ಸಂಸತ್ ಹೊರಗೆ ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆಗೆ ಮಾಜಿ ಅಧಿಕಾರಿಗಳ ವಿರೋಧ; ಕ್ಷಮೆ ಯಾಚನೆಗೆ ಒತ್ತಾಯ

ಲೋಕಸಭಾ ಅಧಿವೇಶನದ ವೇಳೆ 5 ದಿನಗಳ ಹಿಂದೆ ಸಂಸತ್ ಹೊರಗೆ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಎಲ್​ಪಿಜಿ ಬಿಕ್ಕಟ್ಟನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ 'ಚಾಯ್-ಪಕೋಡ' ಪ್ರತಿಭಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ 204 ಮಾಜಿ ಅಧಿಕಾರಿಗಳು ಸಹಿ ಮಾಡಿ ಬಹಿರಂಗ ಪತ್ರ ಬರೆದಿದ್ದಾರೆ. ಸ್ಪೀಕರ್ ನೀಡಿದ ಸ್ಪಷ್ಟ ಸೂಚನೆಯನ್ನು ನಿರ್ಲಕ್ಷ್ಯಿಸಿದ ರಾಹುಲ್ ಗಾಂಧಿ ವಿರುದ್ಧ ಪತ್ರದಲ್ಲಿ ಆಕ್ರೋಶ ಹೊರಹಾಕಲಾಗಿದೆ.

ಸಂಸತ್ ಹೊರಗೆ ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆಗೆ ಮಾಜಿ ಅಧಿಕಾರಿಗಳ ವಿರೋಧ; ಕ್ಷಮೆ ಯಾಚನೆಗೆ ಒತ್ತಾಯ
Rahul Gandhi Protest Outside The Parliament
Image Credit source: PTI

Updated on: Mar 17, 2026 | 3:19 PM

ನವದೆಹಲಿ, ಮಾರ್ಚ್ 17: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾರ್ಚ್ 12ರಂದು ಅಧಿವೇಶನದ (Parliament Session) ವೇಳೆ ಸಂಸತ್ತಿನ ಪ್ರವೇಶದ್ವಾರದಲ್ಲಿ ಕುಳಿತು ವಿಪಕ್ಷದ ಸಂಸದರೊಂದಿಗೆ ಚಹಾ ಮತ್ತು ಪಕೋಡ ಸೇವಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು 204 ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. “ಮಾರ್ಚ್ 12ರ ಘಟನೆ ತೀವ್ರ ಕಳವಳಕಾರಿ ಮತ್ತು ಉದ್ದೇಶಪೂರ್ವಕವಾಗಿ ಸಂಸದೀಯ ಅಧಿಕಾರದ ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಸಹಿದಾರರು ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಇತರೆ ವಿಪಕ್ಷ ನಾಯಕರ ಇತ್ತೀಚಿನ ನಡವಳಿಕೆಯನ್ನು ಖಂಡಿಸಿ 204 ಮಾಜಿ ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದ ಸಂಯೋಜಕರಾದ ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್, ಈ ಘಟನೆಯು ಭಾರತದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯ ಘನತೆ ಮತ್ತು ಸಾಂವಿಧಾನಿಕ ನೈತಿಕತೆಗೆ ಸವಾಲನ್ನು ಒಡ್ಡುತ್ತದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಪಕ್ಷಪಾತ ಮಾಡಿಲ್ಲ, ಸದನಕ್ಕಿಂತ ವಿಪಕ್ಷ ನಾಯಕ ಮೇಲಲ್ಲ; ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತಿರುಗೇಟು

ಮಾರ್ಚ್ 12ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿ ಸ್ಪೀಕರ್ ಅವರ ಸ್ಪಷ್ಟ ಸೂಚನೆಗಳನ್ನು ನಿರ್ಲಕ್ಷಿಸಿದ್ದರು. ಅವರು ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ ಮತ್ತು ಪಕೋಡ, ಬಿಸ್ಕತ್ ಸೇವಿಸಿದರು. ಇದು ರಾಷ್ಟ್ರದ ಅತ್ಯುನ್ನತ ಶಾಸಕಾಂಗ ಸಂಸ್ಥೆಯಲ್ಲಿ ಅನುಚಿತ ಮತ್ತು ಅಸಂಸದೀಯ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ರಾಹುಲ್ ಗಾಂಧಿ ಈ ವರ್ತನೆಗಾಗಿ ರಾಷ್ಟ್ರದ ಕ್ಷಮೆಯಾಚಿಸಬೇಕು. ಸಂಸತ್ತಿನ ಘನತೆ, ಅಧಿಕಾರ ಮತ್ತು ಸಾಂಸ್ಥಿಕ ಪಾವಿತ್ರ್ಯವನ್ನು ಕಾಪಾಡಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಮಾಡಲಾಗುವ ಇಂತಹ ನಿರಂತರ ಅಗೌರವವು ಸಂಸತ್ತಿನ ವಿಶ್ವಾಸಾರ್ಹತೆಯನ್ನು ಹಾಳು ಮಾಡುವುದಲ್ಲದೆ, ಪ್ರಜಾಪ್ರಭುತ್ವದ ಅಡಿಪಾಯವನ್ನು ಅಲುಗಾಡಿಸುವ ಬೆದರಿಕೆ ಹಾಕುತ್ತದೆ ಎಂದು ಪತ್ರವು ಎಚ್ಚರಿಸಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ, ಸಂಸತ್ ಹೊರಗೆ ಪ್ರತಿಭಟನೆ

ಈ ಬಗ್ಗೆ ANI ಜೊತೆ ಮಾತನಾಡಿದ ಎಸ್‌ಪಿ ವೈದ್, “ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರ ನಡವಳಿಕೆಯು ಹಕ್ಕು ಮತ್ತು ದುರಹಂಕಾರದ ಪ್ರಜ್ಞೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರ ಸಂಸತ್ತಿನಲ್ಲಿ ಅವರ ನಡವಳಿಕೆ ವಿರೋಧ ಪಕ್ಷದ ನಾಯಕನ ನಡವಳಿಕೆಗೆ ತಕ್ಕುದಲ್ಲ, ಇದು ತುಂಬಾ ಜವಾಬ್ದಾರಿಯುತ ಹುದ್ದೆ ಎಂಬುದನ್ನು ಅವರು ಅರಿಯಬೇಕು. ತಮ್ಮ ಸ್ಥಾನದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us