ಧರ್ಮ ಗ್ರಂಥಗಳ ಪ್ರಕಾರ ಪೂಜೆಯಲ್ಲಿ ಬಳಸುವ ಈ ಪವಿತ್ರ ವಸ್ತುಗಳನ್ನು ಎಂದಿಗೂ ನೆಲದ ಮೇಲೆ ಇಡಬೇಡಿ!
ಮನೆಯಲ್ಲಿ ಧಾರ್ಮಿಕ ಕಾರ್ಯ ಮಾಡುವಾಗ ಪವಿತ್ರ ವಸ್ತುಗಳನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಇದು ಅಗೌರವ ಎಂದು ಪರಿಗಣಿತವಾಗಿದೆ ಮತ್ತು ನಕಾರಾತ್ಮಕ ಪ್ರಭಾವ ಹೆಚ್ಚಿಸುತ್ತದೆ. ದೇವತಾ ವಿಗ್ರಹಗಳು, ಶಂಖ, ದೀಪ, ಧಾರ್ಮಿಕ ಗ್ರಂಥಗಳು ಮತ್ತು ಚಿನ್ನಾಭರಣಗಳನ್ನು ಯಾವಾಗಲೂ ಎತ್ತರದ, ಶುದ್ಧ ಸ್ಥಳದಲ್ಲಿ ಇಡಬೇಕು. ಆಕಸ್ಮಿಕವಾಗಿ ಬಿದ್ದರೆ ಗಂಗಾಜಲದಿಂದ ಶುದ್ಧೀಕರಿಸಿ ಕ್ಷಮೆಯಾಚಿಸಿ.

ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಪೂಜೆ-ಪುನಸ್ಕಾರಗಳನ್ನು ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಹಿಂದೂ ನಂಬಿಕೆಗಳ ಪ್ರಕಾರ, ಪೂಜೆಗೆ ಬಳಸುವ ಕೆಲವು ಪವಿತ್ರ ವಸ್ತುಗಳನ್ನು ಮತ್ತು ದೇವತಾ ವಿಗ್ರಹಗಳನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಹೀಗೆ ಮಾಡುವುದು ಆ ವಸ್ತುಗಳಿಗೆ ಮಾಡುವ ಅಗೌರವ ಎಂದು ಪರಿಗಣಿಸಲಾಗುತ್ತದೆ, ಇದರಿಂದ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗಬಹುದು. ಆದ್ದರಿಂದ, ಈ ಪವಿತ್ರ ವಸ್ತುಗಳನ್ನು ಯಾವಾಗಲೂ ಸ್ವಚ್ಛವಾದ ವೇದಿಕೆ, ಮಣೆ, ಕೆಂಪು ಬಟ್ಟೆ ಅಥವಾ ಶುದ್ಧ ಪಾತ್ರೆಯ ಮೇಲೆ ಇಡುವುದು ಸೂಕ್ತ.
ದೇವರು ಮತ್ತು ದೇವತೆಗಳ ವಿಗ್ರಹಗಳು:
ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವ-ದೇವತೆಗಳ ವಿಗ್ರಹಗಳು ಅತ್ಯಂತ ಪವಿತ್ರವಾದವು. ಆದ್ದರಿಂದ, ಅವುಗಳನ್ನು ನೇರವಾಗಿ ಬರಿ ನೆಲದ ಮೇಲೆ ಇಡಬಾರದು. ಮನೆಯ ಪೂಜಾ ಕೋಣೆಯಲ್ಲಿ ವಿಗ್ರಹಗಳನ್ನು ಸ್ಥಾಪಿಸುವಾಗ ಯಾವಾಗಲೂ ಮರದ ಮಣೆ, ಆಸನ ಅಥವಾ ಶುಚಿಯಾದ ಎತ್ತರದ ಮೇಲ್ಮೈಯ ಮೇಲೆಯೇ ಇಡಬೇಕು.
ಪವಿತ್ರ ಶಂಖ:
ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷ ಪೂಜನೀಯ ಸ್ಥಾನವಿದೆ. ಇದನ್ನು ಶ್ರೀಮನ್ನಾರಾಯಣ ಹಾಗೂ ಲಕ್ಷ್ಮಿ ದೇವಿಯ ಸಂಕೇತವೆಂದು ಪೂಜಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಬಳಸುವ ಶಂಖವನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಪೂಜೆ ಮುಗಿದ ನಂತರ ಅದನ್ನು ತಟ್ಟೆ ಅಥವಾ ಶುದ್ಧವಾದ ಕೆಂಪು ಬಟ್ಟೆಯ ಮೇಲಿಡುವುದು ಶುಭ.
