AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಮಲದಲ್ಲಿ ಸಾಲಕಟ್ಲ ಬ್ರಹ್ಮೋತ್ಸವದ ಸಂಭ್ರಮ: ಸಾಮಾನ್ಯ ಭಕ್ತರಿಗೆ ದರ್ಶನದ ಆದ್ಯತೆ ಹಾಗೂ ವಿಐಪಿ ಬ್ರೇಕ್ ರದ್ದು

ಕಲಿಯುಗ ವೈಕುಂಠ ತಿರುಮಲವು ವಾರ್ಷಿಕ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮೋತ್ಸವಕ್ಕೆ ಸಜ್ಜಾಗಿದೆ. ಈ ವರ್ಷ ಅಧಿಕ ಮಾಸದಿಂದ ಎರಡು ಉತ್ಸವಗಳು ನಡೆಯಲಿವೆ. ಸೆಪ್ಟೆಂಬರ್ 15 ರಿಂದ 23 ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ ನಡೆಯಲಿದ್ದು, ಸಿಎಂ ಚಂದ್ರಬಾಬು ನಾಯ್ಡು ಅವರು ಪಾಲ್ಗೊಂಡು ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಗರುಡ ಸೇವೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ತಿರುಮಲದಲ್ಲಿ ಸಾಲಕಟ್ಲ ಬ್ರಹ್ಮೋತ್ಸವದ ಸಂಭ್ರಮ: ಸಾಮಾನ್ಯ ಭಕ್ತರಿಗೆ ದರ್ಶನದ ಆದ್ಯತೆ ಹಾಗೂ ವಿಐಪಿ ಬ್ರೇಕ್ ರದ್ದು
ತಿರುಮಲImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 13, 2026 | 12:50 PM

Share

ಕಲಿಯುಗ ವೈಕುಂಠದ ತಿರುಮಲ ಕ್ಷೇತ್ರವು ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ವರ್ಷ ಅಧಿಕ ಮಾಸದ ಆಗಮನದಿಂದಾಗಿ ಶ್ರೀವಾರಿಗೆ ಎರಡು ಬ್ರಹ್ಮೋತ್ಸವಗಳು ಜರುಗಲಿದ್ದು, ಭಾದ್ರಪದ ಮಾಸದಲ್ಲಿ ಸಾಲಕಟ್ಲ ಬ್ರಹ್ಮೋತ್ಸವ ಹಾಗೂ ನಂತರ ಅಶ್ವಯುಜ ಮಾಸದಲ್ಲಿ ನವರಾತ್ರಿ ಬ್ರಹ್ಮೋತ್ಸವಗಳು ನಡೆಯಲಿವೆ. ಈ ತಿಂಗಳ 14 ರಂದು ಸಂಜೆ 7 ರಿಂದ 8 ಗಂಟೆಯ ನಡುವೆ ಪವಿತ್ರ ಅಂಕುರಾರ್ಪಣೆಯೊಂದಿಗೆ ಉತ್ಸವಗಳು ಆರಂಭಗೊಳ್ಳಲಿದ್ದು, 15 ರಂದು ಸಂಜೆ 6.21 ರಿಂದ 6.35 ರ ನಡುವಿನ ಮೀನಲಗ್ನದಲ್ಲಿ ಧ್ವಜಾರೋಹಣ ನೆರವೇರಲಿದೆ. ಈ ಮಹಾ ಉತ್ಸವವು ಈ ತಿಂಗಳ 15 ರಿಂದ 23 ರವರೆಗೆ ಅತಿ ವಿಜೃಂಭಣೆಯಿಂದ ಜರುಗಲಿದೆ.

ಉತ್ಸವದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ ಮತ್ತು ಕಾರ್ಯಕ್ರಮಗಳು:

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬ್ರಹ್ಮೋತ್ಸವದಲ್ಲಿ ಭಾಗವಹಿಸಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ತಿಂಗಳ 15 ರಂದು ರಾಜ್ಯ ಸರ್ಕಾರದ ಪರವಾಗಿ ಶ್ರೀ ವೆಂಕಟೇಶ್ವರನಿಗೆ ರೇಷ್ಮೆ ವಸ್ತ್ರಗಳನ್ನು ಸಮರ್ಪಿಸಲಿರುವ ಸಿಎಂ, ಅದೇ ದಿನ ರಾತ್ರಿ ಜರುಗುವ ಪ್ರಸಿದ್ಧ ಪೆದ್ದ ಶೇಷ ವಾಹನ ಸೇವೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಮರುದಿನ, 16 ರ ಬೆಳಿಗ್ಗೆ ನವೀಕರಿಸಿದ ಎಸ್‌ವಿ ವಸ್ತುಸಂಗ್ರಹಾಲಯ, ರಿಲಯನ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿರುವ 25 ಎಲೆಕ್ಟ್ರಿಕ್ ಬಸ್‌ಗಳು ಹಾಗೂ ಭಕ್ತರ ಗುಂಪು ವಿಮಾ ಯೋಜನೆಯನ್ನು ಸಿಎಂ ನಾಯ್ಡು ಉದ್ಘಾಟಿಸಲಿದ್ದಾರೆ.

