WITT Summit 2025: ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನಾಯಕತ್ವ, ತಮ್ಮ ಸ್ಪರ್ಧೆಯ ಬಗ್ಗೆ ಚಿರಾಗ್ ಪಾಸ್ವಾನ್ ಹೇಳಿದ್ದೇನು?
ಟಿವಿ9 ನೆಟ್ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT 2025) ಶೃಂಗಸಭೆಯು ಮಾರ್ಚ್ 28-29ರಂದು ನಡೆಯುವ 2 ದಿನಗಳ ಕಾರ್ಯಕ್ರಮವಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ, ಆಡಳಿತ, ಅರ್ಥಶಾಸ್ತ್ರ, ಆರೋಗ್ಯ, ಸಂಸ್ಕೃತಿ ಮತ್ತು ಕ್ರೀಡೆಗಳ ಕುರಿತು ಚರ್ಚೆಗಳನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವಾದ ನಿನ್ನೆ ಈ ಶೃಂಗಸಭೆಯಲ್ಲಿ ಭಾಷಣ ಮಾಡಿದರು. ಇಂದು ಈ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮಾತನಾಡಿದ್ದಾರೆ.

ನವದೆಹಲಿ, ಮಾರ್ಚ್ 29: ಟಿವಿ9 ಆಯೋಜಿಸಿರುವ “ವಾಟ್ ಇಂಡಿಯಾ ಥಿಂಕ್ಸ್ ಟುಡೇ” ಶೃಂಗಸಭೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (Chirag Paswan) ಬಿಹಾರ ರಾಜಕೀಯಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿದರು. ಸಿಎಂ ನಿತೀಶ್ ಕುಮಾರ್ (CM Nitish Kumar) ಅವರ ಆರೋಗ್ಯವನ್ನು ಪ್ರಶ್ನಿಸುತ್ತಿದ್ದ ವಿರೋಧ ಪಕ್ಷಗಳಿಗೆ ಅವರು ಸಲಹೆ ನೀಡಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಕಾರ್ಯಕ್ಷಮತೆಯ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದಾರೆ.
WITT ಗ್ಲೋಬಲ್ ಶೃಂಗಸಭೆಯ 2ನೇ ದಿನದಂದು, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (LJP) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು 2030ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಹಾಜಿಪುರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಕ್ಷೇತ್ರವನ್ನು ಹಿಂದೆ ತಮ್ಮ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರು ಪ್ರತಿನಿಧಿಸಿದ್ದರು.
ಬಿಹಾರದಲ್ಲಿ ಎನ್ಡಿಎ ಗೆಲುವು ಸಾಧಿಸಿದೆ ಎಂದು ಹೇಳಿಕೊಂಡ ಚಿರಾಗ್ ಪಾಸ್ವಾನ್, “ನಾವು ಖಂಡಿತವಾಗಿಯೂ ಗೆಲುವಿನತ್ತ ಸಾಗುತ್ತಿದ್ದೇವೆ. ನಮ್ಮ ಮೈತ್ರಿಕೂಟ 225ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ” ಎಂದು ಹೇಳಿದರು. 2030ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ತಮ್ಮ ದೀರ್ಘಕಾಲೀನ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಬಹಿರಂಗಪಡಿಸಿದರು. “ನಾನು ರಾಜ್ಯ ರಾಜಕೀಯವನ್ನು ಪ್ರವೇಶಿಸಲು ರಾಜಕೀಯವನ್ನು ಪ್ರವೇಶಿಸಿದೆ. ಆದರೆ, ನನ್ನ ತಂದೆ ಕೇಂದ್ರ ರಾಜಕೀಯದಲ್ಲಿ ಉಳಿಯಲು ಬಯಸಿದ್ದರು. ಹಾಗಿದ್ದರೂ ನಾನು ರಾಜ್ಯ ಮಟ್ಟದಲ್ಲಿ ಕೆಲಸ ಮಾಡಲು ದೃಢನಿಶ್ಚಯ ಮಾಡಿದ್ದೆ” ಎಂದು ಹೇಳಿದರು.