ಉರಿಯುತ್ತಿರುವ ಪೂಜಾ ದೀಪ:
ದೀಪವನ್ನು ಜ್ಞಾನ, ಬೆಳಕು ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಉರಿಯುತ್ತಿರುವ ದೀಪವನ್ನು ನೇರವಾಗಿ ನೆಲದ ಮೇಲೆ ಇಡುವ ಬದಲು, ಅದರ ಕೆಳಗೆ ಸ್ವಲ್ಪ ಅಕ್ಷತೆ (ಅಕ್ಕಿ), ಮರದ ಪೀಠ ಅಥವಾ ತಟ್ಟೆಯನ್ನು ಇಡುವುದು ಶಾಸ್ತ್ರೋಕ್ತ ವಿಧಾನವಾಗಿದೆ.
ಶಾಲಿಗ್ರಾಮ ಮತ್ತು ಶಿವಲಿಂಗ:
ಶಾಲಿಗ್ರಾಮ ಹಾಗೂ ಶಿವಲಿಂಗಗಳು ಅತ್ಯಂತ ನಕಾರಾತ್ಮಕತೆಯನ್ನು ನಿವಾರಿಸುವ ಪವಿತ್ರ ಪ್ರತೀಕಗಳು. ಮನೆಯಲ್ಲಿ ಇವುಗಳನ್ನು ಪೂಜಿಸುವವರು ಎಂದಿಗೂ ನೆಲದ ಮೇಲೆ ಇಡಬಾರದು. ಪೂಜೆಯ ಸಮಯದಲ್ಲಿ ಇವುಗಳಿಗೆ ತಾಮ್ರ ಅಥವಾ ಬೆಳ್ಳಿಯ ಪಾತ್ರೆ ಹಾಗೂ ಸ್ವಚ್ಛವಾದ ಪೂಜಾ ಆಸನವನ್ನು ಬಳಸಬೇಕು.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಧಾರ್ಮಿಕ ಗ್ರಂಥಗಳು ಮತ್ತು ಪವಿತ್ರ ಪುಸ್ತಕಗಳು:
ಭಗವದ್ಗೀತೆ, ರಾಮಾಯಣ, ಮಹಾಭಾರತ ಮತ್ತು ಇತರ ಪವಿತ್ರ ಗ್ರಂಥಗಳು ಜ್ಞಾನದ ಸಂಕೇತವಾಗಿವೆ. ಈ ಗ್ರಂಥಗಳನ್ನು ಓದುವಾಗ ಅಥವಾ ಪೂಜಿಸುವಾಗ ನೇರವಾಗಿ ನೆಲದ ಮೇಲಿಡದೆ, ಮರದ ಪುಸ್ತಕದ ಸ್ಟ್ಯಾಂಡ್ ಅಥವಾ ಶುದ್ಧವಾದ ಬಟ್ಟೆಯ ಮೇಲೆ ಇಟ್ಟು ಗೌರವಿಸಬೇಕು.
ಚಿನ್ನದ ಆಭರಣಗಳು:
ಧಾರ್ಮಿಕ ನಂಬಿಕೆಗಳ ಪ್ರಕಾರ, ಚಿನ್ನವು ಲಕ್ಷ್ಮಿ ದೇವಿಯ ಸ್ವರೂಪ. ಹೀಗಾಗಿ ಚಿನ್ನದ ಆಭರಣಗಳನ್ನು ನೇರವಾಗಿ ನೆಲದ ಮೇಲಿಡುವುದು ಸಮೃದ್ಧಿಗೆ ಧಕ್ಕೆ ತರುತ್ತದೆ ಎಂದು ನಂಬಲಾಗಿದೆ. ಆಭರಣಗಳನ್ನು ಕಳಚಿಡುವಾಗ ಸ್ವಚ್ಛವಾದ ಪೆಟ್ಟಿಗೆಯಲ್ಲಿ ಅಥವಾ ಬಟ್ಟೆಯ ಮೇಲಿಡುವುದು ಸೂಕ್ತ.
ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದರೆ ಏನು ಮಾಡಬೇಕು?
ಒಂದು ವೇಳೆ ಪೂಜಾ ಸಾಮಗ್ರಿಗಳು ಅಥವಾ ವಿಗ್ರಹಗಳು ಶುಚಿಗೊಳಿಸುವಾಗ ಆಕಸ್ಮಿಕವಾಗಿ ನೆಲದ ಮೇಲೆ ಬಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ತಕ್ಷಣವೇ ಆ ವಸ್ತುವನ್ನು ಎತ್ತಿ, ಗಂಗಾಜಲದಿಂದ ಪ್ರೋಕ್ಷಿಸಿ ಸ್ವಚ್ಛಗೊಳಿಸಿ. ನಂತರ ಮನಸ್ಸಿನಲ್ಲಿಯೇ ದೇವರಲ್ಲಿ ಕ್ಷಮೆಯಾಚಿಸಿ ಪೂಜಾ ಕಾರ್ಯವನ್ನು ಮುಂದುವರಿಸಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




