- Kannada News Photo gallery Karnataka Tableau at 74 Republic Day parade at Kartavya Path major attractions
Republic Day 2023: ಕರ್ತವ್ಯಪಥದಲ್ಲಿ ಗಣರಾಜೋತ್ಸವ ಪರೇಡ್ -ಕರ್ನಾಟಕದ ಸ್ತಬ್ಧ ಚಿತ್ರ ಪ್ರಮುಖ ಆಕರ್ಷಣೆ
ದೆಹಲಿಯ ಕರ್ತವ್ಯಪಥ್ ನಲ್ಲಿ ನಡೆದ ಗಣರಾಜೋತ್ಸವ ಪರೇಡ್ನಲ್ಲಿ ನಾರಿ ಶಕ್ತಿ ಪರಿಕಲ್ಪನೆಯ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ (Kartavya Path) 74ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದಾರೆ.
Updated on:Jan 26, 2023 | 4:11 PM

ದೆಹಲಿಯ ಕರ್ತವ್ಯಪಥ್ ನಲ್ಲಿ ನಡೆದ ಗಣರಾಜೋತ್ಸವ ಪರೇಡ್ನಲ್ಲಿ ನಾರಿ ಶಕ್ತಿ ಪರಿಕಲ್ಪನೆಯ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದಾರೆ.

ಭಾರತೀಯ ಸೇನಾ ಪಡೆ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಿ ಪರೇಡ್ ನಡೆಸಿದ ಕ್ಷಣ. ಈ ಬಾರಿ ಕರ್ನಾಟಕ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಟ್ಯಾಬ್ಲೊ ಪ್ರದರ್ಶನ ಮಾಡಲಾಗಿದೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ಹಾಲಕ್ಕಿ ತುಳಸಿಗೌಡ ಮತ್ತು ಸೂಲಗಿತ್ತಿ ನರಸಮ್ಮರ ಸಾಧನೆಯನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.

ಟ್ಯಾಬ್ಲೊ ಮುಂಭಾಗದಲ್ಲಿ ಎರಡು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿರುವ ತುಮಕೂರಿನ ಪಾವಗಡದ ಸೂಲಗಿತ್ತಿ ನರಸಮ್ಮ ಅವರ ಚಿತ್ರವನ್ನು ಮಧ್ಯಭಾಗದಲ್ಲಿ 30 ಸಾವಿರಕ್ಕೂ ಅಧಿಕ ಔಷಧಿಯ ಸಸಿಗಳನ್ನು ಪೊಷಿಸಿದ ಹಾಲಕ್ಕಿ ತುಳಸಿಗೌಡ ಹಾಗೂ ಕೊನೆಗೆ ಸಾವಿರಾರು ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರ ಚಿತ್ರವನ್ನು ಬಳಸಿದ್ದು ಅವರ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಇನ್ನು ಕರ್ನಾಟಕದ ಟ್ಯಾಬ್ಲೊ ಜೊತೆಗೆ ರಾಜ್ಯದ ಸಂಸ್ಕೃತಿ ಪ್ರದರ್ಶಿಸುವ ನೃತ್ಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಟ್ಯಾಬ್ಲೊ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತದ ಕಲಾವಿದರು ಹೆಜ್ಜೆ ಹಾಕುತ್ತಿದ್ದಾರೆ. ಇವರ ಜೊತೆಗೆ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಗೊಂಡಿರುವ ನೃತ್ಯ ಪ್ರದರ್ಶನದಲ್ಲಿ ಕೊಪ್ಪಳದ ಕಕುನೂರು ಮೂಲದ ನಂದಿ ಧ್ವಜ ಕುಣಿತ ಕಲಾವಿದರು, ಬೆಂಗಳೂರಿನ ಉಡುಪಿ ಮೂಲದ ಮೂವರು ಭರತನಾಟ್ಯ ಕಲಾವಿದರು ಭಾಗಿಯಾಗಿದ್ದಾರೆ.

ಕರ್ನಾಟಕ ಸತತ 14 ನೇ ಬಾರಿ ಗಣರಾಜೋತ್ಸವ ಪರೇಡ್ ನಲ್ಲಿ ತನ್ನ ಸ್ತಬ್ಧ ಚಿತ್ರ ಪ್ರದರ್ಶನ ಮಾಡುತ್ತಿದೆ. ಈವರೆಗೂ ಸತತ 14 ವರ್ಷಗಳ ಕಾಲ ಟ್ಯಾಬ್ಲೊ ಪ್ರದರ್ಶನ ಮಾಡಲು ಯಾರಿಗೂ ಅವಕಾಶ ಸಿಕ್ಕಿಲ್ಲ ಹೀಗಾಗಿ ಕರ್ನಾಟಕ ಸತತ 14 ವರ್ಷಗಳ ಪ್ರದರ್ಶನದ ಮೂಲಕ ಹೊಸ ಸಾಧನೆ ಮಾಡಿದಂತಾಗಿದೆ.

ಆರಂಭದಲ್ಲಿ ಕರ್ನಾಟಕಕ್ಕೆ ಈ ಬಾರಿಗೆ ಅವಕಾಶ ನೀಡಲು ಕೇಂದ್ರದ ಆಯ್ಕೆ ಸಮಿತಿ ನಿರಾಕರಿಸಿತ್ತು. ಸತತ ಪ್ರದರ್ಶನದ ಹಿನ್ನೆಲೆ ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿತ್ತು. ಆದರೆ ರಾಜ್ಯದಿಂದ ತೀವ್ರ ಟೀಕೆ ವ್ಯಕ್ತವಾದ ಬಳಿಕ ಮತ್ತೆ ಕರ್ನಾಟಕದ ಟ್ಯಾಬ್ಲೊ ಭಾಗಿಯಾಗಲು ಅವಕಾಶ ನೀಡಲಾಯಿತು.
Published On - 4:09 pm, Thu, 26 January 23




