AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷದ ವನವಾಸದ ಬಳಿಕ ದೆಹಲಿಯಲ್ಲಿ ಅರಳಿದ ಬಿಜೆಪಿ; ಆಮ್ ಆದ್ಮಿ ಪಕ್ಷಕ್ಕೆ ಹೀನಾಯ ಸೋಲು

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನತ್ತ ಸಾಗುತ್ತಿದೆ. ಈ ಮೂಲಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಮತ ಇನ್ನೂ ಎಣಿಕೆ ಮುಂದುವರೆದಿದೆ. ಆದರೆ, ಬಹುತೇಕ ಸ್ಥಾನಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರುವುದರಿಂದ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೇರುವುದು ಖಚಿತವಾಗಿದೆ.

27 ವರ್ಷದ ವನವಾಸದ ಬಳಿಕ ದೆಹಲಿಯಲ್ಲಿ ಅರಳಿದ ಬಿಜೆಪಿ; ಆಮ್ ಆದ್ಮಿ ಪಕ್ಷಕ್ಕೆ ಹೀನಾಯ ಸೋಲು
Bjp Celebration In Delhi
Follow us
ಸುಷ್ಮಾ ಚಕ್ರೆ
|

Updated on: Feb 08, 2025 | 2:09 PM

ನವದೆಹಲಿ: 27 ವರ್ಷಗಳ ವನವಾಸದ ನಂತರ ದೆಹಲಿಯಲ್ಲಿ ಬಿಜೆಪಿ ಪುನರಾಗಮನದ ಹಾದಿಯಲ್ಲಿದೆ. 1 ದಶಕದ ಸುದೀರ್ಘ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ವನ್ನು ಅಧಿಕಾರದಿಂದ ಕೆಳಗಿಸಿದ ಬಿಜೆಪಿ ಆಪ್ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿತು. ಆಮ್ ಆದ್ಮಿ ಪಕ್ಷದ ನಾಯಕರ ಪೈಕಿ ಸಿಎಂ ಅತಿಶಿ ಒಬ್ಬರೇ ಗೆಲುವು ಸಾಧಿಸುವ ಮೂಲಕ ಪಕ್ಷದ ಮರ್ಯಾದೆ ಉಳಿಸಿದ ನಾಯಕಿ. ಈಗಾಗಲೇ ಹಲವಾರು ಸುತ್ತಿನ ಎಣಿಕೆ ಮುಗಿದಿದ್ದು, ಬಿಜೆಪಿ 2 ಸ್ಥಾನಗಳನ್ನು ಗೆದ್ದಿದೆ ಮತ್ತು 70 ಸ್ಥಾನಗಳ ಪೈಕಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಒಂದಂಕಿ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಭರ್ಜರಿ ಯಶಸ್ಸಿನ ಮೂಲಕ ಪುನರಾಗಮನ ಮಾಡಿದೆ.

ಇಂದು ಮುಂಜಾನೆಯಿಂದ ದೆಹಲಿಯ 11 ಜಿಲ್ಲೆಗಳ 19 ಎಣಿಕೆ ಕೇಂದ್ರಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 699 ಅಭ್ಯರ್ಥಿಗಳನ್ನು ಹೊಂದಿರುವ 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಶೇ. 60.54 ರಷ್ಟು ಮತದಾನ ದಾಖಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಕಳೆದ 2 ವಿಧಾನಸಭಾ ಚುನಾವಣೆಗಳಲ್ಲಿ ಬಹುತೇಕ ಭರ್ಜರಿ ಗೆಲುವು ಸಾಧಿಸಿದ್ದ ಎಎಪಿ 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ 21 ಸ್ಥಾನಗಳಲ್ಲಿ ಹಿಂದುಳಿದಿದೆ. ಒಂದೇ ಒಂದು ಸ್ಥಾನದಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಶೂನ್ಯ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸುವ ಲಕ್ಷಣಗಳು ಕಾಣುತ್ತಿವೆ.

ದೆಹಲಿ ವಿಧಾನಸಭಾ ಚುನಾವಣೆಯ ಇದುವರೆಗಿನ ಹೈಲೈಟ್ಸ್ ಇಲ್ಲಿವೆ:

  1. ಬಿಜೆಪಿ ಹಲವಾರು ಎಎಪಿ ನಾಯಕರನ್ನು ಸೋಲಿಸಿತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ನವದೆಹಲಿಯಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಸೋಲಿಸಿದರು. 2013ರಿಂದ ಈ ಸ್ಥಾನವನ್ನು ಹೊಂದಿರುವ ಕೇಜ್ರಿವಾಲ್, ಈ ಬಾರಿ ಸುಮಾರು 3,000 ಮತಗಳಿಂದ ಸೋತಿದ್ದಾರೆ.
  2. ಜಂಗ್‌ಪುರದಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಡಿಸಿಎಂ ಆಗಿದ್ದ ಮನೀಷ್ ಸಿಸೋಡಿಯಾ ಅವರು ತರ್ವಿಂದರ್ ಸಿಂಗ್ ಮಾರ್ವಾ ವಿರುದ್ಧ ಸೋಲನ್ನಪ್ಪಿದ್ದಾರೆ. 9 ಸುತ್ತಿನ ಎಣಿಕೆಯ ನಂತರ, ಸಿಸೋಡಿಯಾ 572 ಮತಗಳಿಂದ ಹಿಂದುಳಿದಿದ್ದರು.
  3. ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅತಿಶಿ, ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಗೆಲುವು ಸಾಧಿಸಿದರು. ಸದ್ಯಕ್ಕೆ ಆಪ್ ಪಾಲಿನ ದಿಗ್ವಿಜಯವೆಂದರೆ ಇದೊಂದೇ.
  4. ಎಎಪಿಯ ಪತ್ಪರ್​ಗಂಜ್ ಅಭ್ಯರ್ಥಿ ಅವಧ್ ಓಜಾ ಸೋಲನ್ನಪ್ಪಿದ್ದಾರೆ. ಜನಪ್ರಿಯ ಯುಪಿಎಸ್ಸಿ ತರಬೇತುದಾರ ಓಜಾ, ಬಿಜೆಪಿಯ ರವೀಂದರ್ ಸಿಂಗ್ ನೇಗಿಗಿಂತ 21,000 ಮತಗಳಿಂದ ಹಿಂದುಳಿದಿದ್ದರು.
  5. ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇ. 60.54ರಷ್ಟು ಮತದಾನವಾಗಿದ್ದು, 2020ಕ್ಕೆ ಹೋಲಿಸಿದರೆ ಸುಮಾರು ಶೇ. 2.5 ರಷ್ಟು ಇಳಿಕೆಯಾಗಿದೆ. ಮುಸ್ತಫಾಬಾದ್‌ನಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಶೇ. 69.01ರಷ್ಟಿದ್ದರೆ, ಮೆಹ್ರೌಲಿಯಲ್ಲಿ ಶೇ. 53.02ರಷ್ಟು ಮತದಾನವಾಗಿದ್ದು, 61,000 ಕ್ಕೂ ಹೆಚ್ಚು ಪುರುಷರು ಮತ್ತು 53,578 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ.
  6. ಮತದಾನದ ನಂತರ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತದಾನದ ಡೇಟಾವನ್ನು ಪ್ರಕಟಿಸುವಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಶುಕ್ರವಾರ ಇಸಿಐ ಮತದಾರರ ಮತದಾನದ ಅಪ್ಲಿಕೇಶನ್‌ನಲ್ಲಿ ಮತದಾರರ ಮತದಾನದ ಡೇಟಾವನ್ನು ಬಿಡುಗಡೆ ಮಾಡಿದೆ.
  7. ಚುನಾವಣೋತ್ತರ ಸಮೀಕ್ಷೆಗಳು ಸುಮಾರು 3 ದಶಕಗಳ ನಂತರ ದೆಹಲಿಯಲ್ಲಿ ಬಿಜೆಪಿ ವಿಜಯವನ್ನು ಊಹಿಸಿತ್ತು. ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಬಹುತೇಕ ಭರ್ಜರಿ ಗೆಲುವು ಸಾಧಿಸಿರುವ ಎಎಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ, ಎಕ್ಸಿಟ್ ಪೋಲ್ ಫಲಿತಾಂಶವನ್ನು ನಂಬುವುದಿಲ್ಲ ಎಂದು ಆಪ್ ಹೇಳಿತ್ತು. ಇದೀಗ ಸಮೀಕ್ಷೆಗಳ ಭವಿಷ್ಯ ನಿಜವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
  8. 5 ಎಕ್ಸಿಟ್ ಪೋಲ್‌ಗಳ ಸರಾಸರಿ ಪ್ರಕಾರ, ಬಿಜೆಪಿ 39 ಸ್ಥಾನಗಳನ್ನು ಗೆಲ್ಲುತ್ತದೆ. ಇದು 36 ಸ್ಥಾನಗಳ ಬಹುಮತಕ್ಕಿಂತ ಹೆಚ್ಚಾಗಿರುವುದರಿಂದ ಬಿಜೆಪಿ ಸರ್ಕಾರ ರಚಿಸುವುದು ಪಕ್ಕಾ ಎನ್ನಲಾಗಿದೆ. ಎಎಪಿ 30 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಆಪ್ ಹೀನಾಯ ಸೋಲನ್ನು ಅನುಭವಿಸುವ ಸಾಧ್ಯತೆಯಿದೆ.
  9. ಈ ಬಾರಿ ಕಾಂಗ್ರೆಸ್ ಇನ್ನೂ ಒಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ. ಹೀಗಾಗಿ, ಈ ಚುನಾವಣೆಯಲ್ಲೂ ಶೂನ್ಯ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸತತ 3ನೇ ಬಾರಿ ದೆಹಲಿಯಲ್ಲಿ ಖಾತೆ ತೆರೆಯಲು ಸಾಧ್ಯವಾಗದ ಸ್ಥಿತಿ ತಲುಪಿದೆ.
  10. ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರ ಆರೋಪಗಳ ಹೊರತಾಗಿಯೂ ಎಎಪಿ ತನ್ನ ಆಡಳಿತ ದಾಖಲೆ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಪ್ರಚಾರ ಮಾಡಿತು. ದೆಹಲಿಯನ್ನು ಮರಳಿ ಪಡೆಯಲು ಉತ್ಸುಕನಾಗಿದ್ದ ಬಿಜೆಪಿ, ಎಎಪಿ ವಿರುದ್ಧದ ದುರಾಡಳಿತ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ಕೇಂದ್ರೀಕರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