Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

Dr. Shakuntala Shridhara : ಗಂಡ ತನ್ನ ಮಗಳ ವಯಸ್ಸಿನ ಚಿಕ್ಕ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡ. ಅದು ಪತ್ತೆಯಾದಾಗ ನಿರಾಕರಿಸಿದ. ವಿಶ್ವಾಸದ್ರೋಹದ ಅಪರಾಧವು ಅವನಿಗೆ ಅಸಹನೀಯವಾಗಿತ್ತು, ಅದು ಅವನ ಆತ್ಮಹತ್ಯೆಯಲ್ಲಿ ಮಾತ್ರವಲ್ಲದೆ ಜೊತೆಗೆ ಆ ಹುಡುಗಿಯ ಸಾವಲ್ಲೂ ಕೊನೆಗೊಂಡಿತ್ತು.

Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ
ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ
Follow us
|

Updated on:Apr 15, 2022 | 9:40 AM

ನಿಮ್ಮ ಟೈಮ್​ಲೈನ್ | Nimma Timeline :  1973 ರಿಂದ 1992 ವರೆಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ನಾನು ರಾಷ್ಟ್ರೀಯ ಮಟ್ಟದಲ್ಲಿ ನನ್ನ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತ ಪಡಿಸಿದೆ. ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ವಿಜ್ಞಾನಿಯ ಕನಸು. 1992 ರಲ್ಲಿ ಕಶೇರುಗಳ ನಿಯಂತ್ರಣ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಲು ಕ್ಯಾಲಿಫೋರ್ನಿಯಾಗೆ ಹೋಗಲು ನನಗೆ ಅವಕಾಶ ಸಿಕ್ಕಿತು. ಒಂದಲ್ಲ ನನ್ನ ಎರಡೂ ಪ್ರಬಂಧಗಳನ್ನು ಮಂಡಿಸಲು ಅಂಗೀಕರಿಸಲಾಯಿತು. ನನ್ನ ಸಂತೋಷಕ್ಕೆ ಕಿರೀಟವಿಟ್ಟಂತೆ ನನ್ನನ್ನು ಅಧಿವೇಶನ ಒಂದು ಸೆಷನ್​ಗೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಅಮೆರಿಕನ್  ಪ್ರಯಾಣದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಯಸಿದೆ ಮತ್ತು ಮೂಷಕಗಳ ಸಂಶೋಧನೆಯನ್ನು ನಡೆಸಿದ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಸಂಪರ್ಕಿಸಿ ಆ ಕೇಂದ್ರಗಳಲ್ಲಿ ಉಪನ್ಯಾಸಗಳನ್ನು ನೀಡಲು ಆಹ್ವಾನಗಳನ್ನು ಪಡೆದುಕೊಂಡೆ. ಆಲ್ಲದೆ ನನ್ನ ಉಪನ್ಯಾಸಗಳಿಗೆ ಉತ್ತಮ ಸಂಭಾವನೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಡಾ. ಶಕುಂತಲಾ ಶ್ರೀಧರ (Shakuntala Shridhara), ಮೂಷಕ ತಜ್ಞೆ, ಬೆಂಗಳೂರು

(ಭಾಗ 2)