ಇದನ್ನೂ ಓದಿ: ನನ್ನ ತಂದೆಯಂತೆ ತತ್ವ, ಸಿದ್ಧಾಂತಕ್ಕಾಗಿ ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಚಿರಾಗ್ ಪಾಸ್ವಾನ್ ಅಚ್ಚರಿಯ ಹೇಳಿಕೆ
ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಟಿವಿ9ನ “ವಾಟ್ ಇಂಡಿಯಾ ಥಿಂಕ್ಸ್ ಟುಡೇ” ಶೃಂಗಸಭೆಯ ಎರಡನೇ ದಿನದಂದು ಭಾಗವಹಿಸಿದ್ದರು. ಅವರು ಬಿಹಾರ ರಾಜಕೀಯಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಬಿಹಾರ ರಾಜ್ಯದ ನಿತೀಶ್ ಸರ್ಕಾರದ ನೀತಿಗಳ ಬಗ್ಗೆ ಹಾಗೂ ಪ್ರತಿಪಕ್ಷಗಳ ಆರೋಪಗಳ ಬಗ್ಗೆಯೂ ಅವರು ಮಾತನಾಡಿದರು. ವಿರೋಧ ಪಕ್ಷಗಳು ಸಿಎಂ ನಿತೀಶ್ ಕುಮಾರ್ ಅವರ ನಿರ್ಧಾರಗಳು, ನೀತಿ ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಚಿರಾಗ್ ಪಾಸ್ವಾನ್, “ಇದು ತಪ್ಪು. ರಾಜಕೀಯದಲ್ಲಿ ವೈಯಕ್ತಿಕ ಆರೋಪಗಳು ಮತ್ತು ಪ್ರತಿ-ಆರೋಪಗಳನ್ನು ನಾನು ಎಂದಿಗೂ ಒಪ್ಪುವುದಿಲ್ಲ. ನೀವು ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳನ್ನು ಪ್ರಶ್ನಿಸಬಹುದು. ನೀವು ಸಿಎಂ ಆರೋಗ್ಯದ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡುತ್ತೀರಿ. ಇದು ಸರಿಯಲ್ಲ. ಅವರು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯ ನಿರ್ಧಾರಗಳು ಮತ್ತು ನೀತಿಗಳನ್ನು ಸಹ ವಿರೋಧಿಸಿದ್ದೇನೆ. ನಾನು 2020ರ ಚುನಾವಣೆಯನ್ನು ಏಕಾಂಗಿಯಾಗಿ ಹೋರಾಡಿದೆ” ಎಂದಿದ್ದಾರೆ.
ಟಿವಿ 9ನ ಶೃಂಗಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಚಿರಾಗ್ ಪಾಸ್ವಾನ್ ಕೂಡ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಚುನಾವಣಾ ಫಲಿತಾಂಶ ಹೇಗಿರುತ್ತದೆ ಎಂದು ಅವರನ್ನು ಕೇಳಲಾಯಿತು. “ಬಿಹಾರದಲ್ಲಿ ಎನ್ಡಿಎಯಲ್ಲಿ 5 ಪಕ್ಷಗಳಿವೆ. ಉಪಚುನಾವಣೆಯಲ್ಲಿ ನಾವು ಎಲ್ಲಾ ಸ್ಥಾನಗಳನ್ನು ಗೆದ್ದಿದ್ದೇವೆ. ಜಾತಿ ಸಮೀಕರಣದ ಪ್ರಕಾರ ಕಷ್ಟಕರವಾಗಿದ್ದ ಸ್ಥಾನಗಳನ್ನು ಸಹ ನಾವು ಗೆದ್ದಿದ್ದೇವೆ. ಈ ಬಾರಿ ಐತಿಹಾಸಿಕ ಗೆಲುವು ಸಿಗುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ಮೈತ್ರಿಕೂಟ 225ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ” ಎಂದಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಚಿರಾಗ್ ಪಾಸ್ವಾನ್ ಹೇಳಿದ್ದೇನು?:
ರಾಹುಲ್ ಗಾಂಧಿ ಬಗ್ಗೆಯೂ ಚಿರಾಗ್ ಪಾಸ್ವಾನ್ ಮಾತನಾಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಹಲವು ಪ್ರಮುಖ ಮಸೂದೆಗಳ ಮೇಲಿನ ಚರ್ಚೆಯ ಸಮಯದಲ್ಲಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಇರಲಿಲ್ಲ. ವಿರೋಧ ಪಕ್ಷದ ನಾಯಕನ ಕೆಲಸವೆಂದರೆ ಕೇವಲ ತಮ್ಮ ಅಭಿಪ್ರಾಯವನ್ನು ಹೇಳಿ ಸದನದಿಂದ ಹೊರಹೋಗುವುದಲ್ಲ. ಇದು ಗಂಭೀರ ವಿಷಯ. ಧರ್ಮವು ವೈಯಕ್ತಿಕ ವಿಷಯ. ಧಾರ್ಮಿಕ ನಾಯಕರು ರಾಜಕೀಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದಾಗ ಮತ್ತು ರಾಜಕೀಯ ಜನರು ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದಾಗ ಶೇ. 90ರಷ್ಟು ಸಮಸ್ಯೆಗಳು ಕೊನೆಗೊಳ್ಳುತ್ತವೆ” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