AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಸೀತೆ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆಯೇ ಕಂಗನಾ ರಣಾವತ್ ಅವರು ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಅವರು ಜೆನ್ ಜಿ ಯುವ ಜನತೆಯ ಕಾಲೆಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್
Kangana Ranaut
ಮದನ್​ ಕುಮಾರ್​
|

Updated on: Jul 31, 2026 | 6:18 PM

Share

ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರ ಲುಕ್ ಹಾಗೂ ಹಿಂದಿ ಉಚ್ಚಾರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಶಾಲಾ ದಿನಗಳಲ್ಲಿ ತಾವು ಸೀತೆಯ ವೇಷ ಧರಿಸಿದ್ದ ಹಳೆಯ ಫೋಟೋ ಒಂದನ್ನು ಹಂಚಿಕೊಂಡು ಜೆನ್​ ಜಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಶಾಲಾ ದಿನಗಳ ಸೀತೆಯ ಅವತಾರ!

ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಬಾಲ್ಯದ ಅಪರೂಪದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಕಂಗನಾ ಕೆಂಪು ಬಣ್ಣದ ಸೀರೆ ಉಟ್ಟು ಸೀತೆಯ ರೂಪದಲ್ಲಿದ್ದರೆ, ಅವರ ಪಕ್ಕದಲ್ಲಿದ್ದ ಮತ್ತೊಬ್ಬ ಬಾಲಕಿ ಶ್ರೀರಾಮನ ವೇಷ ಧರಿಸಿದ್ದಳು. ಕಾಲಿನ ಬಳಿ ಮಂಡಿಯೂರಿ ಕುಳಿತಿದ್ದ ಮತ್ತೊಬ್ಬ ಬಾಲಕ ಹನುಮಂತನ ವೇಷದಲ್ಲಿದ್ದನು.

ಮತ್ತೊಂದು ಫೋಟೋದಲ್ಲಿ ಕಂಗನಾ ತಮ್ಮ ಮುಖದ ಕ್ಲೋಸ್​ ಅಪ್ ದೃಶ್ಯವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಕೈಯೆತ್ತಿ ಆಶೀರ್ವಾದ ಮಾಡುವಂತೆ ಪೋಸ್ ನೀಡಿದ್ದಾರೆ. ಈ ಫೋಟೋಗೆ ವ್ಯಂಗ್ಯದ ರೀತಿಯಲ್ಲಿ ಕ್ಯಾಪ್ಷನ್ ಬರೆದಿರುವ ಕಂಗನಾ, ‘ನನ್ನ ಎಲ್ಲಾ ಲಿಬರಲ್‌ಗಳಿಗೆ ಆಶೀರ್ವಾದಗಳು’ ಎಂದು ನಗುವಿನ ಇಮೋಜಿಗಳೊಂದಿಗೆ ಬಳಸಿದ್ದಾರೆ.

ಜೆನ್ ಜಿ ವಿದ್ಯಾರ್ಥಿಗಳ ಪ್ರತಿಭಟನೆಯ ವಿರುದ್ಧ ವಾಗ್ದಾಳಿ:

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಜೆನ್ ಜಿ ಯುವಕರ ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಮಾತನಾಡಿದ್ದ ಕಂಗನಾ, ‘ನನ್ನ ಜೀವನದಲ್ಲೇ ಇಷ್ಟೊಂದು ಅಸಹ್ಯಕರ ವಾತಾವರಣವನ್ನು ಎಲ್ಲೂ ನೋಡಿರಲಿಲ್ಲ. ಇವರು ಬಳಸುತ್ತಿರುವ ಭಾಷೆ ಮತ್ತು ಸಂಸ್ಕೃತಿ ಭಾರತದ ಘನತೆಗೆ ತಕ್ಕುದಾದುದಲ್ಲ. ನಮಗೆ ಇದರಿಂದ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್

ಕಂಗನಾಗೆ ತೀವ್ರ ತಿರುಗೇಟು ನೀಡಿದ ಸಿಜೆಪಿ:

ಕಂಗನಾ ಅವರ ಈ ಹೇಳಿಕೆಗೆ ಸಿಜೆಪಿ ವಕ್ತಾರ ಸೌರವ್ ದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಸೌರವ್, ‘ಅವರ ಸ್ವಂತ ಪಕ್ಷದವರೇ ಕಂಗನಾ ರಣಾವತ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಿರುವಾಗ ಸಾರ್ವಜನಿಕರು ಯಾಕೆ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು? ಹಿಮಾಚಲ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡುತ್ತಾ, ಸಂಸದರ ಕೆಲಸ ಇಷ್ಟೊಂದು ಕಷ್ಟ ಎಂದು ತಿಳಿದಿರಲಿಲ್ಲ ಎಂದಿದ್ದರು. ಇದು ಅವರ ಗಂಭೀರತೆಯನ್ನು ತೋರಿಸುತ್ತದೆ. ಈ ದೇಶಕ್ಕಾಗಿ ಜೆನ್ ಜಿ ಯುವಕರು ಕಂಗನಾಗಿಂತ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us