ಇದು ನಾನು ಇಲ್ಲಿ ಬರೆಯುವಷ್ಟು ಸುಲಭ ಸಾಧ್ಯವಲ್ಲ. ಇಲ್ಲಿಯ ಶ್ರೇಷ್ಠ ವಿಜ್ಞಾನಿಗಳೊಂದಿಗೆ ನಾನು ಬಹಳಷ್ಟು ವರ್ಷಗಳ ಹಿಂದೆಯೇ ಇಲಿಗಳ ನಿಯಂತ್ರಣದ ಸಂಶೋಧನೆಯ ಬಗ್ಗೆ ಪತ್ರ ವ್ಯವಹಾರವಿಟ್ಟುಕೊಂಡಿದ್ದೆ. ಅವರ ಸಂಶೋಧನಾ ಪ್ರಬಂಧಗಳನ್ನು ತರಿಸಿಕೊಂಡಿದ್ದೆ ಹಾಗೂ ನನ್ನದನ್ನು ಅವರಿಗೆ ಕಳುಹಿಸಿಕೊಟ್ಟಿದ್ದೆ ಹಾಗೂ ನಾನು ಭಾಷಣ ಕೊಡಲಿರುವ ವಿಷಯಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಯನ್ನೂ ಒದಗಿಸಿದ್ದೆ. ನನ್ನ ಸಂಶೋಧನೆಯ ಬೆಲೆ ನನಗೆ ಅರಿವಾದದ್ದೇ ಆಗ. ಅಮೆರಿಕದಲ್ಲಿ ಇಲಿಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದ ವಿವಿಧ ವಿಶ್ವವಿದ್ಯಾನಿಲಯ ಮತ್ತು ಸಂಶೋಧನ ಕೇಂದ್ರಗಳೆಲ್ಲಾ ನಾನು ನನ್ನ ಕೆಲಸದ ಬಗ್ಗೆ ಭಾಷಣಗಳನ್ನು ಮಾಡಿದೆ. ಈ ನನ್ನ ಭಾಷಣ ಪ್ರವಾಸ ನನ್ನನ್ನು ಅಮೇರಿಕಾದ ಉದ್ದಗಲಕ್ಕೂ, ಪಶ್ಚಿಮದಿಂದ ಪೂರ್ವಕ್ಕೂ, ಉತ್ತರದಿಂದ ದಕ್ಷಿಣಕ್ಕೂ ಕೊಂಡೊಯ್ಯಿತು. ಹೋದ ಕಡೆಯೆಲ್ಲಾ ನಾನು ನನ್ನ ಗೆಳತಿಯರ ಇಲ್ಲವೇ ವಿದ್ಯಾರ್ಥಿಗಳ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದೆ. ಈ ಸುತ್ತಾಟಕ್ಕೆ ನಾನು ವಿಮಾನ, ಬಸ್, ರೈಲುಗಳನ್ನು ಬಳಸಿದೆ. ಆಶ್ಚರ್ಯವೆಂದರೆ ಮೊಟ್ಟಮೊದಲ ಬಾರಿಗೆ ವಿದೇಶ ಪ್ರವಾಸ ಮಾಡುತಿದ್ದರೂ ನನಗೆ ಯಾವುದೇ ಭಯ ಕಾಡಲಿಲ್ಲ. ವಿಮಾನ ಹತ್ತುವುದು, ಇಳಿಯುವುದು, ಬಸ್ ಮತ್ತು ರೈಲುಗಳ ಪ್ರಯಾಣಗಳೆಲ್ಲಾ ಅತಿ ಸರಾಗವಾಗಿ ನಡೆದುಹೋದವು.

