ಮದುವೆ ಸಂಭ್ರಮದಲ್ಲೂ ವೈದ್ಯ ಧರ್ಮ ಮೆರೆದ ಕಣ್ಣೂರಿನ ವಧು: ಅಸ್ವಸ್ಥಗೊಂಡ ಅಡುಗೆ ಸಿಬ್ಬಂದಿಗೆ ತುರ್ತು ಚಿಕಿತ್ಸೆ
ಕಣ್ಣೂರಿನ ಡಾ. ಶೀರಿನ್ ಸುಬೈರ್ ತಮ್ಮ ಮದುವೆ ಸಂಭ್ರಮದ ನಡುವೆಯೂ, ಅಸ್ವಸ್ಥರಾದ ಕೇಟರಿಂಗ್ ಸಿಬ್ಬಂದಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಮೂಗಿನಿಂದ ರಕ್ತಸ್ರಾವ ಮತ್ತು ತಲೆಸುತ್ತು ಬಂದು ಕುಸಿದವರಿಗೆ ವಧುವಿನ ಉಡುಪಿನಲ್ಲೇ ಡಾ. ಶೀರಿನ್ ಚಿಕಿತ್ಸೆ ನೀಡಿದರು. ವೈದ್ಯೆಯ ಈ ಸಮಯಪ್ರಜ್ಞೆಯ ವಿಡಿಯೋ ವೈರಲ್ ಆಗಿದ್ದು, ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆ ಜ್ಞಾನದ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.

ಕಣ್ಣೂರು, ಆ.22: ಮದುವೆಯ ಸಂಭ್ರಮದಲ್ಲಿದ್ದ ವೈದ್ಯೆಯೊಬ್ಬರು ತಮ್ಮ ವೈಯಕ್ತಿಕ ಕ್ಷಣಗಳನ್ನು ಬದಿಗಿಟ್ಟು, ಶುಭಸಮಾರಂಭದಲ್ಲಿ ಅಸ್ವಸ್ಥಗೊಂಡ ಇಬ್ಬರು ಕೇಟರಿಂಗ್ ಮಹಿಳಾ ಸಿಬ್ಬಂದಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಣ್ಣೂರಿನ ಪನೂರ್ ಮೂಲದ ಡಾ. ಶೀರಿನ್ ಸುಬೈರ್ ಮತ್ತು ಡಾ. ರಿಜಾಜ್ ಅವರ ವಿವಾಹ ಸಮಾರಂಭದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ಮದುವೆ ಕಾರ್ಯಕ್ರಮದ ವೇಳೆ ಆಹಾರ ಸರಬರಾಜು ಮಾಡುತ್ತಿದ್ದ ಇಬ್ಬರು ಕೇಟರಿಂಗ್ ಮಹಿಳೆಯರಲ್ಲಿ ಒಬ್ಬರಿಗೆ ಮೂಗಿನಿಂದ ತೀವ್ರ ರಕ್ತಸ್ರಾವ ಕಾಣಿಸಿಕೊಂಡರೆ, ಮತ್ತೊಬ್ಬರು ತಲೆಸುತ್ತು ಬಂದು ಕುಸಿದುಬಿದ್ದರು. ಶೀರಿನ್ ವೈದ್ಯೆ ಎಂಬುದು ತಿಳಿದಿದ್ದ ಆಪ್ತರು ತಕ್ಷಣವೇ ವಧುವಿನ ಉಡುಪಿನಲ್ಲಿದ್ದ ಅವರ ಬಳಿ ಸಹಾಯ ಕೇಳಿದರು. ಕ್ಷಣವೂ ತಡಮಾಡದ ಶೀರಿನ್, ಮದುವೆ ಮಂಟಪದಲ್ಲೇ ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದರು.
ಇಲ್ಲಿದೆ ನೋಡಿ ವಿಡಿಯೋ:
முதலில் மருத்துவர் பின்னர் தான் மணப்பெண்
மண பந்தலில் அமர்ந்த மருத்துவர் ஷிரின் வரவேற்பு நிகழ்ச்சியில்
உணவு பரிமாற கேட்டரிங் வேலைக்கு வந்த பெண்ணுக்கு
மூக்கில் இருந்து ரத்தம் வடிய அவர் செய்வது அறியாமல் சுற்றி இருந்தவர்கள் நிற்க pic.twitter.com/PWdQqmvIzt
— Rajini (@rajini198080) August 21, 2026
ಮೂಗಿನ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಗೆ ಮುಂದೆ ಬಾಗಿ, 10-15 ನಿಮಿಷಗಳ ಕಾಲ ಮೂಗನ್ನು ಗಟ್ಟಿಯಾಗಿ ಹಿಡಿದುಕೊಂಡು ಬಾಯಿಯಿಂದ ಉಸಿರಾಡಲು ಸೂಚಿಸಿದರು. ತಲೆಸುತ್ತು ಬಂದಿದ್ದ ಮಹಿಳೆಗೆ ಕಾಲುಗಳನ್ನು ಮೇಲಕ್ಕೆತ್ತಿ ಮಲಗುವಂತೆ ಮಾಡಿ ಚಿಕಿತ್ಸೆ ನೀಡಿದರು. ಆಟೋಮ್ಯಾಟಿಕ್ ಆಗಿ ಕ್ಯಾಮೆರಾದಲ್ಲಿ ಸೆರೆಯಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶೀರಿನ್ ಅವರು ಒಟ್ಟಾಪಾಲಂನ ವಳ್ಳುವನಾಡ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಪ್ರಥಮ ವರ್ಷದ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಆಸ್ಟನ್ ಮಾರ್ಟಿನ್ ಆಕ್ಸಿಡೆಂಟ್: ಎಂಪಿ ಮಗನ ಡ್ರಗ್ಸ್, ಆಲ್ಕೋಹಾಲ್ ಟೆಸ್ಟ್ ರಿಪೋರ್ಟ್ ನೆಗೆಟಿವ್
“ಇದೇನು ದೊಡ್ಡ ವಿಷಯವಲ್ಲ, ರಸ್ತೆಯಲ್ಲಿ ಯಾರಾದರೂ ಕುಸಿದುಬಿದ್ದಾಗ ಸಹಾಯ ಮಾಡುವುದು ವೈದ್ಯರಾಗಿ ನಮ್ಮ ಕರ್ತವ್ಯ” ಎಂದು ಶೀರಿನ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಮೂಲಭೂತ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ (CPR) ಜ್ಞಾನವಿರಬೇಕಾದ ಅಗತ್ಯತೆಯನ್ನು ಅವರು ಈ ವೇಳೆ ಪ್ರತಿಪಾದಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಪಿಜಿ ಮಾಡುತ್ತಿರುವ ಅವರ ಪತಿ ಡಾ. ರಿಜಾಜ್ ಕೂಡ ಹೆಂಡತಿಯ ಈ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Sat, 22 August 26




