AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್​ಗೆ 12, ಮುಸ್ಲಿಂ ಲೀಗ್​ಗೆ 5 ಸ್ಥಾನಗಳಾ?

UDF Ministry Formation Kerala: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಯುಡಿಎಫ್ ಮೈತ್ರಿಕೂಟ ಸರ್ಕಾರ ರಚನೆಗೆ ಸಜ್ಜಾಗಿದೆ. ವಿ.ಡಿ. ಸತೀಶನ್ ಮೇ 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಸಂಪುಟ ಸದಸ್ಯರ ಆಯ್ಕೆ ಹಾಗೂ ಖಾತೆ ಹಂಚಿಕೆಗಾಗಿ ಮೈತ್ರಿಪಕ್ಷಗಳ ನಡುವೆ ತೀವ್ರ ರಾಜಕೀಯ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್‌ಗೆ ಸಿಂಹಪಾಲು ಸಿಗುವ ನಿರೀಕ್ಷೆಯಿದೆ. ರಮೇಶ್ ಚೆನ್ನಿತ್ತಲ ಗೃಹ ಇಲಾಖೆಯೊಂದಿಗೆ ಸಚಿವ ಸಂಪುಟ ಸೇರಲಿದ್ದಾರೆ. ಮೈತ್ರಿಪಕ್ಷಗಳು ತಮ್ಮ ಪಾಲುಗಾಗಿ ಪಟ್ಟು ಹಿಡಿದಿವೆ.

ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್​ಗೆ 12, ಮುಸ್ಲಿಂ ಲೀಗ್​ಗೆ 5 ಸ್ಥಾನಗಳಾ?
ವಿ.ಡಿ. ಸತೀಶನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2026 | 3:23 PM

Share

ತಿರುವನಂತಪುರಂ, ಮೇ 17: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Assembly Elections) ಭರ್ಜರಿ ವಿಜಯ ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಮುಖ್ಯಮಂತ್ರಿಯನ್ನು ಮಾತ್ರವನ್ನು ಸಂಪುಟ ಸದಸ್ಯರ ಆಯ್ಕೆಯನ್ನೂ ಅಂತಿಮಗೊಳಿಸುವ ಹಾದಿಯಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (V.D. Satheesan) ಅವರು ನಾಳೆ ಮೇ 18 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಮುನ್ನ, 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ (Cabinet Berths) ಮತ್ತು ಖಾತೆಗಳ ಹಂಚಿಕೆಗಾಗಿ ಯುಡಿಎಫ್ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ಗೆ ಸಂಪುಟದಲ್ಲಿ ಸಿಂಹಪಾಲು ಸಿಗಬಹುದು. 12 ಸ್ಥಾನಗಳು ಕಾಂಗ್ರೆಸ್​ಗೆ ಹೋಗಬಹುದು, ಮುಸ್ಲಿಂ ಲೀಗ್​ಗೆ (ಐಯುಎಂಎಲ್) 5 ಸ್ಥಾನಗಳು ಸಿಗಬಹುದು ಎನ್ನಲಾಗಿದೆ.

ರಮೇಶ್ ಚೆನ್ನಿತ್ತಲ ಸಚಿವ ಸಂಪುಟಕ್ಕೆ ಸೇರ್ಪಡೆ: ಅಸಮಾಧಾನ ಶಮನ?

ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಆರಂಭದಲ್ಲಿ ಸಚಿವ ಸ್ಥಾನ ಸ್ವೀಕರಿಸಲು ಹಿಂಜರಿದಿದ್ದರು. ಆದರೆ, ಸಿಎಂ ಆಗಲಿರುವ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಚೆನ್ನಿತ್ತಲ ಅವರಿಗೆ ಅತ್ಯಂತ ಪ್ರಮುಖವಾದ ಗೃಹ ಇಲಾಖೆ (Home Portfolio) ನೀಡಲು ಸತೀಶನ್ ಸಮ್ಮತಿಸಿದ್ದು, ಚೆನ್ನಿತ್ತಲ ಅವರು ಸಂಪುಟ ಸೇರಲು ಒಪ್ಪಿದ್ದಾರೆ.

ಮೈತ್ರಿಪಕ್ಷಗಳ ಬೇಡಿಕೆ ಮತ್ತು ಸಚಿವ ಸ್ಥಾನಗಳ ಹಂಚಿಕೆ ಕಸರತ್ತು

ಯುಡಿಎಫ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಂತರದ ದೊಡ್ಡ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮಗಾಗಿ ಹೆಚ್ಚಿನ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿವೆ.

ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ

  • ಐಯುಎಂಎಲ್ (IUML): ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಐಯುಎಂಎಲ್ ಒಟ್ಟು 5 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಇದರೊಂದಿಗೆ ಕೈಗಾರಿಕೆ, ಶಿಕ್ಷಣ, ಲೋಕೋಪಯೋಗಿ (PWD) ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆಗಳಂತಹ ಪ್ರಮುಖ ಖಾತೆಗಳನ್ನು ಕೇಳಿದೆ. ಐಯುಎಂಎಲ್‌ನಿಂದ ಪಿ.ಕೆ. ಕುನ್ಹಾಲಿ ಕುಟ್ಟಿ, ಎನ್. ಸಂಸುದ್ದೀನ್, ಪರಕ್ಕಲ್ ಅಬ್ದುಲ್ಲಾ, ಕೆ.ಎಂ. ಶಾಜಿ ಮತ್ತು ವಿ.ಇ. ಅಬ್ದುಲ್ ಗಫೂರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
  • ಕೇರಳ ಕಾಂಗ್ರೆಸ್ (ಜೋಸೆಫ್ ಬಣ): 7 ಶಾಸಕರನ್ನು ಹೊಂದಿರುವ ಈ ಪಕ್ಷವು 2 ಸಚಿವ ಸ್ಥಾನಗಳಿಗಾಗಿ ಭಾರಿ ಒತ್ತಡ ಹೇರುತ್ತಿದೆ. ಐಯುಎಂಎಲ್‌ಗೆ 5 ಸ್ಥಾನ ನೀಡುವುದಾದರೆ ನಮಗೆ 2 ಸ್ಥಾನ ನೀಡಬೇಕು ಎಂಬುದು ಇವರ ವಾದ. ಈ ಬಣದಿಂದ ಮೊನ್ಸ್ ಜೋಸೆಫ್ ಸಚಿವರಾಗುವುದು ಖಚಿತವಾಗಿದ್ದು, ಕಂದಾಯ (Revenue) ಖಾತೆಗೆ ಬೇಡಿಕೆ ಇಟ್ಟಿದ್ದಾರೆ.
  • ಆರ್‌ಎಸ್‌ಪಿ (RSP): ಶಿಬು ಬೇಬಿ ಜಾನ್ ಅವರು ಸಚಿವರಾಗುವುದು ಖಚಿತವಾಗಿದ್ದು, ಇಂಧನ (Power) ಇಲಾಖೆಯಂತಹ ಪ್ರಮುಖ ಖಾತೆಯನ್ನು ನಿರೀಕ್ಷಿಸುತ್ತಿದ್ದಾರೆ.
  • ರೊಟೇಶನ್ ಸೂತ್ರದ ಪ್ರಸ್ತಾಪ: ಕೇರಳ ಕಾಂಗ್ರೆಸ್ (ಜೇಕಬ್ ಬಣ) ಪಕ್ಷದ ಅನೂಪ್ ಜಾಕೋಬ್ ಮತ್ತು ಕೇರಳ ಡೆಮಾಕ್ರಟಿಕ್ ಪಾರ್ಟಿಯ ಮಣಿ ಸಿ. ಕಪ್ಪನ್ ಅವರಿಗೆ ತಲಾ ಎರಡುವರೆ ವರ್ಷಗಳ ಕಾಲ ಸರದಿಯ ಆಧಾರದ ಮೇಲೆ (Rotational Basis) ಒಂದೇ ಸಚಿವ ಸ್ಥಾನವನ್ನು ಹಂಚಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತಾಪಿಸಿದೆ. ಆದರೆ ಈ ಇಬ್ಬರೂ ನಾಯಕರು ಈ ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾತುಕತೆ ಮುಂದುವರಿದಿದೆ. ಈ ಎರಡೂ ಪಕ್ಷಗಳು ತಮಗೆ ತಲಾ ಒಂದು ಸಚಿವ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿವೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಕಾಂಗ್ರೆಸ್ ಪಾಳೆಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು

ಮೈತ್ರಿ ಪಕ್ಷಗಳ ಖಾತೆ ಹಂಚಿಕೆ ಮುಗಿದ ಬಳಿಕವಷ್ಟೇ ಕಾಂಗ್ರೆಸ್ ತನ್ನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಒಳಗಿನ ಪ್ರಮುಖ ನಾಯಕರ (ಸತೀಶನ್, ಚೆನ್ನಿತ್ತಲ ಮತ್ತು ವೇಣುಗೋಪಾಲ್) ಬಣಗಳನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸಚಿವರ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರೆಂದರೆ, ಕೆ. ಮುರಳೀಧರನ್, ತಿರುವಂಚೂರ್ ರಾಧಾಕೃಷ್ಣನ್, ಎ.ಪಿ. ಅನಿಲ್ ಕುಮಾರ್, ಸನ್ನಿ ಜೋಸೆಫ್, ಪಿ.ಸಿ. ವಿಷ್ಣುನಾಥ್ ಮತ್ತಿತರರು.

ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಲಾಗುತ್ತಿದ್ದು, ಮೇ 18 ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನೂತನ ಸರ್ಕಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಸಂಪುಟ ಸದಸ್ಯರ ಹೆಸರು ಅಂತಿಮಗೊಂಡರೆ, ನಾಳೆಯೇ ಸಿಎಂ ಜೊತೆಗೆ ಈ ಎಲ್ಲಾ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More