AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು, ವಂಚನೆ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್​ ನಾಯಕರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ತಿರುಗೇಟು ನೀಡಿದ್ದಾರೆ.

ಸುಳ್ಳು, ವಂಚನೆ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಸುಳ್ಳು, ವಂಚನೆ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಹರೀಶ್ ಜಿ.ಆರ್​. ನವದೆಹಲಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 01, 2024 | 11:07 PM

Share

ದೆಹಲಿ, ನವೆಂಬರ್ 01: ಸುಳ್ಳು, ವಂಚನೆ, ನಕಲಿ, ಲೂಟಿ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರಗಳು ಎಂದು ಪ್ರಧಾನಿ ಮೋದಿ (Narendra Modi) ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಸರ್ಕಾರದ 100 ದಿನಗಳ ಯೋಜನೆ ಅನ್ನೋದು ಬಿಟ್ಟಿ ಪ್ರಚಾರ. ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್​ ಆಡಳಿತದಲ್ಲಿರುವ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, ವರ್ಷಕ್ಕೆ‌ 2 ಕೋಟಿ‌ ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಏನಾಯ್ತು? ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಯಾಕೆ? ಜನರ‌ ಉಳಿತಾಯದ ಮಟ್ಟ ಕನಿಷ್ಟ ಮಟ್ಟಕ್ಕೆ ಏಕೆ ಕುಸಿದಿದೆ. ನಿಮ್ಮ ಅಚ್ಛೇ ದಿನದ ಭರವಸೆ ಏನಾಯ್ತು ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಖರ್ಗೆ ನೀಡಿದ ಎಚ್ಚರಿಕೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಮೋದಿ ವಾಗ್ದಾಳಿ

ಮಹಾರಾಷ್ಟ್ರದಲ್ಲಿ ನೀವು ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ದೆಹಲಿ ಏರ್​ಪೋರ್ಟ್​ನ ಮೇಲ್ಚಾವಣಿ ಹಾರಿಹೋಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಸೋರುತ್ತಿದೆ. ಅಟಲ್ ಸೇತು ಬಿರುಕು ಬಿಟ್ಟಿದೆ, ಗುಜರಾತ್​ನ ಮೊರ್ಬಿ ಸೇತುವೆ ಕುಸಿದಿದೆ. ಬಿಹಾರದಲ್ಲಿ ಹೊಸ ಸೇತುವೆಗಳು ಕುಸಿದು ಬೀಳುವುದು ಸಾಮಾನ್ಯವಾಗಿದೆ. ದೇಶದ ಹಲವೆಡೆ ಲೆಕ್ಕವಿಲ್ಲದಷ್ಟು ರೈಲು ಅಪಘಾತಗಳು ಸಂಭವಿಸಿವೆ, ಆದರೆ ಸಚಿವರು ರೀಲ್ಸ್ ಪ್ರಚಾರದಲ್ಲಿ‌ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ನರೇಂದ್ರ ಮೋದಿ‌‌ಯೇ ಗ್ಯಾರಂಟಿ ಎನ್ನುವುದು ಬಿಜೆಪಿಯ ಕ್ರೂರ ಜೋಕ್: ಖರ್ಗೆ

ಉದ್ಯಮಿ ಅದಾನಿ ಹಗರಣ, ಸೆಬಿ ಹಗರಣ ಹಾಗೂ ಎಲೆಕ್ಟ್ರೋರಾಲ್ ಬಾಂಡ್ ಹಗರಣ ಇವೆಲ್ಲ ಏನು? ನೀರವ್, ಮಲ್ಯ, ಚೋಕ್ಸಿ‌ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟಿದ್ಯಾರು? ನಿಮ್ಮ ಆಡಳಿತದಲ್ಲಿ ಎಸ್‌ಸಿಗಳ ವಿರುದ್ಧದ ಅಪರಾಧಗಳಲ್ಲಿ 46% ಹೆಚ್ಚಳವಾಗಿದೆ. ಎಸ್‌ಟಿಗಳ ವಿರುದ್ಧದ ಅಪರಾಧಗಳಲ್ಲಿ 48% ಹೆಚ್ಚಳವಾಗಿದೆ. ಎಸ್​ಸಿ/ಎಸ್​ಟಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚಳವಾಗಿದೆ. 2014ಕ್ಕೆ ಹೋಲಿಸಿದರೆ 2022ರಲ್ಲಿ 1.7 ಪಟ್ಟು ಹೆಚ್ಚಾಗಿದೆ. ನರೇಂದ್ರ ಮೋದಿ‌‌ಯೇ ಗ್ಯಾರಂಟಿ ಎನ್ನುವುದು ಬಿಜೆಪಿಯ ಕ್ರೂರ ಜೋಕ್​ ಎಂದು ತೀವ್ರ ಹರಿಹಾಯ್ದಿದ್ದಾರೆ.

ಬಿಜೆಪಿ ಇವುಗಳಲ್ಲಿ 50% ಜಾರಿಗೆ ತಂದಿಲ್ಲ: ಸುರ್ಜೇವಾಲ 

ಇನ್ನು ರಣದೀಪ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿದ್ದು, ಸಾರ್ವಜನಿಕ ಜೀವನದಲ್ಲಿ ಹುದ್ದೆಯ ಜವಾಬ್ದಾರಿಯು ಅತ್ಯುನ್ನತವಾಗಿರುತ್ತದೆ. ಆ ಹುದ್ದೆಗೆ ಯಾವುದೇ ಬಾಧ್ಯತೆ ಬರಬಾರದು. ಕರ್ನಾಟಕದ ಜನಕಲ್ಯಾಣ ಯೋಜನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಬೇಕು ಎಂದಿದ್ದಾರೆ.

ಗ್ಯಾರಂಟಿಗಳ ಯೋಜನೆಗಳಿಗೆ ಕರ್ನಾಟಕವೇ ಮಾದರಿ. ಜವಾಬ್ದಾರಿಯುತ ಆಡಳಿತಕ್ಕೆ ಕರ್ನಾಟಕ ಅಧ್ಯಯನದ ವಸ್ತುವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇವುಗಳಲ್ಲಿ 50% ಅನ್ನು ಜಾರಿಗೆ ತಂದಿಲ್ಲ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.