ಹಣಕ್ಕಾಗಿ 13 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ ಕೊಲೆ: ಕಾರಿನ ಡಿಕ್ಕಿಯಲ್ಲಿ ಶವಕಂಡು ಪೊಲೀಸರಿಗೇ ಶಾಕ್!
ಹಣಕ್ಕಾಗಿ 13 ವರ್ಷದ ಬಾಲಕನನ್ನು ಅಪಹರಿಸಿ ಹಾಲೋಬ್ರಿಕ್ಸ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮೃತ ಬಾಲಕನ ಏರಿಯಾದ್ದೇ ನಿವಾಸಿಯಾಗಿರುವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಬೆಂಗಳೂರು, ಸೆಪ್ಟೆಂಬರ್ 18: ಹಣಕ್ಕಾಗಿ 13 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ ಕೊಲೆಗೈದಿರುವ ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಾಲಕ ಪ್ರಜ್ವಲ್ ಮೃತ ದುರ್ದೈವಿಯಾಗಿದ್ದು, ಪ್ರಕರಣ ಸಂಬಂಧ ಆರೋಪಿ ಭಾಸ್ಕರ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ಮತ್ತು ಆರೋಪಿ ಇಬ್ಬರೂ ಯಲಹಂಕದ ವಿನಾಯಕನಗರ ನಿವಾಸಿಗಳಾಗಿದ್ದಾರೆ. ಕೃತ್ಯ ಎಸಗುವ ವೇಳೆ ಆರೋಪಿ ಮದ್ಯದ ನಶೆಯಲ್ಲಿದ್ದ ಎಂಬುದೂ ತನಿಖೆ ವೇಳೆ ಗೊತ್ತಾಗಿದೆ.
ಪಟಾಕಿ ತರಬೇಕೆಂದು ಹೇಳಿ ಬಾಲಕ ಕರೆದೊಯ್ದಿದ್ದ ಆರೋಪಿ
ಗಣಪತಿ ಮೆರವಣಿಗೆಗೆ ಪಟಾಕಿ ತರಬೇಕೆಂದು ಹೇಳಿ ಆರೋಪಿ ಭಾಸ್ಕರ್ ರೆಡ್ಡಿ ಮೊನ್ನೆ ಸಂಜೆ ಬಾಲಕ ಪ್ರಜ್ವಲ್ನ ಕರೆದೊಯ್ದಿದ್ದ. ಆದರೆ ಕಾರಿನಲ್ಲಿ ಪ್ರಜ್ವಲ್ನನ್ನು ಇಟ್ಟುಕೊಂಡು ಹಣಕ್ಕಾಗಿ ಆತನ ಮನೆಯವರ ಬಳಿ ಬೇಡಿಕೆ ಇಟ್ಟಿದ್ದ. ಬಾಲಕನಿಂದಲೂ ವಿಡಿಯೋ ಮಾಡಿಸಿ ಪೋಷಕರಿಗೆ ಬೆದರಿಕೆ ಹಾಕಿದ್ದ. ಆದರೆ ಎಣ್ಣೆ ಮತ್ತಿನಲ್ಲಿದ್ದ ಭಾಸ್ಕರ್ ಹಾಲೋಬ್ರಿಕ್ಸ್ನಿಂದ ಹೊಡೆದು ಕಾರಿನಲ್ಲೇ ಬಾಲಕನಿಗೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಬಾಲಕನ ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: 8 ಲಕ್ಷ ರೂ. ಲಂಚ ಪಡೆಯುವಾಗಲೇ ಬೆಂಗಳೂರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ GST ಸೂಪರಿಂಟೆಂಡೆಂಟ್
ಕಾರಿನ ಡಿಕ್ಕಿಯಲ್ಲಿ ಶವಕಂಡು ಪೊಲೀಸರೇ ಶಾಕ್
ಆಂಧ್ರಪ್ರದೇಶದ ಕಡೆ ಎಸ್ಕೇಪ್ ಆಗ್ತಿದ್ದ ಆರೋಪಿ ಭಾಸ್ಕರ್ ರೆಡ್ಡಿ, ಈ ವೇಳೆ ಗಾಬರಿಯಲ್ಲಿ ಗೋಡೆಗೆ ಕಾರು ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬಳ್ಳಾರಿ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಮಾಡಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಚಿಕ್ಕಜಾಲ ಪೊಲೀಸರು ಕಾರು ಪರಿಶೀಲನೆ ಮಾಡುವಾಗ ಡಿಕ್ಕಿ ಓಪನ್ ಮಾಡಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯಲ್ಲಿ ಬಾಲಕನ ಶವ ನೋಡಿ ಪೊಲೀಸರೇ ಅರೆ ಕ್ಷಣ ಶಾಕ್ ಆಗಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ಭಾಸ್ಕರ್ ರೆಡ್ಡಿ ಅಪಘಾತದ ನಾಟಕವಾಡಿದ್ದ. ದಾರಿಯಲ್ಲಿ ಬರುವಾಗ ಬಾಲಕ ಕಾರಿಗೆ ಅಡ್ಡ ಸಿಕ್ಕಿ ಮೃತಪಟ್ಟಿದ್ದ. ತನ್ನ ಗೆಳೆಯನ ಸೂಚನೆಯಂತೆ ಆಂಧ್ರದ ಕಡೆ ಮೃತದೇಹದ ಜೊತೆಗೆ ಹೋಗ್ತಿದ್ದೆ ಎಂದು ಬುರುಡೆ ಬಿಟ್ಟಿದ್ದ.
ಆದರೆ ಪ್ರಾಥಮಿಕ ತನಿಖೆಯಲ್ಲಿ ಭಾಸ್ಕರ್ ರೆಡ್ಡಿಯೇ ಬಾಲಕನ ಕೊಲೆ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಮತ್ತೋರ್ವ ಆರೋಪಿ ಏಳುಕುಂಡಲವಾಡಗಾಗಿ ಚಿಕ್ಕಜಾಲ ಪೊಲೀಸರಿಂದ ಹುಡುಕಾಟ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಪೊಲೀಸರಿಂದ ಹೆಚ್ಚಿನ ತನಿಖೆ ಬಳಿಕವೇ ಗೊತ್ತಾಗಬೇಕಿದೆ. ಆದರೆ ಈ ದುರುಳರ ಹಣದಾಯಕ್ಕೆ ಬಾಳಿ ಬದುಕಬೇಕಿದ್ದ ಬಾಲಕನ ಉಸಿರು ನಿಂತಿರುವುದು ನಿಜಕ್ಕೂ ದುರ್ದೈವವೇ ಸರಿ ಎಂಬ ಮಾತುಗಳು ಕೇಳಿಬಂದಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:47 am, Fri, 18 September 26




