ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಇತ್ತೀಚಿನ ನಿರ್ದೇಶನಗಳಿಗೆ ಅನುಗುಣವಾಗಿ, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ತಕ್ಷಣವೇ ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ನಿರ್ದೇಶನವನ್ನು ಇತ್ತೀಚೆಗೆ ಸಿಡಬ್ಲ್ಯೂಎಂಎ ಎತ್ತಿಹಿಡಿದಿದ್ದು, ಅದರಂತೆ ಕರ್ನಾಟಕವು ತಮಿಳುನಾಡಿಗೆ ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್‌ನಂತೆ 15 ದಿನಗಳ ಕಾಲ ನೀರು ಹರಿಸಬೇಕಾಗಿದೆ.

ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ
Mk Stalin And Dk Shivakumar
Image Credit source: TV9

Updated on: Aug 01, 2026 | 11:23 PM

ಚೆನ್ನೈ, ಆಗಸ್ಟ್ 1: ತಮಿಳುನಾಡಿಗೆ ತಕ್ಷಣ ಕಾವೇರಿ (Cauvery Water Dispute) ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ 2018ರ ಅಂತಿಮ ತೀರ್ಪು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನಗಳನ್ನು ಕರ್ನಾಟಕ ಪಾಲಿಸಬೇಕು ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಿದೆ. ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದು, ನೀರು ಹರಿಯದೇ ಸಂಕಷ್ಟಕ್ಕೆ ಈಡಾಗಿರುವ ತಿರು ಎಕೆಎಸ್ ವಿಜಯನ್ ಅವರು ಡಿಎಂಕೆ ಪರವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

CWRC ನಿರ್ದೇಶನವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಜುಲೈ 30, 2026ರಂದು ಅನುಮೋದಿಸಿತು. ನ್ಯಾಯಾಲಯದ ಆದೇಶದ ದಿನಾಂಕದಿಂದ ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿಗೆ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕೆಂದು ಮತ್ತು ಜುಲೈ 29, 2026ರಿಂದ ಉಂಟಾದ ಕೊರತೆಯನ್ನು ಸರಿದೂಗಿಸಬೇಕೆಂದು ಇದು ಆದೇಶಿಸಿತು.

ಕರ್ನಾಟಕವು ಈ ತೀರ್ಪನ್ನು ಸಿಡಬ್ಲ್ಯೂಎಂಎ (CWMA) ಮುಂದೆ ಪ್ರಶ್ನಿಸಿ, ಈ ನಿರ್ದೇಶನವನ್ನು 15 ದಿನಗಳ ಕಾಲ ಮುಂದೂಡುವಂತೆ ಕೋರಿತ್ತು. ಆದರೆ, ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದನ್ನು ಪರಿಗಣಿಸಿದ ಸಿಡಬ್ಲ್ಯೂಎಂಎ, ಸಿಡಬ್ಲ್ಯೂಆರ್‌ಸಿ ನಿರ್ದೇಶನವನ್ನು ಎತ್ತಿಹಿಡಿಯಿತು ಮತ್ತು ಇದರಿಂದ ಕರ್ನಾಟಕದ ಕುಡಿಯುವ ನೀರಿನ ಅಗತ್ಯಕ್ಕೆ ಯಾವುದೇ ಭಂಗ ಉಂಟಾಗುವುದಿಲ್ಲ ಎಂದು ದಾಖಲಿಸಿತು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಆ.13ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

ಜುಲೈ 26ರೊಳಗೆ ಬಿಳಿಗುಂಡ್ಲುವಿನಲ್ಲಿ ಸುಮಾರು 9.46 ಟಿಎಂಸಿ ನೀರಿನ ಕೊರತೆಯನ್ನು ಪರಿಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಇದಕ್ಕಾಗಿ ಮುಂದಿನ 15 ದಿನಗಳವರೆಗೆ ಪ್ರತಿದಿನ ಸುಮಾರು 7,000 ಕ್ಯೂಸೆಕ್ ನೀರು ಹರಿಸಬೇಕು. ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮತ್ತು ಬಿಳಿಗುಂಡ್ಲು ತಲುಪುವ ನೀರನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ ಮೇಲ್ವಿಚಾರಣೆ ಮಾಡಬೇಕು ಮತ್ತು ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.

