“ಇಟಲಿಯೊಂದಿಗೆ ಬಲವಾದ ಸಂಬಂಧವಿದೆ”; ಮೆಲೋನಿ ಕುರಿತ ಕಾಂಗ್ರೆಸ್​​ ಟೀಕೆಗೆ ಕೇಂದ್ರ ಸರ್ಕಾರ ತಿರುಗೇಟು

ಇತ್ತೀಚಿನ ವರ್ಷಗಳಲ್ಲಿ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಗಟ್ಟಿಗೊಂಡಿವೆ ಮತ್ತು ವಿಸ್ತರಿಸಿವೆ ಎಂದು ಹೇಳುವ ಮೂಲಕ ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸಮರ್ಥಿಸಿಕೊಂಡಿದೆ. ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ಸಂಬಂಧವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ.

ಇಟಲಿಯೊಂದಿಗೆ ಬಲವಾದ ಸಂಬಂಧವಿದೆ; ಮೆಲೋನಿ ಕುರಿತ ಕಾಂಗ್ರೆಸ್​​ ಟೀಕೆಗೆ ಕೇಂದ್ರ ಸರ್ಕಾರ ತಿರುಗೇಟು
Rahul Gandhi
Image Credit source: PTI

Updated on: Aug 14, 2026 | 9:21 PM

ನವದೆಹಲಿ, ಆಗಸ್ಟ್ 14: ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಕಾಂಗ್ರೆಸ್ ನಾಯಕರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕುರಿತು ಲೇವಡಿ ಮಾಡಿದ್ದರು. ಇದರ ಬೆನ್ನಲ್ಲೇ ಭಾರತ ಇದಕ್ಕೆ ಪ್ರತಿಕ್ರಿಯಿಸಿದ್ದು, ಭಾರತ ಮತ್ತು ಇಟಲಿಯ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಪರಸ್ಪರ ಗೌರವ ಮತ್ತು ಅರ್ಥಮಾಡಿಕೊಳ್ಳುವಿಕೆ ಮುಖ್ಯ ಎಂದು ಭಾರತ ಪ್ರತಿಪಾದಿಸಿದೆ. ಹಾಗೇ, ಎರಡೂ ದೇಶಗಳು ಆಳವಾದ ಮತ್ತು ಗಟ್ಟಿಯಾದ ಬಾಂಧವ್ಯವನ್ನು ಹಂಚಿಕೊಂಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಹುಲ್ ಗಾಂಧಿ ವ್ಯಂಗ್ಯ:

ವಿದೇಶಾಂಗ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಲೇವಡಿ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿಶ್ವನಾಯಕರನ್ನು ತಬ್ಬಿಕೊಳ್ಳುವ ರೀತಿಯನ್ನು ಅಣಕಿಸಿದ್ದಕ್ಕಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ. ನಿನ್ನೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸ್ಕೃತಿರಹಿತ ಮತ್ತು ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಧೇಯಕದ ಕುರಿತು ರಾಹುಲ್ ಗಾಂಧಿ- ಸಚಿವ ಕಿರಣ್ ರಿಜಿಜು ನಡುವೆ ತೀವ್ರ ವಾಕ್ಸಮರ

“ನಾವು ಇಟಲಿಯೊಂದಿಗೆ ಆಳವಾದ ಮತ್ತು ಬಲವಾದ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಬದ್ಧರಾಗಿದ್ದೇವೆ. 2 ದೇಶಗಳ ನಡುವಿನ ಸ್ನೇಹ ಮತ್ತು ದ್ವಿಪಕ್ಷೀಯ ಬಾಂಧವ್ಯದ ವಿಷಯ ಬಂದಾಗ, ಅದನ್ನು ಪರಸ್ಪರ ಗೌರವ ಮತ್ತು ಅರ್ಥಮಾಡಿಕೊಳ್ಳುವಿಕೆಯ ಚೌಕಟ್ಟಿನೊಳಗೆ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ.


ದೆಹಲಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ತಬ್ಬಿಕೊಳ್ಳುವ ಮೂಲಕ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಅಣಕಿಸಿದ್ದರು. ಪ್ರಧಾನಿಯವರು ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವಂತಹ ಸಾಂಕೇತಿಕ ನಡವಳಿಕೆಗಳಿಗಷ್ಟೇ ಗಮನ ಕೊಟ್ಟು ರಾಜತಾಂತ್ರಿಕತೆಯನ್ನು ಅತ್ಯಂತ ಸರಳೀಕೃತಗೊಳಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪರೋಕ್ಷವಾಗಿ ಟೀಕಿಸಿದ್ದರು. ಈ ವೇಳೆ ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರನ್ನು ಎಳೆದು ತಂದು ವ್ಯಂಗ್ಯಾತ್ಮಕವಾಗಿ ಮಾತನಾಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಕೂಡ ಸಾಥ್ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ‘ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ’; ರಾಹುಲ್ ಗಾಂಧಿ ವ್ಯಂಗ್ಯ

ಬಿಜೆಪಿಯಿಂದ ತೀವ್ರ ವಾಗ್ದಾಳಿ:

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ ಯಾವಾಗ ದೊಡ್ಡವರಾಗುತ್ತಾರೆ? ಎಂದು ಪ್ರಶ್ನಿಸಿದ್ದರು. “ರಾಹುಲ್ ಗಾಂಧಿ ಅವರೇ, ನೀವು ಯಾವಾಗ ಪ್ರಬುದ್ಧರಾಗುತ್ತೀರಿ? ಭಾರತವನ್ನು ಮುನ್ನಡೆಸಲು ಪ್ರಬುದ್ಧ ನಾಯಕತ್ವ ಬೇಕೇ ಹೊರತು ಅನನುಭವಿ ನಾಟಕಗಳಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ‘ಜೋಕರ್‌ಗಳು ಮತ್ತು ಕೋಡಂಗಿಗಳು’ ಎಂದು ಕರೆಯುವುದು ನಿಮ್ಮ ಅಪಕ್ವತೆಯನ್ನು ತೋರಿಸುತ್ತದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರು.

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, “ರಾಹುಲ್ ಗಾಂಧಿ ಮಾನಸಿಕವಾಗಿ ಹತಾಶರಾಗಿದ್ದಾರೆ” ಎಂದಿದ್ದರು. ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಗೆ ಚಿಕಿತ್ಸೆ ಕೊಡಿಸಲಿ” ಎಂದು ವ್ಯಂಗ್ಯವಾಡಿದ್ದರು. “ರಾಹುಲ್ ಗಾಂಧಿ ಮಾನಸಿಕವಾಗಿ ಹತಾಶರಾದಂತೆ ಕಾಣುತ್ತಿದ್ದಾರೆ. ಅವರ ನಡವಳಿಕೆಯು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದೆ. ಸೋನಿಯಾ ಗಾಂಧಿಯವರು ಅವರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು” ಎಂದು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us