ಮುಂದಿನ ವರ್ಷ ನಾನು ಯುರೋಪಿನಲ್ಲಿ ಈ ಯಶಸ್ಸನ್ನು ಪುನರಾವರ್ತಿಸಿದೆ. ಹೀಗೆ ನಾನು ಅಮೆರಿಕಾ ಮತ್ತು ಯುರೋಪ್‌ಗೆ ಪರ್ಯಾಯ ವರ್ಷಗಳಲ್ಲಿ ಪಯಣಿಸಿ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ Session ಗಳ ಅಧ್ಯಕ್ಷತೆ ವಹಿಸುತ್ತಿದ್ದೆ ಮತ್ತು ಸಂಘಟಕರಿಂದ ಪ್ರಯಾಣ ಅನುದಾನವನ್ನು ಪಡೆಯುತ್ತಿದ್ದೆ. ನನ್ನ ಉಪನ್ಯಾಸಗಳ ನಡುವೆ, ನಾನು ಯುರೋಪ್ ಮತ್ತು ಅಮೆರಿಕದ ಎಲ್ಲಾ ಪ್ರಸಿದ್ಧ ನಗರಗಳಿಗೆ ಭೇಟಿ ನೀಡಿದ್ದೇನೆ. ವಿಜ್ಞಾನಿಯಾಗಿರುವುದು ಬೆನ್ನುಮುರಿಯುವ, ತೃಪ್ತಿಕರವಲ್ಲದ ವೃತ್ತಿ ಎಂದು ಯಾರು ಹೇಳಿದರು! ಇದೊಂದು ಅಪೂರ್ವ ಸಂದರ್ಭಗಳನ್ನು ಒದಗಿಸುವ ಕಾಮಧೇನು. ಈ ಸಫಲತೆಗಳಿಗೆ ನನ್ನದೇ ಶ್ರಮವೂ ಇತ್ತು. ನಾನು ಧೈರ್ಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದೆ. ನನ್ನ ಪ್ರಯಾಣದ Planning ನಿಮಿಷದವರೆಗೆ ಪಕ್ಕಾ ಆಗಿರುತ್ತಿತ್ತು. ಜೊತೆಗೆ ಅದೃಷ್ಟವು ನನ್ನೊಂದಿಗಿತ್ತು. ಅಷ್ಟೇ ಅಲ್ಲ ನಾನು ನನ್ನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಪುಣಳಾಗಿದ್ದೆ ಎಂಬುದು ನನ್ನ ಅರಿವಿಗೆ ಬಂತು. ಜೊತೆಗೆ ಪ್ರಾಣಿಗಳ ಶರೀರಶಾಸ್ತ್ರಜ್ಞಳಾಗಿದ್ದ ನನ್ನ ಹಿನ್ನೆಲೆ ಮತ್ತು ಪರಿಸರ ಸಮಸ್ಯೆಗಳಲ್ಲಿನ ನನ್ನ ಆಸಕ್ತಿಯು ಮೂಷಕಗಳ ನಿಯಂತ್ರಣದ ಕುರಿತಾದ ನನ್ನ ಸಂಶೋಧನೆಯ ಬಗ್ಗೆ ನನಗೆ ಒಂದು ಸಂಪೂರ್ಣ ಒಳನೋಟವನ್ನು ನೀಡಿತ್ತು, ಇದು ಪ್ರಪಂಚದಾದ್ಯಂತ ನನ್ನ ಸಹೋದ್ಯೋಗಿಗಳಿಂದ ತುಂಬಾ ಮೆಚ್ಚುಗೆ ಪಡೆಯಿತು.

ವೈಯಕ್ತಿಕ ಮಟ್ಟದಲ್ಲಿ ನನ್ನ ಜೀವನ ಒಂದು ರೋಲರ್ ಕೋಸ್ಟರ್ ರೈಡ್ ಆಗಿತ್ತು. ನನ್ನ ವೃತ್ತಿಜೀವನದಲ್ಲಿ ನನ್ನ ಆರೋಹಣದ ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿದ ಅತ್ಯಂತ ತಿಳುವಳಿಕೆ, ಕಾಳಜಿಯುಳ್ಳ ಮತ್ತು ಪ್ರೀತಿಯ ಪತಿಯನ್ನು ನಾನು ಹೊಂದಿದ್ದೆ. ಅವರು ಹೃದಯವಂತ, ಸ್ನೇಹಪರ, ಬುದ್ಧಿವಂತ, ಸ್ಟ್ರೀಟ್ ಸ್ಮಾರ್ಟ್​ ಆಗಿದ್ದು 25 ವರ್ಷಗಳ ಕಾಲ ನನ್ನ ಜೀವನದ ಎಲ್ಲಾ ಮಜಲುಗಳಲ್ಲಿ ನನಗೆ ಸಹಾಯ ಮಾಡಿದರು. ಆದರೆ ಇದೇ ವರ್ಷಗಳಲ್ಲಿ ನಾನು ಬೌದ್ಧಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿದ್ದೆ. ಎಲ್ಲದಕ್ಕೂ ಗಂಡನನ್ನೇ ನೋಡುವ ಬಿಟ್ಟಕಣ್ಣುಗಳ, ಮುಗ್ಧ, ಅಜ್ಞಾನಿ, ಪುಸ್ತಕದ ಹುಳುವಾಗಿ ನಾನು ಉಳಿಯಲಿಲ್ಲ. ನಾನು ಅವನನ್ನು ಮದುವೆಯಾದಾಗ, ಆತ ನನಗಿಂತ ಹತ್ತು ವರ್ಷ ದೊಡ್ಡವ, ಪ್ರಪಂಚಜ್ಞಾನಿ, ಸೇನಾಪಡೆಯಲ್ಲಿ ಇದ್ದ ಕಾಲ, ನಂತರ ಮುಂಬೈನ ಪ್ರತಿಷ್ಟಿತ ಕಂಪನಿಯೊಂದರ ವೃತ್ತಿ ಆತನನ್ನು ನನ್ನ ಕಣ್ಣಿಗೆ ಹೀರೋ ಮಾಡಿದ್ದವು.