ಮೆಟ್ಟೂರು ಜಲಾಶಯದ ನೀರನ್ನು ನಂಬಿಕೊಂಡು ಸುಮಾರು 14.913 ಲಕ್ಷ ಎಕರೆ ಕೃಷಿ ಭೂಮಿ, 40 ಲಕ್ಷ (4 ಮಿಲಿಯನ್) ರೈತರು ಮತ್ತು 1 ಕೋಟಿ (10 ಮಿಲಿಯನ್) ಕೃಷಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ, ಮೆಟ್ಟೂರು ಜಲಾಶಯವು ಕರ್ನಾಟಕವು ಬಿಳಿಗುಂಡ್ಲುವಿಗೆ ಬಿಡುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: CWRC ಆದೇಶ ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಹಿನ್ನಡೆ

ಕಾವೇರಿ ಜಲ ವಿವಾದ ಬಗೆಹರಿಸಲು CWMA ರಚನೆ:

ಗುರುವಾರ CWMA ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿಹಿಡಿದಿದೆ. ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ನಡುವಿನ ಕಾವೇರಿ ನೀರು ಹಂಚಿಕೆ ವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರವು 2018ರಲ್ಲಿ CWMA ಅನ್ನು ರಚಿಸಿತು. ಈ ಪ್ರಾಧಿಕಾರವು ನದಿ ಹರಿಯುವ ರಾಜ್ಯಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಾಮನಿರ್ದೇಶಿತರನ್ನು ಒಳಗೊಂಡಿದೆ.

ಕಾವೇರಿ ವಿವಾದದ ಹಿನ್ನೆಲೆ:

ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸುದೀರ್ಘ ಸಂಘರ್ಷವಾಗಿದೆ. 1974ರಲ್ಲಿ ಮೇಲ್ಭಾಗದ ರಾಜ್ಯವಾದ ಕರ್ನಾಟಕವು ತಮಿಳುನಾಡಿನ ಒಪ್ಪಿಗೆಯಿಲ್ಲದೆ ನೀರನ್ನು ಬೇರೆಡೆಗೆ ತಿರುಗಿಸಲು ಪ್ರಾರಂಭಿಸಿದಾಗ ಈ ವಿವಾದ ಆರಂಭವಾಯಿತು. 2007ರಲ್ಲಿ ಕಾವೇರಿ ನೀರು ವಿವಾದಗಳ ನ್ಯಾಯಾಧಿಕರಣವು ನೀರು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದ ನಂತರ ಈ ವಿಷಯ ಸುಪ್ರೀಂ ಕೋರ್ಟ್‌ ತಲುಪಿತು. ನ್ಯಾಯಾಧಿಕರಣದ ತೀರ್ಪು 2007ರ ಫೆಬ್ರವರಿ 5ರಂದು ಹೊರಬಿದ್ದಿದ್ದು, 2013ರ ಫೆಬ್ರವರಿ 19ರಂದು ಕೇಂದ್ರ ಸರ್ಕಾರವು ಇದನ್ನು ಗೆಜೆಟ್‌ನಲ್ಲಿ ಪ್ರಕಟಿಸಿತು. ನೀರು ಹಂಚಿಕೆಯನ್ನು ನಿರ್ಧರಿಸುವುದರ ಜೊತೆಗೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಸ್ಥಾಪಿಸಲು ನ್ಯಾಯಾಧಿಕರಣವು ಶಿಫಾರಸು ಮಾಡಿತ್ತು. 2018ರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಕರ್ನಾಟಕಕ್ಕೆ ತಮಿಳುನಾಡಿಗೆ 192 ಟಿಎಂಸಿಗೆ ಬದಲಾಗಿ 177.25 ಟಿಎಂಸಿ ನೀರನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ಹರಿಸುವಂತೆ ನಿರ್ದೇಶಿಸಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us