AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದಲ್ಲಿ ಮೀನಿನ ಪ್ರಸಾದ ತಿಂದ ಬಂಗಾಳ ಸಿಎಂ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾ ವಿವಾದಕ್ಕೆ ತಿರುಗೇಟು

ಬಾಗೇಶ್ವರ್ ಬಾಬಾ ಅವರ ಮಾಂಸಾಹಾರ ವಿರೋಧಿ ಹೇಳಿಕೆಗೆ ಸಿಎಂ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಿರುಗೇಟು ನೀಡಿದ್ದಾರೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಮೀನಿನ ಪ್ರಸಾದ ಸೇವಿಸುವ ಮೂಲಕ ಬಂಗಾಳದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಎತ್ತಿಹಿಡಿದರು. ದುರ್ಗಾಪೂಜೆಯ ಸಂದರ್ಭದಲ್ಲಿ ಮಾಂಸ ಸೇವನೆ ಕುರಿತ ವಿವಾದಕ್ಕೆ ತೆರೆ ಎಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಂಗಾಳದ ಶಾಕ್ತ ಸಂಪ್ರದಾಯದಲ್ಲಿ ಮೀನು ನೈವೇದ್ಯಕ್ಕೆ ಶತಮಾನಗಳ ಇತಿಹಾಸವಿದೆ.

ದೇವಸ್ಥಾನದಲ್ಲಿ ಮೀನಿನ ಪ್ರಸಾದ ತಿಂದ ಬಂಗಾಳ ಸಿಎಂ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾ ವಿವಾದಕ್ಕೆ  ತಿರುಗೇಟು
ಸುವೇಂದು ಅಧಿಕಾರಿImage Credit source: NDTV
ನಯನಾ ರಾಜೀವ್
|

Updated on:Sep 11, 2026 | 1:47 PM

Share

ಕೋಲ್ಕತ್ತಾ, ಸೆಪ್ಟೆಂಬರ್ 11: ದುರ್ಗಾಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವುದನ್ನು ವಿರೋಧಿಸಿ ಬಾಗೇಶ್ವರ್ ಬಾಬಾ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಚರ್ಚೆಗೆ ತೆರೆ ಎಳೆಯಲು ಮುಂದಾದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಕೋಲ್ಕತ್ತಾದ ಐತಿಹಾಸಿಕ ಕಾಳಿಘಾಟ್ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾಗಿದ್ದ ಸಾಂಪ್ರದಾಯಿಕ ಮೀನಿನ ಪ್ರಸಾದ ಸೇವಿಸಿದ್ದಾರೆ. ಆ ಮೂಲಕ ಬಂಗಾಳದ ಆಚಾರ-ವಿಚಾರ ಮತ್ತು ಆಹಾರ ಸಂಪ್ರದಾಯದ ಪರವಾಗಿ ಬಿಜೆಪಿ ದೃಢವಾಗಿ ನಿಲ್ಲುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಕೌಶಿಕಿ ಅಮಾವಾಸ್ಯೆಯ ಪವಿತ್ರ ದಿನದಂದು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿದ ಸುವೇಂದು ಅಧಿಕಾರಿ, ನೆಲದ ಮೇಲೆ ಕುಳಿತು ಕಾಳಿ ಮಾತೆಗೆ ನೈವೇದ್ಯವಾಗಿ ಅರ್ಪಿಸಲಾದ ಮೀನು, ಹಾಗೂ ಬಸಂತಿ ಪುಲಾವ್ ಅನ್ನು ಪ್ರಸಾದವಾಗಿ ಸೇವಿಸಿದರು.

ಆಹಾರದ ಹಕ್ಕು ಯಾರೂ ಕಸಿಯಲಾಗದು: ಬಾಗೇಶ್ವರ್ ಬಾಬಾ ಹೇಳಿಕೆಯನ್ನು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಸೇರಿದಂತೆ ಹಲವು ನಾಯಕರು ತಳ್ಳಿಹಾಕಿದ್ದರು. “ಬಂಗಾಳಿಗಳು ಏನು ತಿನ್ನಬೇಕೆಂದು ಯಾವುದೇ ದೇವಮಾನವ ನಿರ್ಧರಿಸಲು ಸಾಧ್ಯವಿಲ್ಲ; ಸ್ವತಃ ಸ್ವಾಮಿ ವಿವೇಕಾನಂದರೇ ಬಂಗಾಳಿಗಳ ಮೀನು-ಮಾಂಸ ಸೇವನೆಯನ್ನು ಸಮರ್ಥಿಸಿದ್ದರು” ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದರು.