ಇದನ್ನೂ ಓದಿ : Gender Equality; ನಾನೆಂಬ ಪರಿಮಳದ ಹಾದಿಯಲಿ: ಪ್ರಶ್ನಿಸುವ ಸಾಹಸ ಮನೋಭಾವದ ಹೆಣ್ಣೆಂದರೆ ಸಮಾಜಕ್ಕೆ ಇನ್ನೂ ಬಿಸಿತುಪ್ಪವೆ?

ಜೀವನ ಇನ್ನೂ ಹಲವು ವರ್ಷಗಳ ಕಾಲ ಹಾಗೆಯೇ ಮುಂದುವರೆಯಿತು. ಆದರೆ ನನಗೆ ಅರಿವಿಲ್ಲದೆ, ನಾನು ನನ್ನ ವೃತ್ತಿಜೀವನದಲ್ಲಿ ಹೆಚ್ಚು ಯಶಸ್ವಿಯಾಗುವುದರ ಜೊತೆಗೆ ಬಲವಾದ, ಸ್ವತಂತ್ರ ಮಹಿಳೆಯಾಗಿ ವಿಕಸನಗೊಳ್ಳುತ್ತಿದ್ದೆ. ಇದು ಅವರ ಮನಸ್ಸಿನ ಮೇಲೆ ಯಾವಾಗ ಪರಿಣಾಮ ಬೀರಿತೋ ಗೊತ್ತಿಲ್ಲ, ಏಕೆಂದರೆ ಅವರು ಕೇವಲ ಪದವೀಧರರಾಗಿದ್ದರು, ನಮ್ಮ ವೈವಾಹಿಕ ಜೀವನದ ಹೆಚ್ಚು ಅವಧಿಗೆ ನಿರುದ್ಯೋಗಿಯಾಗಿದ್ದರು. ನಮಗೆ ಗೊತ್ತಿಲ್ಲದೆಯೇ ನಮ್ಮ ನಡುವೆ ಒಂದು ವಿಲಕ್ಷಣ ಒಡಕು ಮೂಡಲಾರಭಿಸಿತು. ಇದು ಒಂದು ವಿಚಿತ್ರ ತಿರುವನ್ನು ಪಡೆಯಿತು. ಆತ ತನ್ನ ಮಗಳ ವಯಸ್ಸಿನ ಚಿಕ್ಕ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡ. ಅದು ಪತ್ತೆಯಾದಾಗ ಅದನ್ನು ನಿರಾಕರಿಸಿದ. ಆದರೆ ವಿಶ್ವಾಸದ್ರೋಹದ ಅಪರಾಧವು ಅವನಿಗೆ ಅಸಹನೀಯವಾಗಿತ್ತು ಅಂತ ಕಾಣುತ್ತೆ. ಅದು ಅವನ ಆತ್ಮಹತ್ಯೆಯಲ್ಲಿ ಮಾತ್ರವಲ್ಲದೆ ಜೊತೆಗೆ ಹುಡುಗಿಯ ಸಾವಲ್ಲೂ ಕೊನೆಗೊಂಡಿತ್ತು. ಆತ್ಮಹತ್ಯೆ ಕಾಣದ ಕಡೆಯಲ್ಲಿ ಆದ ದುರ್ಘಟನೆಯಾಗಿರಲಿಲ್ಲ. ಅದು ಬೆಂಗಳೂರಿನ ಪ್ರಸಿದ್ಧ ಪಂಚಾತಾರಾ ಹೋಟೆಲಿನಲ್ಲಿ ಘಟಿಸಿತ್ತು. ಮರುದಿನ ಬೆಂಗಳೂರಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಇದು ಹೆಡ್​ಲೈನ್ ಸುದ್ದಿಯಾಗಿತ್ತು. ಆತ ಕಾಣೆಯಾದ ಎರಡು ದಿನಗಳ ನಂತರ ಇಂತಹ ಘನಘೋರ ಆವಮಾನ, ದುಃಖ ತಡೆಯಲು ನನ್ನ ಬೆಂಬಲಕ್ಕೆ ನನ್ನ ಸೋದರ, ಸೋದರಿಯರು, ಸಹದ್ಯೋಗಿಗಳು, ಪ್ರಪಂಚದೆಲ್ಲಡೆ ಹರಡಿದ್ದ ವಿಜ್ಞಾನಿ ಮಿತ್ರರು ನನ್ನ ಬೆಂಬಲಕ್ಕೆ ಬಂಡೆಯಂತೆ ನಿಂತರು.

