ಕಾರಿನಡಿ ಸಿಲುಕಿದ ಬೈಕನ್ನು ಅರ್ಧ ಕಿ.ಮೀ ಎಳೆದೊಯ್ದ 73 ವರ್ಷದ ವ್ಯಕ್ತಿ
ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 73 ವರ್ಷದ ಕಾರು ಚಾಲಕರೊಬ್ಬರು ಬೈಕ್ಗೆ ಡಿಕ್ಕಿ ಹೊಡೆದು, ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಬೈಕ್ ಅನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿದ್ದಾರೆ. ಸಾರ್ವಜನಿಕರ ಹಸ್ತಕ್ಷೇಪದಿಂದ ಕಾರು ನಿಂತಿದ್ದು, ಚಾಲಕನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆ ರಸ್ತೆ ಸುರಕ್ಷತೆ ಮತ್ತು ಚಾಲಕರ ಅಜಾಗರೂಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನವದೆಹಲಿ, ಸೆಪ್ಟೆಂಬರ್ 18: ಬೈಕ್ಗೆ ಡಿಕ್ಕಿ ಹೊಡೆದ ಬಳಿಕವೂ ಕಾರು ನಿಲ್ಲಿಸದೆ ಬೈಕ್ ಸಮೇತ ಸವಾರನನ್ನು ಕಾರಿನಲ್ಲಿ ಎಳೆದೊಯ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನೀಲಿ ಬಣ್ಣದ ಹೋಂಡಾ ಅಮೇಜ್ ಸೆಡಾನ್ ಕಾರು ರಸ್ತೆಯಲ್ಲಿ ಕಿಡಿಗಳನ್ನು ಹೊತ್ತಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ಹಿಂಬದಿಯ ಸ್ಕೂಟರ್ ಸವಾರರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕಾರು ನಿಲ್ಲಿಸಿದ ತಕ್ಷಣವೇ ಸಾರ್ವಜನಿಕರು 73 ವರ್ಷದ ಚಾಲಕನನ್ನು ಹೊರಗೆಳೆದು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ತಡರಾತ್ರಿ ರಸ್ತೆ ಬದಿಯಲ್ಲಿ ತಪಸ್ ಎಂಬ ಯುವಕ ಬೈಕ್ ಮೇಲೆ ಹೋಗುತ್ತಿದ್ದಾಗ ಈ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ. ಆಘಾತಕ್ಕೆ ಸವಾರ ಕೆಳಗೆ ಬಿದ್ದರೂ, ಬೈಕ್ ಕಾರಿನ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಆದರೂ ಕಾರು ನಿಲ್ಲಿಸದ ವೃದ್ಧ, ಅರ್ಧ ಕಿಲೋಮೀಟರ್ ದೂರ ಬೈಕನ್ನು ರಸ್ತೆಗೆ ಉಜ್ಜುತ್ತಾ ಎಳೆದೊಯ್ದಿದ್ದಾರೆ.
ಹಿಂದಿನಿಂದ ಬಂದ ಸ್ಕೂಟರ್ ಸವಾರರು ಕಾರು ನಿಲ್ಲಿಸು ಎಂದು ಕೂಗುತ್ತಾ ಬೆನ್ನಟ್ಟಿದ್ದಾರೆ. ಕಾರು ನಿಂತ ತಕ್ಷಣವೇ ಮಹಿಳೆಯೊಬ್ಬರು ಬಾಗಿಲು ತೆರೆದು ವೃದ್ಧನನ್ನು ಹೊರಗೆ ಎಳೆದಿದ್ದಾರೆ. ವಸಂತ್ ಕುಂಜ್ ನಿವಾಸಿ ವೇಣು ಗೋಪಾಲ್ (73) ಎಂದು ಗುರುತಿಸಲಾದ ಆ ವೃದ್ಧ, ಕಾರಿನೊಳಗೆ ಕೈಮುಗಿದು ಕುಳಿತಿದ್ದರೂ ಕುಪಿತಗೊಂಡ ಜನರು ಕಾಲರ್ ಹಿಡಿದು ಹೊರಗೆ ಎಳೆದು ತಳ್ಳಾಡಿ ಹಲ್ಲೆ ನಡೆಸಿದ್ದಾರೆ. ತಪ್ಪಾಗಿದ್ದರೆ ಕಾರು ನಿಲ್ಲಿಸಬೇಕಿತ್ತು, ನಾನೇನಾದರೂ ಕಾರಿನಡಿ ಸಿಲುಕಿದ್ದರೆ ಸಾಯುತ್ತಿದ್ದೆ ಎಂದು ಬೈಕ್ ಸವಾರ ಆಕ್ರೋಶ ಹೊರಹಾಕಿದ್ದಾನೆ.
ಮತ್ತಷ್ಟು ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಮದ್ಯ ಸೇವಿಸಿರಲಿಲ್ಲ: ಘಟನಾ ಸ್ಥಳಕ್ಕೆ ಬಂದ ದೆಹಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆತ ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅಪಘಾತದ ಆಘಾತ ಮತ್ತು ಗಾಬರಿಯಿಂದ ಆತ ಕಾರು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿರಬಹುದು ಎಂದು ಶಂಕಿಸಲಾಗಿದೆ.
ವಿಡಿಯೋ
🚨 CAR DRAGS BIKE FOR SEVERAL METRES IN DELHI’S RK PURAM
A video from RK Puram, Delhi shows a car dragging a motorcycle trapped underneath it on Africa Avenue Road.
The incident took place on September 17. Delhi Police said the motorcycle rider fell after the car hit his parked… pic.twitter.com/Dkfx8CEXQu
— contentkikamii (@contentkikamii) September 18, 2026
ಕಾನೂನು ಕ್ರಮ: ಆರೋಪಿ ವೇಣು ಗೋಪಾಲ್ ವಿರುದ್ಧ ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಇತರರ ಜೀವಕ್ಕೆ ಅಪಾಯ ತಂದೊಡ್ಡಿರುವ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯಲ್ಲಿ ವಾಹನಗಳ ಕೆಳಗೆ ಸಿಲುಕಿದವರನ್ನು ಕಿಲೋಮೀಟರ್ಗಟ್ಟಲೆ ಎಳೆದೊಯ್ಯುವ ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. 2023 ರ ಕುಖ್ಯಾತ ಕಾಂಝಾವಾಲಾ ಪ್ರಕರಣದಲ್ಲಿ ಯುವತಿಯೊಬ್ಬಳನ್ನು ಕಾರಿನ ಕೆಳಗೆ ಹಲವು ಕಿಲೋಮೀಟರ್ ಎಳೆದೊಯ್ದು ಆಕೆ ದಾರುಣವಾಗಿ ಸಾವನ್ನಪ್ಪಿದ್ದ ಘಟನೆಯನ್ನು ಮತ್ತೆ ನೆನಪಿಸಿದೆ.
ಪೊಲೀಸರ ಎಚ್ಚರಿಕೆ: ಅಪಘಾತ ಸಂಭವಿಸಿದಾಗ ಭಯದಿಂದ ವಾಹನ ನಿಲ್ಲಿಸದೆ ಓಡಿಸಲು ಪ್ರಯತ್ನಿಸುವುದು ಇನ್ನಷ್ಟು ಭೀಕರ ಅನಾಹುತಗಳಿಗೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಾಹನ ನಿಲ್ಲಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Fri, 18 September 26




