ಯತ್ನಾಳ್ ಪರ- ವಿರೋಧ: ಪಂಚಮಸಾಲಿ ಸಮುದಾಯದಲ್ಲೇ ಭಿನ್ನಮತ ಸ್ಫೋಟ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದಕ್ಕೆ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೋರಾಟ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಸ್ವತಃ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವಿರೋಧ ವ್ಯಕ್ತಪಡಿಸಿದೆ. ಏನಿದು ಲಿಂಗಾಯತ ಪಂಚಮಸಾಲಿ ಸಮುದಾಯದಲ್ಲೇ ಏನಿದು ಬಿನ್ನಮತ? ಇಲ್ಲಿದೆ ವಿವರ

ಬೆಂಗಳೂರು, ಏಪ್ರಿಲ್ 05: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಬಿಜೆಪಿಯಿಂದ (BJP) ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದನ್ನು ಪಂಚಮಸಾಲಿ ಸಮುದಾಯದ (Panchamasali Community) ಖಂಡಿಸಿ, ಹಿಂದೂ ಪರ ಸಂಘಟನೆಗಳ ಜೊತೆ ಸೇರಿಕೊಂಡು ರವಿವಾರ (ಏ.06) ರಂದು ಟೌನ್ಹಾಲ್ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು (Jayamruthyunjaya Swamiji) ಹೇಳಿದ್ದಾರೆ. ಆದರೆ, ಜಯಮೃತ್ಯುಂಜಯಶ್ರೀಗಳ ಈ ನಿರ್ಧಾರಕ್ಕೆ ಸ್ವತಃ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವಿರೋಧ ವ್ಯಕ್ತಪಡಿಸಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಯಾವುದೇ ರೀತಿಯ ಹೋರಾಟ ಮಾಡಬಾರದು. ವ್ಯಯಕ್ತಿಕ ಹಿತಾಸಕ್ತಿಯಿಂದ ಯತ್ನಾಳ್ ಪರವಾಗಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಪಂಚಮಸಾಲಿ ಮುಖಂಡರು ಹೇಳಿದ್ದಾರೆ.
ಸ್ವಾಭಿಮಾನದ ನಡೆಗೆ ಕರೆ
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಯಮೃತ್ಯುಂಜಯಶ್ರೀಗಳು, ಏ.11ರಂದು “ಸ್ವಾಭಿಮಾನದ ನಡೆ ವಿಜಯಪುರದ ಕಡೆ” ಎಂಬ ಘೋಷ ವಾಕ್ಯದೊಂದಿಗೆ ಱಲಿ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.
ಶ್ರೀಗಳ ನಡೆಗೆ ಸಮಾಜದ ಟ್ರಸ್ಟ್ನಿಂದ ವಿರೋಧ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ವಿರೋಧಿಸಿ ಜಯಮೃತ್ಯುಂಜಯ ಶ್ರೀಗಳು ಹೋರಾಟಕ್ಕೆ ಮುಂದಾಗಿರುವುಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಯಾವುದೇ ರೀತಿಯ ಹೋರಾಟ ಮಾಡಬಾರದು. ವೈಯಕ್ತಿಕ ಹಿತಾಸಕ್ತಿಯಿಂದ ಯತ್ನಾಳ್ ಪರವಾಗಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಟ್ರಸ್ಟ್ನ ಮುಖಂಡರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಚಮಸಾಲಿ ಸಮಾಜದ ಮುಖಂಡ ಮೋಹನ ಲಿಂಬಿಕಾಯಿ, ಸ್ವಾಮಿಗಳು ಜಾತಿ, ಒಳಪಂಗಡಗಳಿಗಾಗಿ ಕೆಲಸ ಮಾಡಬೇಕು. ಸ್ವಾಮಿಗಳನ್ನು ಮಾಡುವ ಉದ್ದೇಶ ಸಮಾಜ ಸಂಘಟನೆಗಾಗಿ. ಸಮಾಜದಲ್ಲಿನ ಜನರನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲಕ್ಕೆ ಎತ್ತಲು ಸ್ವಾಮೀಜಿಗಳನ್ನು ನೇಮಕ ಮಾಡಿರುತ್ತಾರೆ. ಸ್ವಾಮೀಜಿಗಳು ಯಾವ ಸಂದರ್ಭದಲ್ಲೂ ವ್ಯಕ್ತಿ, ರಾಜಕೀಯ ಪಕ್ಷದ ಸ್ವತ್ತು ಆಗಬಾರದು ಎಂದರು.