ತದನಂತರ ಆದ ಕೆಟ್ಟ ಪ್ರಚಾರ, ಅದರ ಪರಿಣಾಮವಾಗಿ ಆದ ಅವಮಾನ ಮತ್ತು ಜೀವನ ಸಂಗಾತಿಯನ್ನು ಕಳೆದುಕೊಂಡ ನಷ್ಟವನ್ನು ಎದುರಿಸಲು ನನಗೆ ಸಹಾಯ ಮಾಡಿದರು. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಈ ವ್ಯಕ್ತಿ 2000ರಲ್ಲಿ ಆರು ಲಕ್ಷ ರೂಪಾಯಿಗಳ ಸಾಲವನ್ನು ನನಗೆ ಬಿಟ್ಟುಹೋಗಿದ್ದರು . ಆ ಸಾಲವನ್ನು ತೀರಿಸುವ ಮತ್ತು ನನ್ನ ಆಘಾತಕ್ಕೊಳಗಾದ 15 ವರ್ಷದ ಮಗಳನ್ನು ಬೆಳೆಸುವ ಜವಾಬ್ದಾರಿ ನನ್ನ ಮೇಲಿತ್ತು. ನನಗೆ ದುಃಖವಾಯಿತೇ? ಹೇಳಲಾರದಷ್ಟು. ಆದರೆ ಅದಕ್ಕಿಂತ ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿದವು. ಒಬ್ಬ ಗಂಡಸಿನ ಸ್ವಾರ್ಥ, ಕಾಮ, ಬೇಜವಾಬ್ದಾರಿ ನಡತೆ ನನ್ನ ಜೀವನವನ್ನು ಹಾಳು ಮಾಡಲು ಬಿಡಬಾರದೆಂದು ಶಪಥ ಮಾಡಿಕೊಂಡೆ. ವೈಜ್ಞಾನಿಕ ವೃತ್ತಿಯಲ್ಲಿ ಸಂಪೂರ್ಣವಾಗಿ ಮುಳುಗಿಹೋದೆ ಮತ್ತು ನನ್ನ ಮಗಳ ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸಲು ಅಣಿಯಾದೆ. ಅದು ಸುಲಭವಾಗಿರಲಿಲ್ಲ ಆದರೆ ಎರಡರಲ್ಲೂ ನಾನು ಯಶಸ್ವಿಯಾಗಿದ್ದೇನೆ, ನನ್ನ ವೃತ್ತಿಜೀವನದಲ್ಲಿ ನನ್ನದೇ ಆದ ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದೇನೆ, ಎಲ್ಲಿಯವರೆಗೆ ಅಂದರೆ ನಾನು ಸೇವೆ ಮಾಡಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸದಸ್ಯಳಾಗಿ ರಾಜ್ಯಪಾಲರಿಂದ ನಿಯಮಿತಗೊಂಡೆ. ನನ್ನ ಮಗಳನ್ನು ಬೆಂಗಳೂರಿನ ಅತ್ಯುತ್ತಮ ಕಾಲೇಜುಗಳಲ್ಲಿ ಓದಿಸಿ ಒಳ್ಳೆ ಫಲಿತಾಂಶದೊಂದಿಗೆ ವಿದ್ಯಾಭ್ಯಾಸ ಮುಗಿಸಿವಂತೆ ಮಾಡಿದೆ. ಅವಳಿಂದು ಅಂತಾರಾಷ್ಟ್ರೀಯ ಬ್ಯಾಂಕ್ ಒಂದರಲ್ಲಿ ಉತ್ತಮ ಪೋಸ್ಟ್‌ನಲ್ಲಿದ್ದಾಳೆ, ಮದುವೆಯಾಗಿ ಮುದ್ದಾದ ಬುದ್ಧಿವಂತ ಮಗನ ತಾಯಿಯಾಗಿದ್ದಾಳೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು

ಬಾಳು ನನಗೆ ಕಲಿಸಿದ ಪಾಠವೆಂದರೆ ಯಾವುದೂ ಶಾಶ್ವತವಲ್ಲ, ಸಂತೋಷದ ಹಂತ ಅಥವಾ ಕತ್ತಲೆಯ ಅವಧಿ ಎರಡೂ ಕೊನೆ ಕಾಣುತ್ತವೆ ಎಂದು ಜೀವನವು ನನಗೆ ಕಲಿಸಿದೆ. ಎರಡೂ ಕೊನೆಗೊಳ್ಳುತ್ತವಾದರೂ ಸಂತೋಷದ ಕ್ಷಣಗಳನ್ನು ಸುಲಭವಾಗಿ ಮರೆತುಬಿಡುತ್ತೇವೆ. ಆದರೆ ಸಂಕಟದ ಅವಧಿಯು ಮರೆಯಲಾಗುವುದಿಲ್ಲ. ಇಂದಿಗೂ ನಾನು ನನ್ನ ಜೀವನದ ಆ ಕರಾಳ ಘಟ್ಟದಿಂದ ಮುಕ್ತಳಾಗಿಲ್ಲ. ನಿದ್ರೆ ಮಾತ್ರೆ ಇಲ್ಲದೆ ಒಂದು ದಿನವೂ ನಾನು ಮಲಗಲು ಸಾಧ್ಯವಿಲ್ಲ. ನಾನು ಮುಕ್ಕಾಲು ಶತಮಾನದ ಆಯಸ್ಸು ಪೂರೈಸಿದಾಗ, ಜೀವನವು ಗುಲಾಬಿಗಳ ಸುಂದರ ಹಾಸಿಗೆಯಲ್ಲ, ಹಾಗಿದ್ದರೂ ಅದು ಶಾಶ್ವತವಲ್ಲ ಎಂದು ಫೇಸ್‌ಬುಕ್‌ನಲ್ಲಿರುವ ನನ್ನ ಸಹೋದರಿಯರಿಗೆ ಎಂಬ ಎಚ್ಚರಿಕೆಯನ್ನು ನೀಡಬಯಸುತ್ತೇನೆ. ಆದರೆ ಇದು ಎಲ್ಲರ ಜೀವನದಲ್ಲೂ ನಡೆಯುವುದಿಲ್ಲ. ಕೆಲವು ಅದೃಷ್ಟವಂತರು ಈ ಸುಖದುಃಖಗಳ ಎಣಿಯಾಟದಿಂದ ಮುಕ್ತರಾಗಿರುತ್ತಾರೆ. ಆದರೆ ನನ್ನಂತೆ ವಿಧಿಯಾಟಕ್ಕೆ ಬಲಿಯಾದ ನನ್ನ ಸೋದರಿಯರಿಗೆ ನಾನು ಹೇಳುವುದೇನೆಂದರೆ, ಸೋಲಬೇಡಿ. ಕಷ್ಟಗಳು ಒಂದು ಬೆಟ್ಟದಂತೆ ಎಂದುಕೊಂಡು ಧೈರ್ಯಗೆಡದೆ ಒಂದೊಂದೇ ಮೆಟ್ಟಿಲನ್ನು ಹತ್ತಿ. ನಿಮಗೇ ಅರಿವಿಲ್ಲದೆ ನೀವು ಶಿಖರದ ಮೇಲಿರುತ್ತೀರಿ.

