ತಿಹಾರ್ ಜೈಲಿನಲ್ಲಿ ಆಯುರ್ವೇದ ಚಿಕಿತ್ಸೆಗೆ ಬೇಡಿಕೆ ಇಟ್ಟ ಉಗ್ರ ಯಾಸಿನ್ ಭಟ್ಕಳ್

Yasin Bhatkal: ಯಾಸಿನ್ ಭಟ್ಕಳ್​ಗೆ ಗಂಟು ನೋವಿನ ಸಮಸ್ಯೆ ಇದೆ. ಆ ಬಗ್ಗೆ ಅವರು ಆಯುರ್ವೇದಿಕ್ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಲು ಕೇಳಿಕೊಂಡಿದ್ದಾರೆ. ಅದನ್ನು ನಾವು ನೀಡುತ್ತೇವೆ ಎಂದು ಜೈಲು ಡಿಜಿ ಸಂದೀಪ್ ಗೋಯೆಲ್ ಹೇಳಿಕೆ ನೀಡಿದ್ದಾರೆ.

ತಿಹಾರ್ ಜೈಲಿನಲ್ಲಿ ಆಯುರ್ವೇದ ಚಿಕಿತ್ಸೆಗೆ ಬೇಡಿಕೆ ಇಟ್ಟ ಉಗ್ರ ಯಾಸಿನ್ ಭಟ್ಕಳ್
ಯಾಸಿನ್ ಭಟ್ಕಳ್ (ಸಂಗ್ರಹ ಚಿತ್ರ)
Edited By:

Updated on: Sep 10, 2021 | 1:51 PM

ದೆಹಲ: ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಯಾಸಿನ್ ಭಟ್ಕಳ್ ತಿಹಾರ್ ಜೈಲು ಆಡಳಿತ ಮಂಡಳಿ ಬಳಿಯಲ್ಲಿ ಆಯುರ್ವೇದ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಎಂದು ಕೇಳಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗೂ ಜೈಲು ಆಡಳಿತ ಆಯುರ್ವೇದ ಚಿಕಿತ್ಸೆ ಕೊಡಿಸಬೇಕು ಎಂಬ ಯಾಸಿನ್ ಭಟ್ಕಳ್ ಕೋರಿಕೆಯನ್ನು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.

ಯಾಸಿನ್ ಭಟ್ಕಳ್​ಗೆ ಗಂಟು ನೋವಿನ ಸಮಸ್ಯೆ ಇದೆ. ಆ ಬಗ್ಗೆ ಅವರು ಆಯುರ್ವೇದಿಕ್ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಲು ಕೇಳಿಕೊಂಡಿದ್ದಾರೆ. ಅದನ್ನು ನಾವು ನೀಡುತ್ತೇವೆ ಎಂದು ಜೈಲು ಡಿಜಿ ಸಂದೀಪ್ ಗೋಯೆಲ್ ಹೇಳಿಕೆ ನೀಡಿದ್ದಾರೆ.

ಯಾಸಿನ್ ಭಟ್ಕಳ್ ಇಂಡಿಯನ್ ಮುಜಾಹಿದೀನ್ ಸಂಘಟನೆ ಮಾಡಿರುವ ಆರೋಪ ಹೊತ್ತುಕೊಂಡಿದ್ದಾರೆ. ಹಾಗೂ ಭಾರತದ ಕೆಲವು ಕಡೆಗಳಲ್ಲಿ ನಡೆದ ಬಾಂಬ್ ದಾಳಿಯ ಆರೋಪ ಹೊಂದಿದ್ದಾರೆ. ಜರ್ಮನಿ ಬೇಕರಿ ಬ್ಲಾಸ್ಟ್, ದೆಹಲಿಯ ಜಾಮಿಯಾ ಮಸೀದಿ ಶೂಟಿಂಗ್, ವಾರಣಾಸಿ ಬ್ಲಾಸ್ಟ್, ಹೈದರಾಬಾದ್ ಬ್ಲಾಸ್ಟ್ ಹಾಗೂ ಮುಂಬೈ ಬಾಂಬ್ ದಾಳಿಯ ಆರೋಪ ಯಾಸಿನ್ ಮೇಲಿದೆ.

ಭಯೋತ್ಪಾದಕ, ಉಗ್ರಗಾಮಿ ಯಾಸಿನ್​ನನ್ನು 2013 ರಲ್ಲಿ ನೇಪಾಳದಲ್ಲಿ ಬಂಧಿಸಲಾಗಿತ್ತು. ಇಂಡಿಯನ್ ಮುಜಾಹಿದೀನ್​ನ ಮತ್ತೊಬ್ಬ ಅಸಾದುಲ್ಲಾ ಅಖ್ತರ್ ಜೊತೆಗೆ ಯಾಸಿನ್​ನನ್ನು ಬಂಧಿಸಲಾಗಿತ್ತು. ಆ ಮೂಲಕ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಹಲವರ ಹೆಸರು ಬಯಲಾಗಿತ್ತು.

ಜೈಲು ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಯಾಸಿನ್ ಭಟ್ಕಳ್ ತಿಹಾರ್ ಜೈಲಿನ, ಜೈಲು ಸಂಖ್ಯೆ 2 ರಲ್ಲಿ ಬಂಧಿತರಾಗಿದ್ದಾರೆ. ಗ್ಯಾಂಗ್​ಸ್ಟರ್ ಛೋಟಾ ರಾಜನ್ ಹಾಗೂ ಇಂಡಿಯನ್ ಮುಜಾಹಿದೀನ್​ನ ತೆಹ್​ಸೀನ್ ಅಖ್ತರ್ ಕೂಡ ಅದೇ ಜೈಲಿನಲ್ಲಿ ಇದ್ದಾರೆ.

ಮುಂಬೈನ ಮುಕೇಶ್ ಅಂಬಾನಿ ಮನೆಯ ಮುಂದೆ ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಎಸ್​ಯುವಿ ಕಾರ್ ನಿಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದ ಜೈಶ್ ಉಲ್ ಹಿಂದ್ ಸಂಘಟನೆಯ ಜೊತೆಗೆ ಟೆಲಿಗ್ರಾಂ ಚಾನಲ್​​ ಮೂಲಕ ಸಂವಹನ ನಡೆಸಿದ್ದ ತೆಹ್​ಸೀನ್ ಅಖ್ತರ್ ಇದೀಗ ಹಲವು ತನಿಖಾ ಕಾರ್ಯಗಳ ಸುಳಿಯಲ್ಲಿ ಇದ್ದಾನೆ.

ಇದನ್ನೂ ಓದಿ: Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!

ಇದನ್ನೂ ಓದಿ: ಇರಾಕ್​​ನಲ್ಲಿ ಐಸಿಸ್​ ಉಗ್ರರಿಂದ ಭೀಕರ ದಾಳಿ; 13 ಪೊಲೀಸರು ಸಾವು, ಮೂವರಿಗೆ ಗಾಯ

Web contact

TV9 Kannada

Read More
Follow Us