What Is Sindoor: ಹಿಂದೂ ಧಾರ್ಮಿಕ ನಂಬಿಕೆಯ ಸಿಂಧೂರ ಯಾವುದರ ಪ್ರತೀಕ? ಇಲ್ಲಿದೆ ಸಂಪೂರ್ಣ ವಿವರ
ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದರು. ಆ ಕೃತ್ಯಕ್ಕೆ ಪ್ರಾರಂಭಿಕ ಉತ್ತರ ಎಂಬಂತೆ ಆಪರೇಷನ್ ಸಿಂದೂರ್ ಹೆಸರಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಖ್ಯಾತ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕ ಪ್ರಕಾಶ್ ಅಮ್ಮಣ್ಣಾಯ ಸಿಂಧೂರದ ವೈಶಿಷ್ಟ್ಯವನ್ನು ವಿವರಿಸಿದ್ದಾರೆ.

ಪಹಲ್ಗಾಮ್ಗೆ ಪ್ರವಾಸಕ್ಕೆ ಬಂದ ದಂಪತಿಗಳಲ್ಲಿ, ಹಿಂದೂ ಪ್ರವಾಸಿಗರನ್ನು ಅದರಲ್ಲಿಯೂ ಗಂಡಸರನ್ನೇ ಆಯ್ಕೆ ಮಾಡಿ ಕೊಂದ ಮುಸ್ಲಿಂ ಭಯೋತ್ಪಾದಕರು ಹೆಂಗಸರ ಸಿಂಧೂರ (Sindhoor) ಅಳಿಸಿ ಹೋಗಲು ಕಾರಣೀಕರ್ತರಾಗಿದ್ದರು. ಹಿಂದೂಗಳಿಗೆ ತಾಳಿ, ಕಾಲುಂಗುರ ಮತ್ತು ‘ಸಿಂಧೂರ’, ಬರೀ ದಾಂಪತ್ಯದ ಗುರುತುಗಳಲ್ಲ. ಅದಕ್ಕಿಂತ ಹೆಚ್ಚು. ಯಾವ ಮಹಿಳೆಯರ ಸಿಂಧೂರವನ್ನು ಅಳಿಸಿದ್ದರೋ, ಅದೇ ಭಯೋತ್ಪಾದಕರ ನೆಲೆ ಮೇಲೆ ದಾಳಿ ಮಾಡಿ, ಅವರನ್ನು ಹುಟ್ಟಡಗಿಸುವ ಸೈನ್ಯದ ಯೋಜನೆಗೆ ‘ಆಪರೇಶನ್ ಸಿಂಧೂರ್’ (Operation Sindhoor) ಎಂದು ಹೆಸರಿಟ್ಟು ನಿನ್ನೆ ರಾತ್ರಿ ಭಾರತ ದಾಳಿ ಮಾಡಿದೆ. ಈ ವಿಚಾರ ಬರುತ್ತಿದ್ದಂತೆ, ಸಿಂಧೂರದ ಬಗ್ಗೆ ಎಲ್ಲ ಕಡೆ ಚರ್ಚೆ ಆರಂಭ ಆಗಿದೆ. ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ನಡೆಯುತ್ತಿರುವ ಚರ್ಚೆ ಇದಾಗಿದೆ. ಈ ಸಿಂಧೂರವನ್ನು ಭ್ರೂಮಧ್ಯೆ (ಕಣ್ಣು ಹುಬ್ಬುಗಳ ಮಧ್ಯೆ) ಹಾಗೂ ತಲೆಯ ಮಧ್ಯ ಭಾಗದ ಬೈತಲೆ ಬೊಟ್ಟಿನ ಆರಂಭದಲ್ಲಿ ಇಡಲಾಗುತ್ತದೆ. ಮತ್ತು ಸಿಂಧೂರದ ಬಣ್ಣ ಕೆಂಪದ್ದಾಗಿರುತ್ತದೆ. ನವಗ್ರಹಗಳ ಪೈಕಿ ಕುಜ ಹಾಗೂ ರವಿ ಈ ಎರಡು ಗ್ರಹಗಳು ಸೂಚಿಸುವ ಬಣ್ಣ ಕೆಂಪು. ಇನ್ನು ಮುಖ್ಯವಾಗಿ ಕುಜ ಗ್ರಹ ಅಂದರೆ ದೇಹದ ರಕ್ತ, ಮಾಂಗಲ್ಯ ಸೂಚಕ, ಧೈರ್ಯ ಹಾಗೂ ಶೌರ್ಯದ ಪ್ರತೀಕ. ಆ ಬಣ್ಣವನ್ನು ಭ್ರೂಮಧ್ಯದಲ್ಲಿ ಇಡುವುದಕ್ಕೆ ಮುಖ್ಯ ಕಾರಣ ಏನೆಂದರೆ, ಮನುಷ್ಯರಿಗೆ ಇಡೀ ದೇಹವನ್ನು ಚೈತನ್ಯಶಾಲಿಯಾಗಿ ಮಾಡುವಂಥ ಭಾಗ ಅದಾಗಿರುತ್ತದೆ. ಆದ್ದರಿಂದ ಅಲ್ಲಿಗೆ ಬೆರಳಿನಿಂದ ಮೃದುವಾಗಿ ಅದುಮಿದರೂ ಚೈತನ್ಯ ಪ್ರವಹಿಸಿದಂತಾಗುತ್ತದೆ. ಇನ್ನು ಆ ಭ್ರೂಮಧ್ಯ ಪ್ರದೇಶವನ್ನು ದುರ್ಗಾ ದೇವಿಯ ಸನ್ನಿಧಾನ ಅಂತಲೂ ಹೇಳಲಾಗುತ್ತದೆ. ನಮಗೆ ಗೊತ್ತಾಗಬೇಕಾದ್ದು ಏನೆಂದರೆ, ಕುಂಕುಮ ಹಾಗೂ ಸಿಂಧೂರ ಎರಡೂ ಬೇರೆ. ಸಿಂಧೂರ ತಯಾರಾಗುವ ರೀತಿ ಬೇರೆ, ಅದು ತುಂಬಾ ದುಬಾರಿ. ಇನ್ನು ನಮ್ಮ ಮನೆಗಳಲ್ಲಿ ಬಳಸುವ ಕುಂಕುಮದಲ್ಲಿ ಅರಿಶಿಣವೂ ಬೆರೆತಿರುತ್ತದೆ.
ಭ್ರೂಮಧ್ಯದ ಭಾಗ ಬಹಳ ಶಕ್ತಿಶಾಲಿ ಹಾಗೂ ಮುಖ್ಯವಾದದ್ದು. ಅದು ಮೂರನೇ ಕಣ್ಣು ಇರುವ ಸ್ಥಳವೂ ಹೌದು. ಧ್ಯಾನಕ್ಕೆ ಕೂರುವಂಥವರಲ್ಲಿ ಭ್ರೂಮಧ್ಯೆ ಕಣ್ಣನ್ನು ನೆಟ್ಟು, ಧ್ಯಾನ ಮಾಡುವ ಕ್ರಮ ಇದೆ. ಅಂಥ ಭಂಗಿಯನ್ನು ಚಿತ್ರಗಳಲ್ಲಿ ನೋಡಬಹುದು. ಅಲ್ಲಿ ಗಂಡು ಅಥವಾ ಹೆಣ್ಣು ಎಂಬ ಭೇದವಿಲ್ಲದೆ ಕುಂಕುಮ ಅಥವಾ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ದೇಹದ ಚೈತನ್ಯಶಕ್ತಿಗೆ ಸಹಾಯಕ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಆಜ್ಞಾ ಚಕ್ರ ಅದು. ಅದರ ಶಕ್ತಿಯನ್ನು ಅರಿಯುವುದು ಹಾಗೂ ನಿರ್ವಹಿಸುವುದು ಬಹಳ ಮುಖ್ಯ. ಆದ್ದರಿಂದಲೇ ಸಿಂಧೂರವನ್ನು ಹಚ್ಚಲಾಗುತ್ತದೆ. ಮದುವೆಯಾದ ಹೆಣ್ಣುಮಕ್ಕಳು ಕಾಲುಂಗರ, ಮಾಂಗಲ್ಯ, ಕೈ ಬಳೆ, ಕಿವಿಯೋಲೆ ಹಾಗೂ ಸಿಂಧೂರ ಇವುಗಳನ್ನು ಧರಿಸುವುದು ಹಿಂದೂ ಧಾರ್ಮಿಕ ನಂಬಿಕೆಯಲ್ಲಿಯೇ ಇದೆ. ಮುತ್ತೈದೆತನದ ಬಗ್ಗೆ ಗಾಢವಾದ ನಂಬಿಕೆ ಬೇರೂರಿದೆ. ಹಣೆಯಲ್ಲಿ ಕುಂಕುಮ ಇಡದಿರುವುದು ವೈಧವ್ಯದಲ್ಲಿ ಮಾತ್ರ. ಅಂದರೆ ಗಂಡನನ್ನು ಕಳೆದುಕೊಂಡ ಹೆಣ್ಣು ಎಂಬುದನ್ನು ತಿಳಿಸುವುದಕ್ಕಾಗಿ ಸಿಂಧೂರವೂ ಸೇರಿದಂತೆ ಆಕೆಯ ಮುತ್ತೈದೆತನವನ್ನು ಪ್ರತಿನಿಧಿಸುವುದನ್ನು ಧಾರಣೆ ಮಾಡುವುದಿಲ್ಲ. ಇದು ಕೂಡ ಬದಲಾದ ಕಾಲಮಾನದಲ್ಲಿ ಬದಲಾವಣೆಯನ್ನು ಕಾಣುತ್ತಿದೆ. ಆದರೆ ಹಿಂದೂ ಧಾರ್ಮಿಕ ನಂಬಿಕೆ ಇದನ್ನು ಪ್ರತಿನಿಧಿಸುತ್ತದೆ.
ಈ ಬಗ್ಗೆ ಖ್ಯಾತ ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರು ಆದ ಪ್ರಕಾಶ್ ಅಮ್ಮಣ್ಣಾಯ ಅವರು ಟಿವಿ9 ಕನ್ನಡ ವೆಬ್ ಸೈಟ್ ಜೊತೆಗೆ ಮಾತನಾಡಿ, “ಅದು ಸಂಕರ್ಷಣಾ ಶಕ್ತಿ. ಆಕರ್ಷಣೆ ಮಾಡುವ ಶಕ್ತಿ ಇರುವಂಥದ್ದು. ಅಲ್ಲಿ ದುರ್ಗಾದೇವಿಯ ವಾಸಸ್ಥಾನವಿದೆ. ಆದ್ದರಿಂದ ಕೆಂಪು ಅಥವಾ ಕೇಸರಿ ಬಣ್ಣದ ಸಿಂಧೂರವನ್ನು ಇಟ್ಟುಕೊಳ್ಳಲಾಗುತ್ತದೆ. ಗಂಡು- ಹೆಣ್ಣು ಎಂಬ ಭೇದವಿಲ್ಲದೆ ಭ್ರೂಮಧ್ಯದಲ್ಲಿ ಕುಂಕುಮವನ್ನು ಇಟ್ಟುಕೊಳ್ಳಲಾಗುತ್ತದೆ. ಕಾಸಿನಗಲದ ಅರಿಶಿಣಯುಕ್ತ ಕುಂಕುಮ ಇಟ್ಟುಕೊಳ್ಳುವುದು ಸಂಪ್ರದಾಯ. ಆ ಬಣ್ಣಕ್ಕೆ ಹಾಗೂ ಭ್ರೂಮಧ್ಯದ ಸ್ಥಳಕ್ಕೆ ವಿಶೇಷ ಶಕ್ತಿ ಇದೆ. ಸಿಂಧೂರ ತಯಾರಾಗುವ ರೀತಿ ಬೇರೆ ಹಾಗೂ ದುಬಾರಿ. ಹೆಣ್ಣಿಗೆ ಆಕರ್ಷಣೆ, ಸೌಂದರ್ಯ, ಶಕ್ತಿ ಹಾಗೂ ದೇಹದಲ್ಲಿ ಚೈತನ್ಯ ಕೊಡುವ ಸಿಂಧೂರವನ್ನು ಪರರು ಯಾರೇ ಅಗೌರವಿಸಿದರೂ ಹಾಗೂ ಕೀಳಾಗಿ ಮಾತನಾಡಿದರೂ ಅದಕ್ಕೆ ಆಕೆಯೇ ಉತ್ತರ ನೀಡುತ್ತಾಳೆ. ನಮ್ಮ ಪ್ರಾಚೀನ ಪರಂಪರೆಯಿಂದಲೂ ಹೆಣ್ಣಿಗೆ ವಿಶೇಷ ಸ್ಥಾನ. ಅವಳು ಜಗನ್ಮಾತೆ, ಮನೆಯ ಮಹಾಲಕ್ಷ್ಮೀ, ವಿದ್ಯೆ ಕೊಡುವ ಸರಸ್ವತಿ. ಪುರುಷರಿಗಿಂತ ಹೆಚ್ಚು ಪೂಜ್ಯವಾಗಿ ಹೆಣ್ಣುಮಕ್ಕಳನ್ನು ಕಾಣುವ ಸಮಾಜ ನಮ್ಮದು.
ಇದನ್ನೂ ಓದಿ: ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಪ್ರಕಾಶಮಧ್ಯಸ್ಥಿತಚಿತ್ ಸ್ವರೂಪಾಂ ವರಾಭಯೇ ಸಂದಧತೀಂ
ತ್ರಿನೇತ್ರಾಂ | ಸಿಂಧೂರವರ್ಣಾಮತಿಕೋಮಲಾಂಗೀಂ ಮಯಾಮಯೀಂ ತತ್ವಮಯೀಂ ನಮಾಮಿ – ಇದು ದೇವಿಗೆ ಹೇಳಿರುವಂಥದ್ದು,” ಎಂದು ಹೇಳಿದರು.
ಬಣ್ಣಗಳಲ್ಲಿ ಎಷ್ಟೋ ಇದೆ. ಆದರೆ ಕೆಂಪು ಬಣ್ಣಕ್ಕೆ ವಿಶೇಷ ಮಹತ್ವ. ಮನೆಗಳಲ್ಲಿ ದೃಷ್ಟಿ ತೆಗೆಯುವಾಗ ಕೆಂಪು ನೀರನ್ನು ಬಳಸಲಾಗುತ್ತದೆ. ನೂತನ ದಂಪತಿಗೆ ಆರತಿ ಮಾಡುವಾಗ ಮೊದಲುಗೊಂಡು, ಯಾವುದೇ ಶುಭ ಕಾರ್ಯಕ್ಕೆ ಬಳಸುವುದು ಇದೇ ಬಣ್ಣವನ್ನು. ದೃಷ್ಟಿ ದೋಷ ನಿವಾರಣೆಯೂ ಸೇರಿದಂತೆ ಯಾವುದೇ ನಕಾರಾತ್ಮಕ ಶಕ್ತಿಯಿಂದ ಈ ಕೆಂಪು ಬಣ್ಣದ ಮೂಲಕ ವ್ಯಕ್ತಿಗೆ ರಕ್ಷಣೆ ದೊರೆಯುತ್ತದೆ. ಭಾರತೀಯ ಹೆಣ್ಣುಮಗಳ ಸಿಂಧೂರವನ್ನು ಅಳಿಸಿದವರಿಗೆ ನಮ್ಮ ಹೆಣ್ಣುಮಕ್ಕಳ ಮೂಲಕವೇ ಉತ್ತರ ಕೊಡಿಸಬೇಕು ಎಂಬ ಸಂದೇಶ ಕೇಂದ್ರ ಸರ್ಕಾರಕ್ಕೆ ಇದ್ದಂತಿದೆ. ಉಗ್ರಗಾಮಿಗಳ ವಿರುದ್ಧ ಈಗ ಕೈಗೊಂಡಿರುವ ಕಾರ್ಯಾಚರಣೆಗೂ “ಸಿಂಧೂರ” ಮೆತ್ತಿಕೊಂಡಿದೆ.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