ಹೀಗೆಂದು ಆಶಿಸುತ್ತಾ ನನ್ನ ಜೀವನದ ಏರಿಳಿತಗಳನ್ನು ಹೈಲೈಟ್ ಮಾಡಿದ್ದೇನೆ. ಅನಿರೀಕ್ಷಿತ ದುರಂತಗಳು ನಮ್ಮನ್ನು ತುಳಿಯಬಾರದಂತೆ ಎಚ್ಚರವಾಗಿರಬೇಕು. ಸಂತೋಷದ ಆ ದಿನಗಳು ಹಿಂತಿರುಗದಿರಬಹುದು, ಆದರೆ ನಾವು ಇತರ ವಿಷಯಗಳಲ್ಲಿ ಸಂತೋಷವನ್ನು ಕಾಣಬಹುದು. ಸ್ವಯಂ-ಕರುಣೆಯನ್ನು ಕಿತ್ತು ಬಿಸಾಕಿ, ನಾವು ಇಷ್ಟಪಡುವ ವಿಷಯಗಳಲ್ಲಿ ವಿಶೇಷವಾಗಿ ವೃತ್ತಿಜೀವನದಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ಖಂಡಿತ ಲಾಭ ಪಡೆಯುತ್ತೇವೆ. ಆದರೆ ನನ್ನ ಜೀವನ ಇಷ್ಟೆಲ್ಲಾ ದುರಂತಗಳೆನ್ನುದುರಿಸಿ, ಗೆದ್ದು, ಮೇಲೇರಿದರೂ ಬಿದ್ದ ಪೆಟ್ಟಿನಿಂದ ಮೊದಲಿನಂತೆ ಉಳಿಯಲೇ ಇಲ್ಲ. ಗಾಯದ ಗುರುತುಗಳು ಇನ್ನೂ ಹಾಗೇ ಅಗಲವಾಗಿಯೇ ಉಳಿದಿವೆ. ಆದರೆ ಸೋತು ನೆಲಕ್ಕೆ ಉರುಳಲಿಲ್ಲವೆಂಬ ಸಂತೋಷ ಬದುಕನ್ನು ಹಸನಾಗಿಸಿದೆ. ನೀವೇನಾದರೂ ಜೀವನದಲ್ಲಿ ಪೆಟ್ಟು ತಿಂದು ಮಕಾಡೆ ಮಲಗಿದ್ದರೆ ದಯವಿಟ್ಟು ಎದ್ದೇಳಿ. ನಿಂತು ಹೋರಾಡಿ. ಖಂಡಿತ ವಿಜಯ ನಿಮ್ಮದೇ.

ಭಾಗ 1 : Woman Scientist: ನಿಮ್ಮ ಟೈಮ್​ಲೈನ್; ‘ನಾನು ಎನ್ನುವ ಈ ಚೈತನ್ಯಪಯಣದೊಳಗೆ’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ

Published On - 9:35 am, Fri, 15 April 22