಪ್ರಧಾನಿ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅದಲ್ಲದೇ, ಭಾರತೀಯ ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








