- Kannada News Photo gallery Dharwad Mango Mela: Farmers Direct Sale to End Broker Menace and Offer Chemical-Free Mangoes
ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ
ಧಾರವಾಡದ ಗಾಂಧಿ ಭವನದಲ್ಲಿ ಮಾವು ಬೆಳೆಗಾರರಿಂದ ನೇರ ಮಾರಾಟ ಅಭಿಯಾನ ಆರಂಭವಾಗಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಿ, ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿಸಿದ ರುಚಿಕರ ಆಪೋಸಾ ಹಾಗೂ ವಿವಿಧ ತಳಿಯ ಹಣ್ಣುಗಳನ್ನು ನ್ಯಾಯಯುತ ದರದಲ್ಲಿ ನೀಡಲಾಗುತ್ತಿದೆ. ಹವಾಮಾನ ವೈಪರೀತ್ಯದ ನಡುವೆಯೂ ರೈತರಿಗೆ ಆರ್ಥಿಕ ನೆರವು ನೀಡುವ ಈ ವಿನೂತನ ಪ್ರಯತ್ನ ಇದಾಗಿದ್ದು, ರಸಭರಿತ ಮಾವಿ ಹಣ್ಣುಗಳ ಝಲಕ್ ಇಲ್ಲಿದೆ ನೋಡಿ.
Updated on: May 03, 2026 | 8:22 AM

ಸಾಮಾನ್ಯವಾಗಿ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ಲಾಭ ಸಿಗುತ್ತಿರಲಿಲ್ಲ. ಈಗ ಧಾರವಾಡದ ಮಾವು ಬೆಳೆಗಾರರ ಬಳಗವು ನೇರವಾಗಿ ಗ್ರಾಹಕರಿಗೆ ಹಣ್ಣು ತಲುಪಿಸುವ ಮೂಲಕ ಈ ಮಧ್ಯವರ್ತಿಗಳ ವ್ಯವಸ್ಥೆಯನ್ನು ತಪ್ಪಿಸಿದೆ. ಇದರಿಂದ ಲಾಭಾಂಶವು ನೇರವಾಗಿ ರೈತರ ಕೈ ಸೇರುತ್ತಿದೆ.

ಧಾರವಾಡದ ಗಾಂಧಿ ಭವನದಲ್ಲಿ ನಡೆಯುತ್ತಿರುವ ಈ ಅಭಿಯಾನದಲ್ಲಿ ಗ್ರಾಹಕರಿಗೆ ವಿವಿಧ ತಳಿಯ ಮಾವಿನ ಹಣ್ಣುಗಳು ಲಭ್ಯವಿವೆ. ಪ್ರಸಿದ್ಧ ಆಪೋಸಾ (ಅಲ್ಫಾನ್ಸೋ) ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ಒಂದೇ ಕಡೆ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಅಲೆದಾಡುವ ಶ್ರಮವನ್ನು ತಪ್ಪಿಸಿ, ಒಂದೇ ಸ್ಥಳದಲ್ಲಿ ಗುಣಮಟ್ಟದ ಹಣ್ಣುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಟ್ಟಿದೆ.

ಈ ಮಾರಾಟ ಮೇಳದ ವಿಶೇಷತೆಯೆಂದರೆ ಇಲ್ಲಿ ಸಿಗುವ ಹಣ್ಣುಗಳು ನೈಸರ್ಗಿಕವಾಗಿ ಮಾಗಿಸಿದವುಗಳಾಗಿವೆ. ಮಾರುಕಟ್ಟೆಯಲ್ಲಿ ಸಿಗುವಂತೆ ಕಾರ್ಬೈಡ್ ಅಥವಾ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿಲ್ಲ. ರೈತರು ತಾವು ಬೆಳೆದ ಹೊಲದ ಹಣ್ಣುಗಳ ರುಚಿಯನ್ನು ಸ್ಥಳದಲ್ಲಿಯೇ ಗ್ರಾಹಕರಿಗೆ ನೀಡುತ್ತಿರುವುದು ವಿಶೇಷ. ಇದು ಗ್ರಾಹಕರಲ್ಲಿ ಹಣ್ಣಿನ ಗುಣಮಟ್ಟದ ಬಗ್ಗೆ ನಂಬಿಕೆ ಮತ್ತು ಆರೋಗ್ಯದ ಭರವಸೆ ಮೂಡಿಸಿದೆ.

ಧಾರವಾಡದ ಆಪೋಸಾ ಹಣ್ಣಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆಯಿದೆ. ಇಲ್ಲಿನ ಮಣ್ಣು ಮತ್ತು ಹವಾಮಾನದಿಂದಾಗಿ ಈ ಹಣ್ಣಿಗೆ ವಿಶಿಷ್ಟ ರುಚಿ ಇರುತ್ತದೆ. ಜಿಲ್ಲೆಯಲ್ಲಿ ಸುಮಾರು 12 ಸಾವಿರ ಹೆಕ್ಟೇರ್ಗಿಂತಲೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಇದರಲ್ಲಿ ಆಪೋಸಾ ಅಗ್ರಸ್ಥಾನದಲ್ಲಿದೆ. ಈ ಗುಣಮಟ್ಟದ ಹಣ್ಣನ್ನು ನೇರವಾಗಿ ರೈತರಿಂದಲೇ ಪಡೆಯಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ.

ಸಂಘಟಿತ ಮಾರಾಟದ ಇನ್ನೊಂದು ಉತ್ತಮ ಅಂಶವೆಂದರೆ ದರ ನಿಯಂತ್ರಣ. ಈ ಅಭಿಯಾನದಲ್ಲಿ ಎಲ್ಲ ರೈತರು ಸೇರಿ ಹಣ್ಣುಗಳಿಗೆ ಏಕರೂಪದ ಬೆಲೆಯನ್ನು ನಿಗದಿಪಡಿಸಿದ್ದಾರೆ. ಇದರಿಂದ ಗ್ರಾಹಕರಿಗೆ ದರದ ಬಗ್ಗೆ ಗೊಂದಲವಿರುವುದಿಲ್ಲ ಮತ್ತು ರೈತರ ನಡುವೆ ಅನಗತ್ಯ ಸ್ಪರ್ಧೆಯೂ ಇರುವುದಿಲ್ಲ. ಬೆಳೆಗಾರರು ತಾವೇ ಖುದ್ದಾಗಿ ನಿಂತು ಮಾರಾಟ ಮಾಡುತ್ತಿರುವುದು ಅವರಿಗೆ ಹೊಸ ಅನುಭವ ಮತ್ತು ಹೆಚ್ಚಿನ ಲಾಭ ನೀಡುತ್ತಿದೆ.

ಈ ಬಾರಿ ರೈತರು ಹವಾಮಾನ ವೈಪರೀತ್ಯ ಮತ್ತು ಆಲಿಕಲ್ಲು ಮಳೆಯಿಂದಾಗಿ ಸಾಕಷ್ಟು ಇಳುವರಿ ನಷ್ಟ ಅನುಭವಿಸಿದ್ದಾರೆ. ಮಾವಿನ ಮರಗಳ ನಿರ್ವಹಣೆಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ಖರ್ಚು ಮಾಡಿರುತ್ತಾರೆ. ಇಂತಹ ಕಷ್ಟದ ಸಮಯದಲ್ಲಿ ದಲ್ಲಾಳಿಗಳ ಕೈಗೆ ಸಿಲುಕಿ ನಷ್ಟ ಅನುಭವಿಸಬಾರದೆಂಬ ಕಾರಣಕ್ಕೆ ಈ ನೇರ ಮಾರಾಟ ವ್ಯವಸ್ಥೆ ರೈತರಿಗೆ ಆರ್ಥಿಕ ರಕ್ಷಾಕವಚದಂತೆ ಕೆಲಸ ಮಾಡುತ್ತಿದೆ.




