ಫಗ್ವಾರ: ಶ್ರೀರಾಮನನ್ನು ಕೀಳು ಭಾಷೆಯಲ್ಲಿ ನಿಂದಿಸಿದ ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕಿಯನ್ನು ವಜಾಗೊಳಿಸಲಾಗಿದೆ. ಈ ಪ್ರಾಧ್ಯಾಪಕಿ ಹೆಸರು ಗುರ್ಸಂಗ್ ಪ್ರೀತ್ ಕೌರ್ ಎಂದಾಗಿದ್ದು, ಇವರು ಭಾಷಣ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅದನ್ನು ನೋಡಿದ ಜನರು ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಹಿಂದೂ ದೇವರಿಗೆ ಅವಮಾನ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದರು. ಅದರ ಬೆನ್ನಲ್ಲೇ ಯೂನಿರ್ವಸಿಟಿ ಇವರನ್ನು ವಜಾಗೊಳಿಸಿದೆ. ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿ ಒಂದು ಖಾಸಗಿ ವಿಶ್ವವಿದ್ಯಾಲಯವಾಗಿದ್ದು, ಗುರ್ಸಂಗ್ ಪ್ರೀತ್ ಕೌರ್ ಅವರನ್ನು ವಜಾಗೊಳಿಸಿದ್ದಾಗಿ ಹೊರಡಿಸಿದ ಪ್ರಕಟಣೆಯಲ್ಲಿ, ಸಹಾಯಕ ಪ್ರಾಧ್ಯಾಪಕಿ ಮಾಡಿದ ಭಾಷಣದಿಂದ ಅನೇಕರಿಗೆ ನೋವಾಗಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಇದು ಆ ಪ್ರಾಧ್ಯಾಪಕಿಯ ವೈಯಕ್ತಿಕ ಹೇಳಿಕೆಯೇ ಹೊರತು ನಮ್ಮ ವಿಶ್ವವಿದ್ಯಾನಿಲಯ ಇದಕ್ಕೆ ಜವಾಬ್ದಾರ ಅಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದೆ.
ಈ ಲವ್ಲಿ ಪ್ರೊಫೆಶನ್ ಯೂನಿವರ್ಸಿಟಿ ಇರುವುದು ಪಂಜಾಬ್ನ ಜಲಂಧರ್ನಲ್ಲಿ. ಅದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಗುರ್ಸಂಗ್ ಪ್ರೀತ್ ಕೌರ್, ಶೈಕ್ಷಣಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ, ನಿಜ ಹೇಳಬೇಕೆಂದರೆ ಶ್ರೀರಾಮ ನಿಜಕ್ಕೂ ಒಳ್ಳೆಯವನಲ್ಲ. ರಾವಣನೇ ಒಳ್ಳೆಯ ವ್ಯಕ್ತಿ. ರಾಮನೊಬ್ಬ ಕುತಂತ್ರಿ. ಸೀತೆಯನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಎಲ್ಲ ಉಪಾಯ ಮಾಡಿದ. ಸೀತೆಯನ್ನು ತೊಂದರೆಗೆ ನೂಕಿ, ಬಳಿಕ ರಾವಣನನ್ನು ದೂಷಿಸಿದ. ಆದರೆ ಈಗ ಇಡೀ ಜಗತ್ತು ಶ್ರೀರಾಮನನ್ನು ಪೂಜಿಸುತ್ತದೆ, ರಾವಣನನ್ನು ಕೆಟ್ಟವನು ಎಂದು ಹೇಳುತ್ತಿದೆ. ಅಂದ ಮೇಲೆ ನಾನೇನು ಮಾಡಲು ಸಾಧ್ಯ ಎಂದು ಹೇಳಿದ್ದರು.
ಕೋಟ್ಯಂತರ ಹಿಂದುಗಳು ದೇವರೆಂದು ನಂಬುವ, ಪೂಜಿಸುವ, ಆರಾಧಿಸುವ ಶ್ರೀರಾಮನ ಬಗ್ಗೆ ಗುರ್ಸಂಗ್ ಹೇಳಿದ ಮಾತುಗಳು ವಿವಾದವನ್ನೇ ಸೃಷ್ಟಿಸಿದ್ದವು. ಕೂಡಲೇ ಯೂನಿವರ್ಸಿಟಿ ಕ್ರಮ ಕೈಗೊಂಡಿದೆ. ನಮ್ಮದು ಜಾತ್ಯತೀತ ತತ್ವ ಪಾಲಿಸುವ ವಿಶ್ವ ವಿದ್ಯಾಲಯವಾಗಿದೆ. ಇಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳೂ ಇದ್ದಾರೆ. ಅವರೆಲ್ಲರ ನಂಬಿಕೆಗಳನ್ನೂ ನಮ್ಮ ಯೂನಿರ್ವಿಸಿಟಿ ಗೌರವಿಸುತ್ತದೆ ಮತ್ತು ಪ್ರೀತಿಸುತ್ತದೆ. ವಿಡಿಯೋ ವೈರಲ್ ಆಗಿ, ನಮ್ಮ ಗಮನಕ್ಕೆ ಬರುತ್ತಿದ್ದಂತೆ ಗುರ್ಸಂಗ್ರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇವೆ. ಈ ಘಟನೆ ಬಗ್ಗೆ ನಮಗೆ ಬೇಸರವಿದೆ ಎಂದೂ ಯೂನಿವರ್ಸಿಟಿ ಹೇಳಿಕೆ ನೀಡಿದೆ.
ಇದನ್ನೂ ಓದಿ: Petrol Price Today: ಸ್ಥಿರವಾಗಿದೆ ಪೆಟ್ರೋಲ್, ಡೀಸೆಲ್ ದರ; ಭಾರತದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಹೀಗಿದೆ