ಮುಂಬೈ ಮ್ಯಾನ್ಹೋಲ್ ದುರಂತ; ಬಿಎಂಸಿ ಅಸಿಸ್ಟೆಂಟ್ ಕಮಿಷನರ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತು
ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ, ತೆರೆದ ಮ್ಯಾನ್ಹೋಲ್ಗೆ ಬಿದ್ದು 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸಹಾಯಕ ಕಮಿಷನರ್ ಸೇರಿದಂತೆ 4 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇಂದು ಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ನಲ್ಲಿ ಮಾತನಾಡುತ್ತಿದ್ದ 60 ವರ್ಷದ ವ್ಯಕ್ತಿ ತೆರೆದ ಮ್ಯಾನ್ಹೋಲ್ ಒಳಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. 4 ಗಂಟೆಗಳ ಬಳಿಕ ಅವರ ಶವವನ್ನು ಹೊರಗೆ ತೆಗೆಯಲಾಗಿತ್ತು.

ಮುಖ್ಯಾಂಶಗಳು
- ಮುಂಬೈನಲ್ಲಿ ಮ್ಯಾನ್ಹೋಲ್ಗೆ ಬಿದ್ದು ವ್ಯಕ್ತಿ ಸಾವು
- ಕಠಿಣ ಕ್ರಮಕ್ಕೆ ಮುಂದಾದ ಬಿಎಂಸಿ
- ನಾಲ್ವರು ಅಧಿಕಾರಿಗಳ ಅಮಾನತು
ಮುಂಬೈ, ಜುಲೈ 2: ಮುಂಬೈನಲ್ಲಿ ಇಂದು ತೆರೆದ ಮ್ಯಾನ್ಹೋಲ್ ಒಳಗೆ ಬಿದ್ದು 60 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮುಂಬೈನ (Mumbai Rains) ಅಂಧೇರಿ ಈಸ್ಟ್ನ ಸಾಕಿನಾಕಾ ಪ್ರದೇಶದಲ್ಲಿ ತೆರೆದ ಮ್ಯಾನ್ಹೋಲ್ಗೆ ಬಿದ್ದು ಅಸ್ಲಾಂ ಇಸಾಕ್ ಶೇಖ್ ಎಂಬುವವರು ಮೃತಪಟ್ಟ ಬೆನ್ನಲ್ಲೇ ಬಿಎಂಸಿ ಕಮಿಷನರ್ ಅಶ್ವಿನಿ ಭಿಡೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ‘ಎಲ್’ ವಾರ್ಡ್ನ ಸಹಾಯಕ ಕಮಿಷನರ್ ಧನಾಜಿ ಹೇರ್ಲೇಕರ್ ಸೇರಿದಂತೆ 4 ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ನಿರ್ವಹಣಾ ಕಾಮಗಾರಿಗಳ ವೇಳೆ ಕನಿಷ್ಠ ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಈ ಕೆಳಗಿನ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ. ಅವರೆಂದರೆ,
ಧನಾಜಿ ಹೇರ್ಲೇಕರ್ – ಸಹಾಯಕ ಕಮಿಷನರ್ (L ವಾರ್ಡ್)
ದೀಪಕ್ ಚೌಗುಲೆ – ಸಹಾಯಕ/ಉಪ ಎಂಜಿನಿಯರ್ (ನಿರ್ವಹಣೆ)
ಅಭಿಜಿತ್ ಚೌಗುಲೆ – ಜೂನಿಯರ್ ಎಂಜಿನಿಯರ್ (ನಿರ್ವಹಣೆ)
ಉತ್ತಮ ಪಾಟೀಲ್ – ಸಹಾಯಕ ಎಂಜಿನಿಯರ್ (ಒಳಚರಂಡಿ ಕಾರ್ಯಾಚರಣೆ ವಿಭಾಗ)
