ಎಸ್ಐಆರ್ ಕುರಿತ ಗಲಾಟೆ ಬಳಿಕ ಸಂಸತ್ ಅಧಿವೇಶನ ಮುಂದೂಡಿಕೆ; ಇಂದಿನ ಕಲಾಪದ ಮುಖ್ಯಾಂಶಗಳು
ಇಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚುನಾವಣೆ ನಡೆಯಲಿರುವ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಷಯದ ಕುರಿತು ವಿರೋಧ ಪಕ್ಷದ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ವಿಪಕ್ಷಗಳ ಗಲಾಟೆ, ಪ್ರತಿಭಟನೆಯಿಂದಾಗಿ ಲೋಕಸಭಾ ಅಧಿವೇಶನವನ್ನು ನಾಳೆಗೆ ಮುಂದೂಡಲಾಯಿತು. ಇಂದು ಲೋಕಸಭಾ ಕಲಾಪದಲ್ಲಿ ಏನೇನಾಯ್ತು ಎಂಬುದರ ಹೈಲೈಟ್ಸ್ ಇಲ್ಲಿದೆ.

ನವದೆಹಲಿ, ಡಿಸೆಂಬರ್ 1: ಇಂದಿನಿಂದ ಲೋಕಸಭಾ ಚಳಿಗಾಲದ ಅಧಿವೇಶನ (Lok Sabha Winter Session) ಆರಂಭವಾಗಿದೆ. ಅಧಿವೇಶನಕ್ಕೂ ಮುನ್ನ, ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರು ಸಹಕರಿಸುವಂತೆ ಮನವಿ ಮಾಡಿದರು. ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಆಕ್ರೋಶದ ನಡುವೆಯೇ ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಪ್ರಾರಂಭವಾಯಿತು. ಸಂಸತ್ತಿನ ಪ್ರಸ್ತುತ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನವಾದ ಇಂದು ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಗದ್ದಲ ಉಂಟಾಯಿತು. ಕಲಾಪ ನಡೆಯುತ್ತಿರುವಾಗಲೂ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಅವರು SIR ಕುರಿತು ಚರ್ಚೆಗೆ ಒತ್ತಾಯಿಸುತ್ತಿದ್ದರು.
ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಹೊಸ ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮೇಲ್ಮನೆಯಲ್ಲಿ ಸ್ವಾಗತಿಸಿದರು. ರಾಧಾಕೃಷ್ಣನ್ ಅವರ ರಾಜಕೀಯ ಪ್ರಯಾಣವನ್ನು ಶ್ಲಾಘಿಸುತ್ತಾ, ಅವರು ಸಂಸದರಿಗೆ ಸ್ಫೂರ್ತಿ ಎಂದು ಕರೆದರು.
ಇದನ್ನೂ ಓದಿ: ಚಳಿಗಾಲದ ಅಧಿವೇಶನ ಸೋಲಿನ ಹತಾಶೆಯ ಅಭಿವ್ಯಕ್ತಿ ತಾಣವಾಗಿ ಬದಲಾಗಬಾರದು: ಪ್ರಧಾನಿ ಮೋದಿ
ವಿರೋಧ ಪಕ್ಷವು ಎಸ್ಐಆರ್ ಕುರಿತು ಚರ್ಚೆಗೆ ಒತ್ತಾಯಿಸುತ್ತಿದ್ದಂತೆ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ಕೇಂದ್ರ ಸರ್ಕಾರವು ತಂಬಾಕು ಮತ್ತು ಪಾನ್ ಮಸಾಲಾ ಮೇಲೆ ಸುಂಕ ವಿಧಿಸಲು ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, ಆರೋಗ್ಯ ಭದ್ರತೆಯ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿತು.
#ParliamentWinterSession | Delhi: PM Narendra Modi says, “…I urge all parties that the winter session should not become a battlefield for frustration caused by defeat, or an arena for arrogance after victory. As public representatives, we should handle the responsibility and… pic.twitter.com/k4uYlb6qij
— ANI (@ANI) December 1, 2025
ವಿರೋಧ ಪಕ್ಷವು ಸಂಸತ್ತಿನಲ್ಲಿ ನಾಟಕವಾಡುತ್ತಿದೆ ಎಂದು ಆರೋಪಿಸಿದ ನಂತರ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಅತಿದೊಡ್ಡ ನಾಟಕಬಾಜ್” ಎಂದು ಕರೆಯಿತು. “ಚಳಿಗಾಲದ ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಮುಂದಿರುವ ಪ್ರಮುಖ ವಿಷಯಗಳನ್ನು ತಿಳಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ನಾಟಕದ ಭಾಷಣ ಮಾಡಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ನಿರಂತರ ಪ್ರತಿಭಟನೆಯ ನಡುವೆ ಇಂದು ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಗದ್ದಲದ ನಡುವೆಯೇ, ಮಣಿಪುರದಲ್ಲಿ GST ಕಾನೂನಿಗೆ ತಿದ್ದುಪಡಿಗಳನ್ನು ಜಾರಿಗೆ ತರುವ ಮಸೂದೆಯನ್ನು ಸಂಕ್ಷಿಪ್ತ ಚರ್ಚೆಯ ನಂತರ ಅಂಗೀಕರಿಸಲಾಯಿತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ವಿಧಿಸಲು ಎರಡು ಮಸೂದೆಗಳನ್ನು ಮತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ ಅನ್ನು ಮಂಡಿಸಿದರು.
SIR ಕುರಿತು ವಿರೋಧ ಪಕ್ಷಗಳ ಗದ್ದಲದ ನಡುವೆ ಲೋಕಸಭೆ ಅಧಿವೇಶನದ ನಾಳೆ ಮುಂದೂಡಿಕೆಯಾಗಿದೆ.
ಭಾನುವಾರ, ವಿರೋಧ ಪಕ್ಷಗಳೊಂದಿಗೆ ಒಮ್ಮತವನ್ನು ಮೂಡಿಸಲು ಮತ್ತು ಸದನದ ಸುಗಮ ಕಾರ್ಯನಿರ್ವಹಣೆಗಾಗಿ ಮೋದಿ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ 36 ರಾಜಕೀಯ ಪಕ್ಷಗಳ 50 ನಾಯಕರು ಭಾಗವಹಿಸಿದ್ದರು. ಇದಲ್ಲದೆ, ಚಳಿಗಾಲದ ಅಧಿವೇಶನಕ್ಕಾಗಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ನ ಉನ್ನತ ನಾಯಕರು ಭಾನುವಾರ ಸಂಜೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಹಾಜರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




