ನೀವು ಆರ್ಎಸ್ಎಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ; ನ್ಯಾಯಾಧೀಶರ ಕುರಿತು ಕೇಜ್ರಿವಾಲ್ ಆರೋಪ
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಲ್ಲಿಸಿದ್ದ ಅರ್ಜಿಯನ್ನು ತಾವೇ ವಾದಿಸಿದ್ದು ವಿಶೇಷವಾಗಿತ್ತು. ಸಿಬಿಐ ಅರ್ಜಿಯ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರನ್ನು ವಜಾಗೊಳಿಸಬೇಕೆಂದು ಅರವಿಂದ್ ಕೇಜ್ರಿವಾಲ್ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಈ ಪ್ರಕರಣದ ವಾದಗಳ ಸಮಯದಲ್ಲಿ ಮಾತನಾಡಿದ ಕೇಜ್ರಿವಾಲ್, ಈ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ್ದರೂ ಅವರನ್ನು ನ್ಯಾಯಾಲಯವು "ತಪ್ಪಿತಸ್ಥರು" ಮತ್ತು "ಭ್ರಷ್ಟರು" ಎಂದು ಪರಿಗಣಿಸಿದೆ ಎಂದು ಬೇಸರ ಹೊರಹಾಕಿದ್ದಾರೆ.

ನವದೆಹಲಿ, ಏಪ್ರಿಲ್ 13: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂಬಂಧಿಸಿದ ವಕೀಲರ ಸಂಸ್ಥೆಯಾದ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4 ಬಾರಿ ಭಾಗವಹಿಸಿದ್ದಾರೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಆರೋಪಿಸಿದ್ದಾರೆ. ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ 4 ಬಾರಿ ಹಾಜರಾಗಿರುವುದು ಆತಂಕವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತವನ್ನು ನಾನು ವಿರೋಧಿಸುತ್ತೇನೆ. ಅಂತಹ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ನ್ಯಾಯಮೂರ್ತಿ ಸ್ವರಣಾ ಶರ್ಮಾ ನನ್ನ ಕೇಸನ್ನು ವಿಚಾರಣೆ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ, ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಅರ್ಜಿಯನ್ನು ವಿಚಾರಣೆ ನಡೆಸುವುದರಿಂದ ನ್ಯಾಯಮೂರ್ತಿ ಸ್ವರಣಾ ಶರ್ಮಾ ಅವರನ್ನು ಹಿಂತೆಗೆದುಕೊಳ್ಳಬೇಕೆಂದು ಕೇಜ್ರಿವಾಲ್ ಕೋರಿದ್ದಾರೆ. ಈ ವಿಷಯದಲ್ಲಿ ತಮ್ಮ ಪ್ರಕರಣದ ವಿಚಾರಣೆ ನಿಷ್ಪಕ್ಷಪಾತ ಮತ್ತು ತಟಸ್ಥವಾಗಿರುವುದಿಲ್ಲ ಎಂಬ ಗಂಭೀರವಾದ ಆತಂಕವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: RSS ಬಗ್ಗೆ ಅವಹೇಳನಕಾರಿ ಮಾತು: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದ ಬಿಜೆಪಿ, ದೂರು ದಾಖಲು
“ಅಧಿವಕ್ತ ಪರಿಷತ್ ಎಂಬ ವಕೀಲರ ಸಂಸ್ಥೆ ಇದೆ. ಅದು ಬಿಜೆಪಿ ಮತ್ತು ಆರ್ಎಸ್ಎಸ್ನ ಸೈದ್ಧಾಂತಿಕ ಸಂಸ್ಥೆ. ನ್ಯಾಯಮೂರ್ತಿ ಸ್ವರಣಾ ಅವರು ಇದರ ಕಾರ್ಯಕ್ರಮಗಳಿಗೆ 4 ಬಾರಿ ಹಾಜರಾಗಿದ್ದಾರೆ. ಅವರು ಅನುಸರಿಸುವ ಸಿದ್ಧಾಂತವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ಪ್ರಕರಣ ರಾಜಕೀಯವಾಗಿದೆ” ಎಂದು ನ್ಯಾಯಾಲಯಕ್ಕೆ ಹಾಜರಾದ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




