ನಾನು ಪ್ರತಿಷ್ಠೆಗಾಗಿ ರಾಜಕೀಯಕ್ಕೆ ಬಂದಿಲ್ಲ, ಯಾರೇ ತಪ್ಪು ಮಾಡಿದರೂ ಅನುಭವಿಸುತ್ತಾರೆ; ಗುಡುಗಿದ ಸಿಎಂ ಯೋಗಿ

ನಾನಿಲ್ಲಿ ಯಾರೋ ಹೇಳಿದ ಕೆಲಸ ಮಾಡಲು ಬಂದಿಲ್ಲ, ಪ್ರತಿಷ್ಠೆಗಾಗಿಯೂ ಇಲ್ಲಿ ಬಂದಿಲ್ಲ. ನನಗೆ ಮಠದಲ್ಲಿಯೂ ಗೌರವ ಸಿಗುತ್ತಿತ್ತು. ನನ್ನ ಆಳ್ವಿಕೆಯಲ್ಲಿ ಯಾರು ಏನು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾನು ಪ್ರತಿಷ್ಠೆಗಾಗಿ ರಾಜಕೀಯಕ್ಕೆ ಬಂದಿಲ್ಲ, ಯಾರೇ ತಪ್ಪು ಮಾಡಿದರೂ ಅನುಭವಿಸುತ್ತಾರೆ; ಗುಡುಗಿದ ಸಿಎಂ ಯೋಗಿ
ಯೋಗಿ ಆದಿತ್ಯನಾಥ್

Updated on: Aug 01, 2024 | 9:36 PM

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಜಲಾವೃತ ರಸ್ತೆಯೊಂದರಲ್ಲಿ ಪುರುಷರ ಗುಂಪೊಂದು ಮಹಿಳೆಯ ಮೇಲೆ ಮಳೆ ನೀರನ್ನು ಎರಚಿ, ಹಲ್ಲೆ ನಡೆಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂದು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಘೋಷಿಸಿದರು.

ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಅವರು ಆರೋಪಿಗಳಿಗಾಗಿ ಅಧಿಕಾರಿಗಳು ಕೇವಲ “ಸದ್ಭಾವನಾ ರೈಲನ್ನು” ಓಡಿಸುವುದಿಲ್ಲ. ಅದರ ಬದಲಿಗೆ “ಬುಲೆಟ್ ಟ್ರೈನ್” ಮೂಲಕ ಶಿಕ್ಷೆಯನ್ನು ತ್ವರಿತಗೊಳಿಸುತ್ತಾರೆ ಎಂದು ಹೇಳಿದರು. ಈ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪವನ್ ಯಾದವ್ ಮತ್ತು ಮೊಹಮ್ಮದ್ ಅರ್ಬಾಜ್ ಎಂದು ಗುರುತಿಸಲಾಗಿದೆ. ನನ್ನ ಆಡಳಿತದಲ್ಲಿ ಮಹಿಳೆಯರ ಸುರಕ್ಷತೆಯು ಒಂದು ಪ್ರಮುಖ ಆದ್ಯತೆಯಾಗಿದೆ ಎಂದು ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.

ಇದನ್ನೂ ಓದಿ: Rahul Gandhi: ನಮ್ಮ ತಂದೆ ತೀರಿಕೊಂಡಾಗ ಆದ ನೋವಾಗುತ್ತಿದೆ; ವಯನಾಡ್​ ಸಂತ್ರಸ್ತರ ಭೇಟಿ ಬಳಿಕ ಭಾವುಕರಾದ ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಯ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯುಪಿ ವಿಧಾನಸಭೆಯಲ್ಲಿ ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪೂರಕ ಬಜೆಟ್ ಕುರಿತು ಮಾತನಾಡಿದ ಸಿಎಂ ಯೋಗಿ ಎಸ್​ಪಿ ಹಾಗೂ ಪಕ್ಷದೊಳಗಿನ ವಿರೋಧಿಗಳಿಗೆ ನೇರ ಸಂದೇಶ ನೀಡಿದ್ದಾರೆ. ಯೋಗಿ ತಮ್ಮ ಭಾಷಣದಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನು ಯಾವುದೇ ಕೆಲಸ ಮಾಡಿ ಪ್ರತಿಷ್ಠೆ ಪಡೆಯಲು ಇಲ್ಲಿಗೆ ಬಂದಿಲ್ಲ. ಮಠದಲ್ಲಿಯೇ ಇದೆಲ್ಲ ಸಿಗುತ್ತಿತ್ತು. ನನ್ನ ಆಳ್ವಿಕೆಯಲ್ಲಿ ಯಾರು ಏನು ತಪ್ಪು ಮಾಡಿದರೂ ಅದಕ್ಕೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.


ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರ್ಕಾರ ಯಾವುದೇ ಅಪರಾಧಿಗಳನ್ನು ಬಿಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಬುಲೆಟ್ ರೈಲಿನ ವೇಗದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಯೋಗಿ ತಮ್ಮ ಭಾಷಣದಲ್ಲಿ ಗೋಮತಿ ನಗರದಲ್ಲಿ ನಡೆದ ಕಿರುಕುಳದ ಘಟನೆ ಮತ್ತು ಅಯೋಧ್ಯೆ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದರು. ಲಕ್ನೋದರ ಮಹಿಳೆಯರ ಕಿರುಕುಳಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅವರ ತಪ್ಪಿನಿಂದಾಗಿ ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನಮ್ಮ ಸರ್ಕಾರ ಟಾರ್ಗೆಟ್ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಲವ್ ಜಿಹಾದ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಯೋಗಿ ಸರ್ಕಾರ ಪ್ರಸ್ತಾವನೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ಅಯೋಧ್ಯೆ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸುವುದು ಮುಖ್ಯ ಎಂದ ಯೋಗಿ, ಅಯೋಧ್ಯೆಯಲ್ಲಿ ಮೊಮಿನ್ ಖಾನ್ ಎಂಬ ವ್ಯಕ್ತಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಸಮಾಜವಾದಿ ಪಕ್ಷದ ಸದಸ್ಯರಾಗಿದ್ದು, ಸಂಸದರ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಎಸ್​ಪಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ನಾನು ಯಾರ ಪರವಾಗಿಯೂ ಕೆಲಸ ಮಾಡಲು ಬಂದಿಲ್ಲ, ಪ್ರತಿಷ್ಠೆಯನ್ನೂ ಬಯಸುವುದಿಲ್ಲ ಎಂದು ವಿಧಾನಸಭೆಯಲ್ಲಿ ಯೋಗಿ ಹೇಳಿದ್ದಾರೆ. ಮಠದಿಂದಲೂ ಪ್ರತಿಷ್ಠೆ ಪಡೆಯಬಹುದು, ಆದರೆ, ನಾನು ಮುಖ್ಯಮಂತ್ರಿ ಆಗಿದ್ದೇನೆ, ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Thu, 1 August 24