ಕೇರಳ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ರತನ್ ಕೇಳ್ಕರ್ ನೇಮಕ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯನ್ನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ರತನ್ ಕೇಳ್ಕರ್ ಅವರನ್ನು ನೇಮಕ ಮಾಡಿದೆ. ಸದ್ಯ ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಯುಡಿಎಫ್ ಸರ್ಕಾರದ ಆಡಳಿತ ಆರಂಭವಾಗಿದೆ. ಕೇರಳ ರಾಜಕೀಯ ವಲಯದಲ್ಲಿ ಇದೀಗ ಮಹತ್ವದ ಬದಲಾವಣೆಯೊಂದು ನಡೆದಿದೆ. ಇತ್ತೀಚಿಗೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯ ಚುನಾವಣಾಧಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಐಎಎಸ್ ಅಧಿಕಾರಿ ರತನ್ ಯು ಕೇಳ್ಕರ್ (Ratan Kelkar) ಅವರನ್ನು ಕೇರಳ ನೂತನ ಸಿಎಂ ವಿ.ಡಿ ಸತೀಷನ್ರವರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಾಂಶಗಳು
- ರತನ್ ಕೇಳ್ಕರ್ ನೇಮಕದ ಸುತ್ತ ರಾಜಕೀಯ ವಿವಾದ
- ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ
- ಕೇರಳ ರಾಜಕೀಯ ವಲಯದಲ್ಲಿ ಇದೀಗ ಮಹತ್ವದ ಬದಲಾವಣೆ
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ 1990ರ ಬ್ಯಾಚ್ನ ಐಎಎಸ್ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರನ್ನು ಬಿಜೆಪಿ ಸರ್ಕಾರ ತನ್ನ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಪಕ್ಷಪಾತ ತೋರಿದವರಿಗೆ ಪ್ರತಿಫಲ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಇದೀಗ ರತನ್ ಕೇಳ್ಕರ್ ಅವರನ್ನು ಸಿಎಂ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಕಿಡಿ
ಈ ಬಗ್ಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಟ್ವೀಟ್ ಮಾಡಿದ್ದು, ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಬಿಜೆಪಿ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದಾಗ ‘ಕಳ್ಳತನ ಎಷ್ಟು ದೊಡ್ಡದೋ, ಬಹುಮಾನವೂ ಅಷ್ಟೇ ದೊಡ್ಡದು’ ಎಂದು ರಾಹುಲ್ ಗಾಂಧಿ ಅವರು ಕೂಗಾಡಿದ್ದರು. ಆದರೆ ಕೇರಳದಲ್ಲಿ ಸಿಎಂ ವಿ.ಡಿ ಸತೀಷನ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇರಳದ ಮುಖ್ಯ ಚುನಾವಣಾಧಿಕಾರಿ ರತನ್ ಕೇಳ್ಕರ್ರನ್ನು ಸಿಎಂ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಹಾಗಾದರೆ ರಾಹುಲ್ ಗಾಂಧಿ ಅವರೇ ಕೇರಳದಲ್ಲಿ ನಡೆದಿರುವುದು ‘ಕಳ್ಳತನಕ್ಕೆ ಸಿಕ್ಕ ಬಹುಮಾನವೇ ಅಥವಾ ಇದ್ದಕ್ಕಿದ್ದಂತೆ ಪ್ರಜಾಪ್ರಭುತ್ವದ ಸೌಂದರ್ಯವಾಗಿ ಬದಲಾಯಿತೇ?’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್ಗೆ 12, ಮುಸ್ಲಿಂ ಲೀಗ್ಗೆ 5 ಸ್ಥಾನಗಳಾ?
ಇನ್ನು ಈ ಟೀಕೆಗಳಿಗೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಚುನಾವಣಾ ಅಧಿಕಾರಿಗೆ ಮುಖ್ಯ ಕಾರ್ಯದರ್ಶಿ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಆದರೆ, ಕೇರಳದಲ್ಲಿ ರತನ್ ಕೇಳ್ಕರ್ಗೆ ನೀಡಿರುವುದು ಕೇವಲ ಸಿಎಂ ಆಡಳಿತಾತ್ಮಕ ಹಾಗೂ ಸಲಹಾತ್ಮಕ ಸ್ವರೂಪದ ಸೆಕ್ರೆಟರಿ ಹುದ್ದೆಯಷ್ಟೇ. ಹೀಗಾಗಿ, ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಹೋಲಿಸುವುದು ಸರಿಯಲ್ಲ ಎನ್ನಲಾಗುತ್ತಿದೆ.
ಯಾರಿದು ರತನ್ ಕೇಳ್ಕರ್?
2003ರ ಬ್ಯಾಚ್ನ ಕೇರಳ ಕೆಡರ್ ಅಧಿಕಾರಿ ರತನ್ ಕೇಳ್ಕರ್ ಮೂಲತಃ ಮಹಾರಾಷ್ಟ್ರ ಮೂಲದವರು. ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಡಿಸೆಂಬರ್ 2024ರಿಂದ ಕೇರಳದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಏಪ್ರಿಲ್ 9 ರಂದು ನಡೆದ ಕೇರಳ ವಿಧಾನಸಭಾ ಚುನಾವಣೆ ಇವರ ನೇತೃತ್ವದಲ್ಲೇ ನಡೆದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Sat, 23 May 26





