- TV9 Kannada Photo gallery Chamarajanagar: Kamarawadi's Unique Ritual: Coconut Cracking on Devotees' Heads, taja suddi
ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳುವ ವಿಶಿಷ್ಟ ರೀತಿ ಹಬ್ಬ ನೋಡಿದ್ದೀರಾ?
ಚಾಮರಾಜನಗರದ ಕಮರವಾಡಿ ಗ್ರಾಮದ ಮೂಗುಮಾರಮ್ಮ ಹಬ್ಬದಲ್ಲಿ, ಹರಕೆ ಹೊತ್ತ ಭಕ್ತರು ತಮ್ಮ ತಲೆ ಮೇಲೆ ತೆಂಗಿನಕಾಯಿ ಒಡೆಸಿಕೊಳ್ಳುವ ವಿಶಿಷ್ಟ ಪದ್ಧತಿ ಇದೆ. ಯಾವುದೇ ಗಾಯವಾಗದೆ ತೆಂಗಿನಕಾಯಿ ಎರಡು ಭಾಗಗಳಾಗುತ್ತದೆ. ಈ ಪದ್ಧತಿಯು ತಲೆತಲಾಂತರಗಳಿಂದ ನಡೆದುಬಂದಿದ್ದು, ಭಕ್ತಿಯ ಪ್ರತೀಕವಾಗಿದೆ. ಮೂರು ದಿನಗಳ ಈ ಹಬ್ಬದಲ್ಲಿ ವಿವಿಧ ಪೂಜೆಗಳು ಮತ್ತು ಪಡಿತರ ಸಂಗ್ರಹಣೆ ನಡೆಯುತ್ತದೆ.
Updated on: Mar 19, 2025 | 9:13 PM

ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ನಡೆಯುವ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ. ತೆಂಗಿನ ಕಾಯಿಗಳನ್ನ ತಲೆ ಮೇಲೆ ಒಡೆದರೂ ಅವರ ತಲೆಗೆ ನೋವಾಗಲಿ ಒಂದು ಹನಿ ರಕ್ತವಾಗಲಿ ಬರುವುದಿಲ್ಲ. ಈ ವಿಶಿಷ್ಟ ಹಬ್ಬದ ಕುರಿತು ಒಂದು ವರದಿ ಇಲ್ಲಿದೆ.

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವತೆ ಮೂಗುಮಾರಮ್ಮನ ಹಬ್ಬ ಮೂರು ದಿನಗಳ ಕಾಲ ನಡೆಯುತ್ತೆ. ತೆಂಗಿನ ಕಾಯಿಗಳನ್ನು ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಹರಕೆ ಹೊತ್ತ ಭಕ್ತರು ತಮ್ಮ ತಲೆಯಿಂದ ತೆಂಗಿನ ಕಾಯಿ ಒಡೆಸಿಕೊಂಡು ಭಕ್ತಿಯ ಪರಕಾಷ್ಠ ಮೆರೆಯುತ್ತಾರೆ. ಮೊದಲ ದಿನ ನಡೆಯುವ ಮಾರಮ್ಮನ ಮೆರವಣಿಗೆಯಲ್ಲಿ ಭಕ್ತರ ತಲೆ ಮೇಲೆ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ.

ಎರಡನೇ ದಿನ ವಿಶೇಷಪೂಜೆ, ಪುನಸ್ಕಾರಗಳು ನಡೆಯುತ್ತವೆ. ಮೂರನೇ ದಿನ ಗ್ರಾಮದ ಮನೆ ಮನೆಗಳಿಗೆ ಪಡಿತರ ಸಂಗ್ರಹಿಸಲಾಗುತ್ತದೆ. ಈ ವೇಳೆ ಹರಕೆ ಹೊತ್ತವರ ತಲೆ ಮೇಲೆ ತೆಂಗಿನ ಕಾಯಿ ಒಡೆಯಲಾಗುತ್ತದೆ. ಗ್ರಾಮದ ಪ್ರತಿ ಮನೆಯ ಬಳಿ ಹೋಗಿ ಅಕ್ಕಿ, ಬೆಲ್ಲ ಪಡೆದು ಬಳಿಕ ಆ ಮನೆಯವರಿಗೆ ಅವರ ಮನೆಯ ಮುಂದೆಯೇ ತೆಂಗಿನಕಾಯಿಯನ್ನ ಒಡೆಯಲಾಗುತ್ತೆ.

ತಮ್ಮ ತಲೆ ಮೇಲೆ ತೆಂಗಿನ ಕಾಯಿ ಒಡೆದರೂ ಯಾವುದೇ ನೋವುಂಟಾಗುವುದಿಲ್ಲ ರಕ್ತವೂ ಬರುವುದಿಲ್ಲ, ಇದೆಲ್ಲಾ ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎನ್ನುತ್ತಾರೆ ಹರಕೆ ಹೊತ್ತ ಭಕ್ತರು. ತಲೆ ಮೇಲೆ ಒಡೆಯುವ ತೆಂಗಿನ ಕಾಯಿ ಒಂದೇ ಏಟಿಗೆ ಪಟಾರನೆ ಎರಡು ಹೋಳಾಗುತ್ತದೆ.

ಒಟ್ಟಾರೆ ತಲೆತಲಾಂತರಗಳಿಂದ ನಡೆದು ಬಂದಿರುವ ಈ ಪದ್ದತಿಯನ್ನು ಇಂದಿನ ಪೀಳಿಗೆಯುವರು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.
Read More



