ಕಲ್ಮಾ ಪಠಿಸದ ಹಿಂದೂ ಸೆಕ್ಯುರಿಟಿಗಳಿಗೆ ಚಾಕುವಿನಿಂದ ಇರಿತ; ಮುಂಬೈನಲ್ಲಿ ಮತ್ತೆ ಉಗ್ರನ ನೆರಳು?
ಮುಂಬೈನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕಲ್ಮಾ ಪಠಿಸಲು ನಿರಾಕರಿಸಿದ್ದಕ್ಕಾಗಿ ಭದ್ರತಾ ಸಿಬ್ಬಂದಿಗೆ ಇರಿಯಲಾಗಿದೆ. ಈ ಪ್ರಕರಣದ ಕುರಿತು ಎನ್ಐಎ ತನಿಖೆ ನಡೆಸಲಿದೆ ಎಂದು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ನಯಾ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಆತ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಆರೋಪಿ ಐಸಿಸ್ನಂತಹ ಗುಂಪುಗಳ ಪ್ರಚಾರದಿಂದ ಪ್ರೇರಿತನಾಗಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಂಬೈ, ಏಪ್ರಿಲ್ 28: ಮುಂಬೈನ ನಯಾ ನಗರ ಪ್ರದೇಶದಲ್ಲಿ ಅಮೆರಿಕದಿಂದ ಬಂದಿರುವ ವ್ಯಕ್ತಿ ಇಬ್ಬರು ಭದ್ರತಾ ಸಿಬ್ಬಂದಿಗೆ ಇರಿದಿದ್ದಾನೆ. ಚಾಕುವಿನಿಂದ ಇರಿಯುವ ಮುನ್ನ ಆತ ಅವರ ಧರ್ಮವನ್ನು ಕೇಳಿದ್ದಾನೆ. ನೀವು ಯಾವ ಧರ್ಮದವರು ಎಂದು ಕೇಳಿದ ಆತ ಕಲ್ಮಾ ಪಠಿಸಲು ಸೂಚಿಸಿದ್ದಾನೆ. ಸೆಕ್ಯುರಿಟಿ ಕಲ್ಮಾ ಪಠಣ ಮಾಡದೆ ಇದ್ದಾಗ ಅವರಿಗೆ ಇರಿದಿದ್ದಾನೆ. ಇದು ಪಹಲ್ಗಾಮ್ನಲ್ಲಿ (Pahalgam Attack) ನಡೆದ ದಾಳಿಯನ್ನು ನೆನಪಿಸುತ್ತಿದೆ.
ಆರೋಪಿ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಇಸ್ಲಾಂನ ಮೂಲಭೂತ ಸಿದ್ಧಾಂತಗಳಾದ ‘ಕಲ್ಮಾ’ ಅಥವಾ ‘ಕಲಿಮಾ’ ಪಠಿಸುವಂತೆ ಸೆಕ್ಯುರಿಟಿಗಳಿಗೆ ಒತ್ತಾಯಿಸಿದ್ದ. ಸೆಕ್ಯುರಿಟಿ ಗಾರ್ಡ್ಗಳಾದ ರಾಜ್ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಮುಸ್ಲಿಂ ಧರ್ಮದವರಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾನೆ. ವೋಕ್ಹಾರ್ಡ್ ಆಸ್ಪತ್ರೆಯ ಹಿಂದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿದ್ದಾಗ ಅನ್ಸಾರಿ ಅವರಿಬ್ಬರ ಮೇಲೆ ದಾಳಿ ನಡೆಸಿದ್ದಾನೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್ಕೌಂಟರ್
ಚಾಕು ಇರಿತದಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆದ 90 ನಿಮಿಷಗಳ ನಂತರ ಅನ್ಸಾರಿಯನ್ನು ಬಂಧಿಸಲಾಯಿತು. ಪೊಲೀಸರು ಅವನನ್ನು ಪತ್ತೆಹಚ್ಚಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಕಾರ್ಯಾಚರಣೆ ನಡೆಸಿದರು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಮತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಬಂಧನದ ನಂತರ ಅನ್ಸಾರಿಯನ್ನು ಥಾಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೇ 4ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ತಂಡವು ದಾಳಿಯ ತನಿಖೆ ನಡೆಸುತ್ತಿದೆ. ಇದು ಸಾಮಾನ್ಯವಾದ ದಾಳಿಯೇ ಅಥವಾ ದೊಡ್ಡ ಪಿತೂರಿಯ ಭಾಗವೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಅನ್ಸಾರಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುತ್ತಿದ್ದಾರೆ. ಮೂಲಗಳು ಹೇಳುವಂತೆ ಅನ್ಸಾರಿ ಬರೆದುಕೊಂಡ ನೋಟ್ಗಳಲ್ಲಿ ‘ISIS’, ‘ಒಂಟಿ ತೋಳ’, ‘ಜಿಹಾದ್’ ಮತ್ತು ‘ಗಾಜಾ’ ಮುಂತಾದ ಪದಗಳನ್ನು ಬರೆಯಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?
ಅನ್ಸಾರಿ ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ. ಆತನ ಕುಟುಂಬದ ಸದಸ್ಯರು ಇನ್ನೂ ಆ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಆತನಿಗೆ ಅಲ್ಲಿ ಕೆಲಸ ಸಿಗಲಿಲ್ಲ. ಹೀಗಾಗಿ ಭಾರತಕ್ಕೆ ಮರಳಬೇಕಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Tue, 28 April 26