ಇದನ್ನೂ ಓದಿ: ಮುಂಬೈನಲ್ಲಿ ತೆರೆದ ಮ್ಯಾನ್ಹೋಲ್ಗೆ ಬಿದ್ದು ವ್ಯಕ್ತಿ ಸಾವು; ನಗರದಲ್ಲಿ ಮಳೆಗೆ 3ನೇ ಬಲಿ
ಈ ಅಧಿಕಾರಿಗಳನ್ನು ಅಮಾನತುಗೊಳಿಸುವುದರ ಜೊತೆಗೆ, ಘಟನೆಗೆ ಕಾರಣವಾದ ಖಾಸಗಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಬಿಎಂಸಿ ಆದೇಶಿಸಿದೆ. ಅಲ್ಲದೆ, ಗುತ್ತಿಗೆದಾರನ ವಿರುದ್ಧ ‘ನರಹತ್ಯೆ’ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ದುರಂತ ಸಂಭವಿಸಿದ್ದು ಹೇಗೆ?:
ಖೈರಾನಿ ರಸ್ತೆಯಲ್ಲಿ ಒಳಚರಂಡಿಗೆ ಸುರಕ್ಷತಾ ಗ್ರಿಲ್ ಅಳವಡಿಸುವ ಕೆಲಸ ನಡೆಯುತ್ತಿತ್ತು. ಇದಕ್ಕಾಗಿ ಮೂವರು ಖಾಸಗಿ ಗುತ್ತಿಗೆ ಕಾರ್ಮಿಕರು ಮ್ಯಾನ್ಹೋಲ್ ಮುಚ್ಚಳವನ್ನು ತೆಗೆದಿದ್ದರು. ಆದರೆ, ಸುತ್ತಲೂ ಯಾವುದೇ ಬ್ಯಾರಿಕೇಡ್ ಅಥವಾ ಮುನ್ನೆಚ್ಚರಿಕೆ ಫಲಕಗಳನ್ನು ಹಾಕಿರಲಿಲ್ಲ. ಇದೇ ವೇಳೆ ರಸ್ತೆಯಲ್ಲಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಅಸ್ಲಾಂ ಶೇಖ್ ಅವರು ತೆರೆದಿದ್ದ ಮ್ಯಾನ್ಹೋಲ್ ಗಮನಿಸದೇ ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ. ಮಳೆಯ ನೀರು ತೀವ್ರ ರಭಸದಿಂದ ಹರಿಯುತ್ತಿದ್ದರಿಂದ ಅವರು ಭೂಗತ ಒಳಚರಂಡಿ ಪೈಪ್ಲೈನ್ನಲ್ಲಿ ಕೊಚ್ಚಿಹೋಗಿದ್ದರು. ಅಗ್ನಿಶಾಮಕ ದಳದವರು 4 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಅವರ ಶವವನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು
10 ಲಕ್ಷ ರೂ. ಪರಿಹಾರ:
ಮುಂಬೈ ಮೇಯರ್ ರಿತು ತಾವ್ಡೆ ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಡಿಷನಲ್ ಮುನ್ಸಿಪಲ್ ಕಮಿಷನರ್ ನೇತೃತ್ವದಲ್ಲಿ ಹೈ-ಲೆವೆಲ್ ಕಮಿಟಿ ರಚಿಸಲಾಗಿದ್ದು, 7 ದಿನಗಳಲ್ಲಿ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ. ಮುಂಬೈ ನಗರದಾದ್ಯಂತ ಇರುವ ಎಲ್ಲಾ ಮ್ಯಾನ್ಹೋಲ್ಗಳನ್ನು ಮುಂದಿನ 8 ದಿನಗಳ ಒಳಗೆ 100% ಪರಿಶೀಲಿಸಿ, ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಬಿಎಂಸಿ ತನ್ನ ಎಲ್ಲಾ 26 ವಾರ್ಡ್ಗಳ ಅಧಿಕಾರಿಗಳಿಗೆ ಕಡ್ಡಾಯ ಆದೇಶ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 pm, Thu, 2 July 26




