ಕೇರಳದಲ್ಲಿ ವಿವಾದ ಸೃಷ್ಟಿಸಿದ ಕ್ವಿಜ್ನಲ್ಲಿ ಸಾವರ್ಕರ್ ಕುರಿತ ಪ್ರಶ್ನೆ: ತನಿಖೆಗೆ ಆದೇಶ
ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಆಯೋಜಿಸಲಾಗಿದ್ದ ಶಾಲಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹಿಂದೂತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರಿಗೆ ಸಂಬಂಧಿಸಿದ ಪ್ರಶ್ನೆಯೊಂದು ತೀವ್ರ ರಾಜಕೀಯ ಆಕ್ರೋಶ ಹಾಗೂ ವಿವಾದಕ್ಕೆ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಶಿಕ್ಷಣ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂಬ ಮಾಹಿತಿ ಇಲ್ಲಿದೆ.

ತಿರುವನಂತಪುರಂ, ಆಗಸ್ಟ್ 09: ಶಾಲಾ ಕ್ವಿಜ್ನಲ್ಲಿ ಹಿಂದೂತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆ ಪಡೆದ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿದ ಪ್ರಶ್ನೆಯೊಂದು ಕೇರಳದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎನ್. ಶಂಸುಡ್ಡೀನ್ ತನಿಖೆಗೆ ಆದೇಶಿಸಿದ್ದಾರೆ. ಕ್ವಿಜ್ ಸಿದ್ಧಪಡಿಸಿ ನಡೆಸಿದವರು ಯಾರು ಎಂಬುದನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಪೂರ್ವಾಗ್ರಹಪೀಡಿತ ದೃಷ್ಟಿಕೋನ’
ಆಗಸ್ಟ್ 6ರಂದು ಕಾಸರಗೋಡು, ಕುಂಬ್ಳೆ ಮತ್ತು ಮಂಜೇಶ್ವರ ಶಾಲೆಗಳಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ‘ಫ್ರೀಡಂ ಕ್ವಿಜ್’ ಆಯೋಜಿಸಲಾಗಿತ್ತು. ಈ ಕ್ವಿಜ್ ಶಿಕ್ಷಣ ಇಲಾಖೆಯ ಅಥವಾ ಸಾಮಾಜಿಕ ವಿಜ್ಞಾನ ಕ್ಲಬ್ನ ಚಟುವಟಿಕೆಗಳ ಭಾಗವಾಗಿರಲಿಲ್ಲ. ಪ್ರಶ್ನೆಗಳನ್ನು ಸಿದ್ಧಪಡಿಸಲು ಅಥವಾ ಸ್ಪರ್ಧೆಯನ್ನು ಸ್ವತಂತ್ರವಾಗಿ ನಡೆಸಲು ಎರಡೂ ಸಂಸ್ಥೆಗಳು ಯಾರಿಗೂ ಅನುಮತಿ ನೀಡಿರಲಿಲ್ಲ. ಐತಿಹಾಸಿಕವಾಗಿ ತಪ್ಪಾದ ಪ್ರಶ್ನೆಯನ್ನು ಸೇರಿಸಿದ ವ್ಯಕ್ತಿಯು ಪೂರ್ವಾಗ್ರಹಪೀಡಿತ ದೃಷ್ಟಿಕೋನ ಹೊಂದಿದ್ದಾರೆ ಎಂದು ಸಚಿವರ ಕಚೇರಿ ಹೇಳಿದ್ದು, ಹೊಣೆಗಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಜೈಲಿನಲ್ಲಿದ್ದ ಲವರ್ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆ: ಮುಂದಾಗಿದ್ದೇನು?
ಎಡಪಂಥೀಯ ಸಂಘಟನೆಗಳ ವಿರೋಧ
ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆ ಪಡೆದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿದ್ದು ಇದಕ್ಕೆ ಉತ್ತರವಾಗಿ ಸಾವರ್ಕರ್ ಹೆಸರನ್ನು ನೀಡಲಾಗಿತ್ತು. ಈ ವಿಚಾರವಾಗಿ ಸಿಪಿಐ(ಎಂ) ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ಸಂಘ ಪರಿವಾರದ ಕಾರ್ಯಸೂಚಿ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿದೆ ಎಂದು ಅವು ಆರೋಪಿಸಿದ್ದವು ಎಂದು ಎನ್ಡಿಟಿವಿ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




