ಟಿಸಿಎಸ್ ಮತಾಂತರ ಪ್ರಕರಣ: ತಾನು ಗರ್ಭಿಣಿ ಎಂದು ನ್ಯಾಯಾಲಯದ ಮೊರೆ ಹೋದ ಆರೋಪಿ ನಿದಾ ಖಾನ್
ಟಿಸಿಎಸ್ ಮತಾಂತರ ಪ್ರಕರಣದ ಆರೋಪಿ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಗರ್ಭಿಣಿ ಅಸ್ತ್ರ ಬಳಸಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸತ್ಯಾಸತ್ಯತೆಯನ್ನು ವಿಶೇಷ ತನಿಖಾ ತಂಡ (SIT) ಪರಿಶೀಲಿಸಲಿದೆ. ಲೈಂಗಿಕ ಕಿರುಕುಳ ಮತ್ತು ಮತಾಂತರ ಆರೋಪಗಳಿರುವ ಈ ಪ್ರಕರಣದ ಬೆಳವಣಿಗೆಗಳು ಮತ್ತು ನ್ಯಾಯಾಲಯದ ತೀರ್ಮಾನ ಕುತೂಹಲ ಕೆರಳಿಸಿದೆ.

ನಾಸಿಕ್, ಏಪ್ರಿಲ್ 17: ನಾಸಿಕ್ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಮತಾಂತರ ಮತ್ತು ಲೈಂಗಿಕ ಕಿರುಕುಳದ ಭೀಕರ ಹಗರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಗರ್ಭಿಣಿ(Pregnant) ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಾಸಿಕ್ ಟಿಸಿಎಸ್ ಕಚೇರಿಯಲ್ಲಿ 2022 ರಿಂದ 2026ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವ್ಯವಸ್ಥಿತ ಮತಾಂತರ ಸಂಚು ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ಮುಂಬೈನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿರುವ ನಿದಾ ಖಾನ್, ಈಗ ನಾಸಿಕ್ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ತಾವು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂಬ ವೈದ್ಯಕೀಯ ಕಾರಣವನ್ನು ಮುಂದಿಟ್ಟುಕೊಂಡು ಬಂಧನದಿಂದ ವಿನಾಯಿತಿ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಶೇಷ ತನಿಖಾ ತಂಡ (SIT) ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅಧಿಕೃತ ವೈದ್ಯಕೀಯ ತಪಾಸಣೆಯ ಮೂಲಕ ಪರಿಶೀಲಿಸಲು ಮುಂದಾಗಿದೆ.
ನಾಸಿಕ್ ಪೊಲೀಸರು ರಚಿಸಿರುವ ಎಸ್ಐಟಿ ಈಗಾಗಲೇ ಎಂಟು ಮಹಿಳಾ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಅನುಚಿತ ಸ್ಪರ್ಶ, ಮತ್ತು ವೈಯಕ್ತಿಕ ಜೀವನದ ಬಗ್ಗೆ ಹೀಯಾಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿಂದೂ ಉದ್ಯೋಗಿಗಳನ್ನು ನಮಾಜ್ ಮಾಡಲು ಒತ್ತಾಯಿಸುವುದು ಮತ್ತು ಅವರ ಧರ್ಮವನ್ನು ಅವಮಾನಿಸುವ ಕೃತ್ಯಗಳು ಇಲ್ಲಿ ನಿರಂತರವಾಗಿ ನಡೆಯುತ್ತಿದ್ದವು.
ಮತ್ತಷ್ಟು ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್ನ ಟಿಸಿಎಸ್ ಕಚೇರಿಗೆ ಬೀಗ
ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್ ಸೇರಿದಂತೆ ಆರು ಪುರುಷರು ಮತ್ತು ದೂರುಗಳನ್ನು ನಿರ್ಲಕ್ಷಿಸಿದ ಹೆಚ್ಆರ್ ಮುಖ್ಯಸ್ಥೆ ಅಶ್ವಿನಿ ಚೈನಾನಿ ಅವರನ್ನು ಈಗಾಗಲೇ ಅಮಾನತುಗೊಳಿಸಿ ಬಂಧಿಸಲಾಗಿದೆ.
ಈ ಪ್ರಕರಣವು ಟಾಟಾ ಸಮೂಹದ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಮೌನ ಮುರಿದಿದ್ದಾರೆ. ಈ ಆರೋಪಗಳನ್ನು ಅತ್ಯಂತ ಗಂಭೀರ ಮತ್ತು ದುಃಖಕರ ಎಂದು ಬಣ್ಣಿಸಿರುವ ಅವರು, ಟಿಸಿಎಸ್ ಸಿಒಒ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ತಮ್ಮ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟಿಸಿಎಸ್ ಹೇಳಿದೆ. ಮತಾಂತರ ಮತ್ತು ಕಿರುಕುಳದ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣವೇ ನಾವು ತ್ವರಿತ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ, ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.
ನಿದಾ ಖಾನ್ ಅವರ ಜಾಮೀನು ಅರ್ಜಿಯ ಮೇಲೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ? ಆಕೆ ನಿಜವಾಗಿಯೂ ಗರ್ಭಿಣಿಯೇ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ತಂತ್ರವೇ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಎಸ್ಐಟಿ ತಂಡವು ಆಕೆಯನ್ನು ಕಸ್ಟಡಿಗೆ ಪಡೆಯಲು ಮುಂದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




