AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದ್ದ ಸಿಜೆಪಿ ಜೊತೆ ಕೇಂದ್ರ ಸರ್ಕಾರ ಸಂಧಾನ ಮಾತುಕತೆ ನಡೆಸಿತ್ತು. ಸರ್ಕಾರದ ಮುಂದೆ 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದ ಸಿಜೆಪಿಯ ಎಲ್ಲ ಬೇಡಿಕೆಗಳೂ ಈಡೇರಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಾಸ್ ಪಡೆಯುವುದಾಗಿ ಸಿಜೆಪಿ ಘೋಷಿಸಿದೆ. ಇಂದು ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜೊತೆಗಿನ ಮೂರನೇ ಸುತ್ತಿನ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಜೆಪಿ ಈ ವಿಷಯವನ್ನು ಘೋಷಿಸಿದೆ.

ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ
Cjp Leaders With Union MinistersImage Credit source: x
ಸುಷ್ಮಾ ಚಕ್ರೆ
|

Updated on:Jul 25, 2026 | 6:24 PM

Share

ನವದೆಹಲಿ, ಜುಲೈ 25: ನೀಟ್ (NEET-UG) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ಕೇಂದ್ರ ಶಿಕ್ಷಣ ಸಚಿವಾಲಯದ ವಿರುದ್ಧ ನಡೆದಿದ್ದ ಬೃಹತ್ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಕೇಂದ್ರ ಸರ್ಕಾರವು ಪ್ರತಿಭಟನಾಕಾರರ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ತನ್ನ 50 ದಿನಗಳ ಸುದೀರ್ಘ ರಾಷ್ಟ್ರವ್ಯಾಪಿ ಚಳವಳಿಯನ್ನು ಹಿಂಪಡೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಮನೆಗೆ ಹಿಂತಿರುಗುವಂತೆ ಮನವಿ ಮಾಡಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಕೆಲವೇ ಗಂಟೆಗಳ ನಂತರ, ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಸಿಜೆಪಿ ನಿಯೋಗವು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ 3ನೇ ಸುತ್ತಿನ ಮಾತುಕತೆ ನಡೆಸಿತು. ಈ ಸಭೆಯ ನಂತರ ಕೇಂದ್ರ ಸಚಿವರು ಮತ್ತು ಸಿಜೆಪಿ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ತಕ್ಷಣದಿಂದ ಜಾರಿಗೆ ಬರುವಂತೆ ಚಳವಳಿಯನ್ನು ಹಿಂಪಡೆಯುತ್ತಿರುವುದಾಗಿ ಪ್ರಕಟಿಸಿದ ಸಿಜೆಪಿ, ಎಲ್ಲಾ ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಮನೆಗೆ ಹಿಂತಿರುಗುವಂತೆ ವಿನಂತಿಸಿದೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಜೆ.ಪಿ. ನಡ್ಡಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ನಿಯಮಗಳು ಮತ್ತು ಕಾಯ್ದೆಗಳಿಗೆ ಒಳಪಟ್ಟು ಆ ಕುಟುಂಬಗಳಿಗೆ ಗೌರವಪೂರ್ವಕ ಪರಿಹಾರವನ್ನು ಒದಗಿಸುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಇದರ ಜೊತೆಗೆ, ವ್ಯಾಪಕ ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಗಳನ್ನು ಒಳಗೊಂಡ 5 ಅಂಶಗಳ ಬೇಡಿಕೆಗಳ ಚಾರ್ಟರ್ ಅನ್ನು ನಾವು ಸರ್ಕಾರದ ಮುಂದಿಟ್ಟಿದ್ದೇವೆ” ಎಂದಿದ್ದಾರೆ.

ಶಿಕ್ಷಣ ಸುಧಾರಣೆಗಳ ಕುರಿತು ಒಟ್ಟಾಗಿ ಕೆಲಸ ಮಾಡಲು 4 ವಾರಗಳ ಒಳಗೆ ಸರ್ಕಾರ ಹಾಗೂ ಸಿಜೆಪಿ ನಿಯೋಗವು ಮತ್ತೊಮ್ಮೆ ಸಭೆ ಸೇರಲಿದೆ. ಮಾತುಕತೆಯ ಕೊನೆಯಲ್ಲಿ ನಿಯೋಗವು ಸಚಿವರೊಂದಿಗೆ ಕೈಕುಲುಕುವ ಮೂಲಕ ಸುದೀರ್ಘ ಕಾಲದ ಬಿಕ್ಕಟ್ಟಿಗೆ ತೆರೆ ಎಳೆಯಿತು.

ಇದನ್ನೂ ಓದಿ: ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ

ಸಿಜೆಪಿ ವಕ್ತಾರ ಅಶುತೋಷ್ ರಾಂಕಾ ಮಾತನಾಡಿ, “ನಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಆದ್ದರಿಂದ ಪ್ರತಿಭಟನಾಕಾರರು ತಕ್ಷಣವೇ ಪ್ರತಿಭಟನೆಯನ್ನು ಹಿಂಪಡೆದು ಶಾಂತಿಯುತವಾಗಿ ಮನೆಗೆ ಹಿಂತಿರುಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ನಮ್ಮ ಮುಂದಿನ ತಂತ್ರ ಅಥವಾ ಇತರ ವಿಷಯಗಳ ಕುರಿತು ನಾವು ನಿಮಗೆ ಮುಂದೆ ತಿಳಿಸುತ್ತೇವೆ” ಎಂದಿದ್ದಾರೆ.

ಸರ್ಕಾರದ ಭರವಸೆ:

ಪ್ರತಿಭಟನಾ ನಿರತರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳ (FIR) ಪ್ರತಿಯನ್ನು ಶೀಘ್ರದಲ್ಲೇ ಹಂಚಿಕೊಂಡು, ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಸಿಜೆಪಿ ತಿಳಿಸಿದೆ. ಜೂನ್ 6ರಂದು ಪ್ರಾರಂಭವಾಗಿದ್ದ ಈ ಚಳವಳಿಯು ಇಂದು ಸರ್ಕಾರ ಮತ್ತು ಸಿಜೆಪಿ ನಾಯಕರ ನಡುವೆ ನಡೆದ 3ನೇ ಸುತ್ತಿನ ಚರ್ಚೆಯ ನಂತರ ಪೂರ್ಣಗೊಂಡಿತು.

ಸಿಜೆಪಿಯ ಬೇಡಿಕೆಗಳೇನು?:

ಶಿಕ್ಷಣ ಸಚಿವರ ರಾಜೀನಾಮೆ: ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಿದ್ಯಾರ್ಥಿಗಳ ಮೊದಲ ಬೇಡಿಕೆ ಈಡೇರಿದಂತಾಗಿದೆ.

ಎಫ್‌ಐಆರ್ ಹಿಂಪಡೆಯುವಿಕೆ: ಪ್ರತಿಭಟನಾಕಾರರು ಮತ್ತು ಸಂಘಟಕರ ವಿರುದ್ಧ ದಾಖಲಿಸಲಾಗಿದ್ದ ಎಲ್ಲಾ ಎಫ್‌ಐಆರ್ (FIR) ಹಾಗೂ ಪ್ರಕರಣಗಳನ್ನು ರದ್ದುಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣ ದಾಖಲಿಸದಿರಲು ಸರ್ಕಾರ ಸಮ್ಮತಿಸಿದೆ.

ಹಣಕಾಸಿನ ಪರಿಹಾರ: ನೀಟ್ ಬಿಕ್ಕಟ್ಟಿನಿಂದಾಗಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Sat, 25 July 26

Follow Us