ಸ್ವಾಮೀಜಿಗಳು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದರಿಂದ ರಾಜಕೀಯ ಸ್ವಾಮಿ ಆಗುತ್ತಾರೆ. ಹೀಗೆ, ಆಗರಬಾರದು ಎಂಬುವುದು ನಮ್ಮ ಉದ್ದೇಶವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ರನ್ನ ಉಚ್ಛಾಟನೆ ಮಾಡಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಡಿದ ಸಹಾಯ ನಾವು ಮರೆಯಲು ಆಗಲ್ಲ. ಪಕ್ಷಾತೀತವಾಗಿ ಎಲ್ಲ ಮುಖಂಡರ ಸಭೆ ಕರೆದು ಸ್ವಾಮೀಜಿಗಳಿಗೆ ಯಾವ ನಿಟ್ಟಿನಲ್ಲಿ ಸಮಾಜವನ್ನ ಕರೆದುಕೊಂಡು ಹೋಗಬೇಕು ಅನ್ನೋ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.
ಎಲ್ಲ ಶಾಸಕರು, ಮಾಜಿ ಶಾಸಕರು, ಮಂತ್ರಿ, ಮಾಜಿ ಮಂತ್ರಿಗಳನ್ನು ಕರೆದು ಟ್ರಸ್ಟ್ ಅಡಿಯಲ್ಲಿ ಚಿಂತನೆ ಮಾಡುತ್ತೇವೆ. ಸ್ವಾಮೀಜಿಗಳು ತಮ್ಮ ವ್ಯಯಕ್ತಿಕ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಮೊದಲು ಸಾಕಷ್ಟು ಬಾರಿ ನಮ್ಮ ಸಮಾಜದ ಹಲವರಿಗೆ ಅನ್ಯಾಯ ಆಗಿದೆ. ಆದರೆ, ಈಗ ಧ್ವನಿ ಎತ್ತಿದ್ದಾರೆ ಅದು ಸರಿಯಲ್ಲ. ನಾವು ಇಲ್ಲಿ ಪಕ್ಷತೀತವಾಗಿ ಕೂಡಿದ್ದೇವೆ. 2ಎ ಮೀಸಲಾತಿ ವಿಚಾರಕ್ಕೆ ಕಾನೂನು ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ವರಿಷ್ಠರು ಯತ್ನಾಳ್ರನ್ನು ಉಚ್ಚಾಟಿಸಿದ್ದಾರೆ ಮತ್ತು ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ: ಕುಮಾರ ಬಂಗಾರಪ್ಪ
ಹಿರಿಯ ವಕೀಲರೊಂದಿಗೆ ಸಮಾಲೋಚನೆ ಮಾಡಿ ಎರಡು ತಿಂಗಳಲ್ಲಿ ವರದಿ ಸಲ್ಲಿಸಲು ತಿಳಿಸುತ್ತೇವೆ. ಕಾನೂನು ಸಮಿತಿ ಮಾಡಲು ನಿರ್ಧಾರ ಮಾಡಿದ್ದೇವೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಪಂಚಮಸಾಲಿ ಮುಖಂಡರ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ಜಿಲ್ಲೆಯ ಪಂಚಮಸಾಲಿ ಮುಖಂಡರು ಭಾಗಿಯಾಗಿದ್ದರು. ಪಕ್ಷಾತೀತವಾಗಿ ಬಿಜೆಪಿಯ ಮಾಜಿ ಶಾಸಕರು, ಕಾಂಗ್ರೆಸ್ನ ಮಾಜಿ ಶಾಸಕರು ಉಪಸ್ಥಿತರಿದ್ದರು.