ಸಾಮಾನ್ಯ ಭಕ್ತರಿಗೆ ದರ್ಶನದ ಆದ್ಯತೆ ಹಾಗೂ ವಿಐಪಿ ಬ್ರೇಕ್ ರದ್ದು:

ಬ್ರಹ್ಮೋತ್ಸವದ ಅವಧಿಯಲ್ಲಿ ತಿರುಮಲಕ್ಕೆ ಆಗಮಿಸುವ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಟಿಟಿಡಿ ಪ್ರಮುಖ ನಿರ್ಧಾರ ಕೈಗೊಂಡಿದೆ. ದಟ್ಟಣೆಯನ್ನು ಹತೋಟಿಯಲ್ಲಿಡಲು ಹಾಗೂ ಸಾಮಾನ್ಯ ಭಕ್ತರು ಕಾಯದೆ ಬೇಗ ದರ್ಶನ ಪಡೆಯಲು ಅನುಕೂಲವಾಗುವಂತೆ ಎಲ್ಲಾ ರೀತಿಯ ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಕೇವಲ ಪ್ರೋಟೋಕಾಲ್ ಹೊಂದಿರುವ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನವನ್ನು ಸೀಮಿತಗೊಳಿಸಲಾಗಿದ್ದು, ಶಿಫಾರಸು ಪತ್ರಗಳ ಮೂಲಕ ನೀಡುವ ಬ್ರೇಕ್ ದರ್ಶನ ನಿಲ್ಲಿಸಲಾಗಿದೆ. ಜೊತೆಗೆ ವೃದ್ಧರು, ಅಂಗವಿಕಲರು ಹಾಗೂ ಶಿಶುಗಳ ಪೋಷಕರಿಗೆ ನೀಡಲಾಗುತ್ತಿದ್ದ ವಿಶೇಷ ಸವಲತ್ತು ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಭಕ್ತರು ಈ ವ್ಯವಸ್ಥೆಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಗರುಡ ಸೇವೆ, ಚಕ್ರಸ್ನಾನ ಮತ್ತು ಬಿಗಿ ಭದ್ರತಾ ವ್ಯವಸ್ಥೆ:

ಬ್ರಹ್ಮೋತ್ಸವದ ಮುಖ್ಯ ಆಕರ್ಷಣೆಯಾದ ಗರುಡ ಸೇವೆ ಮತ್ತು ಕೊನೆಯ ದಿನದ ಚಕ್ರಸ್ನಾನಕ್ಕಾಗಿ ಟಿಟಿಡಿ ಹಾಗೂ ಪೊಲೀಸ್ ಇಲಾಖೆ ಅತ್ಯಂತ ಸೂಕ್ಷ್ಮ ಸಿದ್ಧತೆಗಳನ್ನು ಮಾಡಿವೆ. ಟಿಟಿಡಿ ಹೆಚ್ಚುವರಿ ಇಒ ಸಿಎಚ್. ವೆಂಕಯ್ಯ ಚೌಧರಿ ಅವರು ನಾಲ್ಕು ಮಾದ ಬೀದಿಗಳ ಗ್ಯಾಲರಿಗಳ ಪ್ರವೇಶ-ನಿರ್ಗಮನ ದಾರಿಗಳು ಮತ್ತು ಸಿಸಿಟಿವಿ ನಿಯಂತ್ರಣ ಕೊಠಡಿಯ ಕಾರ್ಯಾಚರಣೆಯನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಚಕ್ರಸ್ನಾನ ನಡೆಯುವ ಶ್ರೀವಾರಿ ಪುಷ್ಕರಿಣಿಯಲ್ಲಿ ಭಕ್ತರ ಪ್ರವೇಶದ ಮಾರ್ಗಗಳನ್ನು ಪೂರ್ಣಗೊಳಿಸಲಾಗಿದೆ. ಯಾವುದೇ ಕಾಲ್ತುಳಿತ ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ಟಿಟಿಡಿ ಜಾಗೃತಿ, ಗುಪ್ತಚರ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಬಿಗಿ ಭದ್ರತೆ ಒದಗಿಸಿದ್ದು, ಇಡೀ ತಿರುಮಲ ಬೆಟ್ಟವು ದೀಪಾಲಂಕಾರ ಹಾಗೂ ಹೂವಿನ ಜೋಡಣೆಯಿಂದ ವೈಕುಂಠದಂತೆ ಕಂಗೊಳಿಸುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