ಮತ್ತಷ್ಟು ಓದಿ: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ

ಚರ್ಚೆಗೆ ತೆರೆ ಎಳೆಯಲು ಬಿಜೆಪಿ ಕರೆ: ಅಧಿಕಾರಿ ಅವರ ಈ ನಡೆಯ ಬೆನ್ನಲ್ಲೇ ಹೇಳಿಕೆ ನೀಡಿರುವ ಬಿಜೆಪಿ, “ಬಂಗಾಳದ ಜೀವನ ವಿಧಾನ, ನಂಬಿಕೆ ಮತ್ತು ಶಾಕ್ತ ಸಂಪ್ರದಾಯಗಳನ್ನು ಬಿಜೆಪಿ ಎಂದಿಗೂ ಗೌರವಿಸುತ್ತದೆ. ಇನ್ನು ಮುಂದಾದರೂ ಈ ಸಸ್ಯಾಹಾರಿ-ಮಾಂಸಾಹಾರಿ ಅನಗತ್ಯ ಚರ್ಚೆ ನಿಲ್ಲಲಿ” ಎಂದು ಸೂಚಿಸಿದೆ.

ವಿಡಿಯೋ

ಬಂಗಾಳದ ಶಾಕ್ತ ಸಂಪ್ರದಾಯ: ಭಾರತದ ಉತ್ತರ ಅಥವಾ ಪಶ್ಚಿಮ ಭಾಗಗಳಲ್ಲಿ ದೇವಾಲಯಗಳಲ್ಲಿ ಕೇವಲ ಶುದ್ಧ ಸಾತ್ತ್ವಿಕ (ಸಸ್ಯಾಹಾರಿ) ಆಹಾರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ತಂತ್ರ ಹಾಗೂ ಶಾಕ್ತ ಪರಂಪರೆ ಪ್ರಬಲವಾಗಿದೆ. ಕಾಳಿಘಾಟ್ ಹಾಗೂ ತಾರಾಪೀಠಗಳಂತಹ ಶಕ್ತಿಪೀಠಗಳಲ್ಲಿ ತಾಯಿ ಕಾಳಿಗೆ ಮೀನು ಮತ್ತು ಬಲಿ ನೀಡಿದ ಮೇಕೆ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವುದು ಶತಮಾನಗಳ ಧಾರ್ಮಿಕ ಪರಂಪರೆಯಾಗಿದೆ.

ಉಭಯ ಸಂಕಟದಲ್ಲಿದ್ದ ಬಿಜೆಪಿ: ಉತ್ತರ ಭಾರತದ ಸಸ್ಯಾಹಾರಿ ಸಂಸ್ಕೃತಿಯನ್ನು ಬಂಗಾಳದ ಮೇಲೆ ಹೇರಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿರಂತರವಾಗಿ ಟೀಕಿಸುತ್ತಿತ್ತು. ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಯಿಂದ ಈ ಆರೋಪಕ್ಕೆ ಪುಷ್ಟಿ ಸಿಗುವಂತಾಗಿತ್ತು. ಹೀಗಾಗಿ ಧಾರ್ಮಿಕ ಮುಖಂಡರ ಭಾವನೆಗೂ ಧಕ್ಕೆ ಬಾರದಂತೆ, ಬಂಗಾಳಿ ಜನರ ಸಂವೇದನೆಯನ್ನು ಉಳಿಸಿಕೊಳ್ಳಲು ಸ್ವತಃ ಸುವೇಂದು ಅಧಿಕಾರಿ ಅವರೇ ದೇವಾಲಯದಲ್ಲಿ ಮೀನು ಸೇವಿಸುವ ಮೂಲಕ ಜಾಣ್ಮೆಯ ಸಮತೋಲನ ಕಾಯ್ದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:46 pm, Fri, 11 September 26

Follow Us
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್