ಮಾರ್ಚ್ ಬಳಿಕ ಇಂದು ಮೂರನೇ ಬಾರಿಗೆ ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ
ಮಾರ್ಚ್ ತಿಂಗಳಲ್ಲಿ, ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ಮಧ್ಯಪ್ರದೇಶದ ಚುಕ್ಕಾಣಿ ಹಿಡಿದಿತ್ತು. ಆ ಬಳಿಕ ಇಂದು ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತ್ತೊಂದು ಬಾರಿ ಸಚಿವ ಸಂಪುಟ ವಿಸ್ತರಣೆ ನಡೆಸಲು ಸಜ್ಜಾಗಿ ನಿಂತಿದೆ. ರಾಜ್ಯದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ, ಮೂರನೇ ಬಾರಿಗೆ ನಡೆಯುತ್ತಿರುವ ಸಂಪುಟ ವಿಸ್ತರಣೆ ಇದಾಗಿದೆ.
ಮಾರ್ಚ್ ತಿಂಗಳಲ್ಲಿ, ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿ ಮಧ್ಯಪ್ರದೇಶದ ಚುಕ್ಕಾಣಿ ಹಿಡಿದಿತ್ತು. ಆ ಬಳಿಕ ಇಂದು ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಬಣದ ಇಬ್ಬರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ತುಲ್ಸೀರಾಮ್ ಸಿಲಾವಟ್ ಹಾಗೂ ಗೋವಿಂದ್ ಸಿಂಗ್ ರಜಪೂತ್ ನೂತನ ನೂತನ ಸಚಿವ ಸಂಪುಟದ ಭಾಗವಾಗಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಇಬ್ಬರು ಶಾಸಕರು ಸಿಂಧಿಯಾ ಜೊತೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರಾಗಿದ್ದಾರೆ. ಆ ಮೂಲಕ, ಕಮಲ್ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರ ಪಡೆಯುವಲ್ಲಿಯೂ ಕಾರಣರಾಗಿದ್ದಾರೆ.
ಪ್ರಸ್ತುತ, ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಚೌಹಾಣ್ ಸಹಿತ 29 ಸದಸ್ಯರು ಇದ್ದಾರೆ. ಸಚಿವ ಸಂಪುಟದಲ್ಲಿ ಗರಿಷ್ಠ 35 ಸದಸ್ಯರು ಇರಬಹುದಾಗಿದೆ. ಇಬ್ಬರು ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12.30ಕ್ಕೆ ಅಧಿಕಾರ ಸ್ವೀಕರಿಸುವ ನಿರೀಕ್ಷೆ ಇದೆ.
ಆ ಬಳಿಕ, ಮಧ್ಯಪ್ರದೇಶ ಹೈಕೋರ್ಟ್ನ ನೂತನ ಮುಖ್ಯ ನ್ಯಾಯಾಧೀಶ ಮೊಹಮ್ಮದ್ ರಫೀಕ್ 3 ಗಂಟೆಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ರಫೀಕ್ ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು. ಡಿಸೆಂಬರ್ 31ರಂದು ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಹೊಂದಿದ್ದರು. ಮಧ್ಯಪ್ರದೇಶದ ಹೆಚ್ಚುವರಿ ಅಧಿಕಾರ ಹೊಂದಿರುವ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಪ್ರತಿಜ್ಞಾವಿಧಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಆಸ್ಪತ್ರೆ ಬೆಡ್ನಿಂದ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದೇನು ಗೊತ್ತೇ?
Published On - 12:19 pm, Sun, 3 January 21




