ಮಧ್ವಾಚಾರ್ಯರು ತಂದ ಉಡುಪಿ ಕೃಷ್ಣ ಮಠದ ಪರ್ಯಾಯ ವ್ಯವಸ್ಥೆ ಹೇಗಿತ್ತು? ವಾದಿರಾಜರು ಮಾಡಿದ ಬದಲಾವಣೆ ಏನು?

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಂದ ಹಾಗೆ ಪರ್ಯಾಯ ಎಂಬ ಶಬ್ದವೇ ಹೇಳುತ್ತದೆ; ಒಬ್ಬರದ್ದೇ ಅಲ್ಲ, ಇನ್ನೊಬ್ಬರಿದ್ದಾರೆ ಎಂದು. ಅದಕ್ಕೂ ಮೊದಲು ಹೇಳಬೇಕಾದ ಇತಿಹಾಸದ ಮುಖ್ಯ ಘಟನೆಗಳು ಕೆಲವು ಇವೆ. ಅವುಗಳ ಬಗ್ಗೆ ತಿಳಿಸಿಬಿಡುತ್ತೇವೆ. ಅದೊಮ್ಮೆ ಮಧ್ವಾಚಾರ್ಯರು ಸಮುದ್ರದಲ್ಲಿ ಸಾಗುತ್ತಿದ್ದ ನೌಕೆಯನ್ನು ತೂಫಾನಿ(ಚಂಡ ಮಾರುತ)ನಿಂದ ರಕ್ಷಣೆ ಮಾಡುತ್ತಾರೆ.

ಮಧ್ವಾಚಾರ್ಯರು ತಂದ ಉಡುಪಿ ಕೃಷ್ಣ ಮಠದ ಪರ್ಯಾಯ ವ್ಯವಸ್ಥೆ ಹೇಗಿತ್ತು? ವಾದಿರಾಜರು ಮಾಡಿದ ಬದಲಾವಣೆ ಏನು?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 17, 2024 | 6:56 PM

ಇದೇ ಜನವರಿ 18ನೇ ತಾರೀಕಿನ ಗುರುವಾರದಂದು ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಇದೆ. ಎರಡು ವರ್ಷಗಳಿಗೆ ಒಮ್ಮೆ ನಡೆಯುವಂಥ ಕಾರ್ಯಕ್ರಮ ಇದು. ದೇಶ- ವಿದೇಶಗಳಲ್ಲಿ ಇರುವಂಥ ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿ ಆಗುವ ಉದ್ದೇಶದಿಂದಲೇ ಉಡುಪಿಗೆ ಬರುತ್ತಾರೆ. ಇದೊಂದು ಅದ್ಭುತವಾದ ಕಾರ್ಯಕ್ರಮ. ಈ ಬಾರಿ ಪುತ್ತಿಗೆ ಮಠದ ಶ್ರೀಗಳು ಪರ್ಯಾಯದ ಪೀಠಾರೋಹಣ ಮಾಡಲಿದ್ದಾರೆ. ಇಂಥದ್ದೊಂದು ಮಹತ್ವದ ಸಂದರ್ಭದಲ್ಲಿ ಪರ್ಯಾದ ಹಿನ್ನೆಲೆ ಹಾಗೂ ಅದರ ಪ್ರಾಮುಖ್ಯ, ಕ್ರಮ ಇತ್ಯಾದಿ ವಿಚಾರಗಳ ಬಗ್ಗೆ ಅಧ್ಯಾತ್ಮ ಚಿಂತಕರು, ಪ್ರಖ್ಯಾತ ಜ್ಯೋತಿಷಿಗಳೂ ಆದಂಥ ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ಬರೆದಂಥ ಲೇಖನ ಇಲ್ಲಿದೆ.

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಂದ ಹಾಗೆ ಪರ್ಯಾಯ ಎಂಬ ಶಬ್ದವೇ ಹೇಳುತ್ತದೆ; ಒಬ್ಬರದ್ದೇ ಅಲ್ಲ, ಇನ್ನೊಬ್ಬರಿದ್ದಾರೆ ಎಂದು. ಅದಕ್ಕೂ ಮೊದಲು ಹೇಳಬೇಕಾದ ಇತಿಹಾಸದ ಮುಖ್ಯ ಘಟನೆಗಳು ಕೆಲವು ಇವೆ. ಅವುಗಳ ಬಗ್ಗೆ ತಿಳಿಸಿಬಿಡುತ್ತೇವೆ. ಅದೊಮ್ಮೆ ಮಧ್ವಾಚಾರ್ಯರು ಸಮುದ್ರದಲ್ಲಿ ಸಾಗುತ್ತಿದ್ದ ನೌಕೆಯನ್ನು ತೂಫಾನಿ(ಚಂಡ ಮಾರುತ)ನಿಂದ ರಕ್ಷಣೆ ಮಾಡುತ್ತಾರೆ. ಆಗ ಆ ನೌಕೆಯ ಯಜಮಾನನು ತೀರಕ್ಕೆ ಬಂದು, ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ರಾಮ ಸೇವಕ ಹನುಮನೇ ನನ್ನನ್ನು, ನಮ್ಮನ್ನು,ನಮ್ಮ ನೌಕೆಯನ್ನು ರಕ್ಷಿಸಿದಂತೆ ನೀವು ರಕ್ಷಣೆ ಮಾಡಿದಿರಿ ಗುರುಗಳೇ. ತಾವು ಯಾರು ಎಂದು ಕೇಳುತ್ತಾನೆ. ಆಗ ಆಚಾರ್ಯರು, ನಾನೊಬ್ಬ ಭಗವದ್ಭಕ್ತ, ಯತಿ. ಆ ಭಗವಂತನ ಸೇವಕರನ್ನು ರಕ್ಷಿಸುವುದು ನನ್ನ ಕರ್ತವ್ಯ ಎನ್ನುತ್ತಾರೆ. ಆಗ ನೌಕೆಯ ಮಾಲೀಕ, ನಾನು ನಿಮಗೇನು ಸಮರ್ಪಿಸಲಿ ಗುರುಗಳೇ ಎಂದು ಕೇಳುತ್ತಾನೆ. ಮಧ್ವರು, ನನಗೇನು ಬೇಕೋ ಅದನ್ನು ನೀಡಿದ್ದಾನೆ ಆ ಭಗವಂತ. ಈಗ ನಿಮ್ಮ ರಕ್ಷಣೆ ಬೇಕಿತ್ತು, ಅದನ್ನು ನನ್ನ ಮೂಲಕ ಮಾಡಿಸಿದ. ಇನ್ನು ಸರ್ವಸಂಗ ಪರಿತ್ಯಾಗಿಯಾದ ಈ ಪರಿವ್ರಾಜಕನಿಗೆ ಮತ್ತಿನ್ನೇನು ಬೇಕು ಎನ್ನುತ್ತಾರೆ.

ವಿಶಾಲವಾದ ಎದೆ, ದಷ್ಟ ಪುಷ್ಟವಾದ ಆರೋಗ್ಯಪೂರ್ಣ ದೇಹ, ಕಂಠದಲ್ಲಿ ತುಳಸಿ ಮಣಿ ಮಾಲೆ ಹೊಂದಿದ್ದ ಆಚಾರ್ಯರು ಲಲಾಟದಲ್ಲಿ ಊರ್ಧ್ವ ಪುಂಡ್ರ, ಗೋಪೀ ಚಂದನದ ನಾಮದಿಂದ ಮಧ್ವಾಚಾರ್ಯರು ಸಾಕ್ಷಾತ್ ಹನುಮಂತನಂತೆಯೇ ಆ ನೌಕೆಯ ಮಾಲೀಕನಿಗೆ ಶೋಭಾಯಮಾನರಾಗಿ ಕಾಣುತ್ತಾರೆ. ಹಾಗೆ ನೋಡಿದರೆ ನಿಜವಾಗಿಯೂ ಹನುಮಂತನ ನಂತರ ಭೀಮಸೇನ, ಆ ನಂತರ ಮಧ್ವಾಚಾರ್ಯರ ಅವತಾರವೇ ಈ ಪವನಜ ಹನುಮ ಎಂದು ಸುಮಧ್ವ ವಿಜಯದಲ್ಲಿದೆ. ಕನಕದಾಸರ ಊರಾದ ಬ್ಯಾಡಗಿಯಲ್ಲಿ ಕದ್ರ ಮಂಡಲ ಕ್ಷೇತ್ರದಲ್ಲೂ ಹನುಮಂತನ ಮೂರ್ತಿಗೆ ಬೆಳಗ್ಗೆ ಹನುಮಂತನ ಆರಾಧನೆ, ಮದ್ಯಾಹ್ನ ಭೀಮಸೇನ, ರಾತ್ರಿ ಮಧ್ವಾಚಾರ್ಯರಿಗೆ ಪೂಜೆ ನಡೆಯುತ್ತದೆ. ಇನ್ನು ಇತಿಹಾಸಕ್ಕೆ ಮರಳುವುದಾದರೆ, ಆ ನೌಕೆಯ ಮಾಲೀಕ, ನಾವು ದ್ವಾರಕಾ ನಗರದಿಂದ ಸರಕು ಸಾಗಿಸುವ ನೌಕೆಯನ್ನು ಇಟ್ಟುಕೊಂಡಿದ್ದೇವೆ. ಹಡಗಿನಲ್ಲಿ ಭಾರ ಸಮತೋಲನಕ್ಕಾಗಿ ಗೋಪಿ ಚಂದನದ ಉಂಡೆಯನ್ನು ಇಟ್ಟಿರುತ್ತೇವೆ. ಅದನ್ನೇ ನಿಮಗೆ ಕಾಣಿಕೆಯಾಗಿ ಕೊಡಬಹುದೇ ಎಂದು ಕೇಳುತ್ತಾನೆ. ಆಗ ಆಚಾರ್ಯರು ಪರಮ ಸಂತುಷ್ಟರಾಗುತ್ತಾರೆ. ಆಳುಗಳ ಮೂಲಕ ಉಂಡೆಗಳನ್ನು ತೀರಕ್ಕೆ ತರಿಸಿ, ಆಚಾರ್ಯರಿಗೆ ಒಪ್ಪಿಸಿ, ಸಾಷ್ಟಾಂಗ ಪ್ರಣಾಮ ಮಾಡಿ ಆತ ತನ್ನ ಮುಂದಿನ ಪ್ರಯಾಣ ಬೆಳೆಸುತ್ತಾನೆ.

ಗೋಪಿಚಂದನ ಉಂಡೆಗಳಿಂದ ಕೆಳಗೆ ಬಿದ್ದವು ವಿಗ್ರಹಗಳು

ಮಧ್ವಾಚಾರ್ಯರು ಮಣ ಭಾರದ ಉಂಡೆಗಳನ್ನು ತನ್ನ ತೋಳುಗಳಲ್ಲಿಟ್ಟು, ಮಲ್ಪೆ ಸಮುದ್ರ ತೀರದಿಂದ ಉಡುಪಿಯ ಪಾಜಕದತ್ತ ಮರಳುತ್ತಿದ್ದಂತೆ ಒಂದು ಉಂಡೆ ಜಾರಿ ಅಲ್ಲೇ ಕೆಳಗೆ ಬೀಳುತ್ತದೆ. ಅದರೊಳಗೆ ಬಲರಾಮನ ಮೂರ್ತಿ! ಅದನ್ನು ಅಲ್ಲೇ ಪ್ರತಿಷ್ಠೆ ಮಾಡುತ್ತಾರೆ. ಈಗಲೂ ಅದು ವಡಬಾಂಡೇಶ್ವರದಲ್ಲಿ ಪ್ರಖ್ಯಾತಿ ಪಡೆದಿದೆ. ಮುಂದಿನ ಉಂಡೆಯು ಉಡುಪಿ ಅನಂತೇಶ್ವರ ಸನ್ನಿಧಿಗೆ ಬರುತ್ತಲೇ ಅಲ್ಲಿ ಜಾರಿ ಬೀಳುತ್ತಾ ಒಡೆಯುತ್ತದೆ. ಅದರೊಳಗೆ ರುಕ್ಮಿಣಿ ದೇವಿಯು ಆರಾಧಿಸುತ್ತಿದ್ದ ಶ್ರೀಕೃಷ್ಣನ ಬಿಂಬ ಗೋಚರಿಸುತ್ತದೆ. ಅದನ್ನು ಅಲ್ಲೇ ಪ್ರತಿಷ್ಠಾಪಿಸಿ, ಶ್ರೀಕೃಷ್ಣ ಮಠವನ್ನಾಗಿಸುತ್ತಾರೆ. ಇದು ಕೃಷ್ಣ ಮಠದ ಚರಿತ್ರೆ. ಅಲ್ಲಿಂದ ಮುಂದೆ ಪೂಜಾ ಕೈಂಕರ್ಯಕ್ಕೆ ಶ್ರೀಕೃಷ್ಣನ ಎಂಟು ಪತ್ನಿಯರ ಪ್ರತೀಕವಾಗಿ ಅಷ್ಟ ಮಠಗಳ ಸ್ಥಾಪನೆ ಮಾಡಿದರು. ಆ ನಂತರ ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟ ಯತಿಗಳನ್ನು ಎರಡೆರಡು ತಿಂಗಳ ಪರ್ಯಾಯದಲ್ಲಿ ನೇಮಿಸಿದರು. ಆ ಅಷ್ಟ ಮಠಗಳೇ ಪೇಜಾವರ, ಕಾಣಿಯೂರು, ಸೋದೆ, ಪಲಿಮಾರು, ಕೃಷ್ಣಾಪುರ, ಶೀರೂರು, ಅದಮಾರು ಮತ್ತು ಪುತ್ತಿಗೆ ಮಠಗಳಾದವು.

ಹೀಗೆ ಪರ್ಯಾಯಕ್ಕೆ ವ್ಯವಸ್ಥೆ, ನಿಯಮಗಳನ್ನು ಮಾಡಿದ ಆಚಾರ್ಯರು ತಮ್ಮ ಮೂವತ್ತನೆಯ ವಯಸ್ಸಿನಲ್ಲೇ ಕೆಲಸ ಮುಗಿಯಿತು ಎಂದು ಶ್ರೀಕೃಷ್ಣನನ್ನು ಸೇರಲು ಅನಂತೇಶ್ವರ ದೇವಸ್ಥಾನದಲ್ಲಿ ಧ್ಯಾನಕ್ಕೆ ಕುಳಿತು ಅದೃಶ್ಯರಾದರು. ಈಗಲೂ ಅನಂತೇಶ್ವರ ದೇವಸ್ಥಾದಲ್ಲಿ ಮಧ್ವಾಚಾರ್ಯರು ಅದೃಶ್ಯರಾದ ಜಾಗ ಇದೆ. ಅಲ್ಲಿಂದ ಮುಂದೆ ಅಷ್ಟ ಮಠಗಳ ಪೈಕಿ ಒಂದಾದ ಸೋದೆ ಮಠಕ್ಕೆ ವಾದಿರಾಜ ಸ್ವಾಮಿಗಳು ಯತಿ ದಿಕ್ಷೆಯಲ್ಲಿ ಬಂದರು. ಇವರು ವಿಶೇಷ ವ್ಯಾವಹಾರಿಕ, ಸಾಹಿತ್ಯ, ಅಧ್ಯಾತ್ಮ ಜ್ಞಾನಿಗಳು. ಕನಕದಾಸನನ್ನು ಪ್ರೀತಿಯಿಂದ ಆಲಿಂಗನ ಮಾಡಿಕೊಂಡವರು. ಇವರ ಕಾಲದಲ್ಲಿ ಎರಡು ತಿಂಗಳ ಪರ್ಯಾಯವನ್ನು ಎರಡು ವರ್ಷಕ್ಕೆ ಏರಿಕೆ ಮಾಡಿದರು. ಇವರು 125 ವರ್ಷ ಆರೋಗ್ಯವಂತರಾಗಿ, ಸಶರೀರರಾಗಿ ವೃಂದಾವನಸ್ಥರಾದರು. ರಾಘವೇಂದ್ರ ಸ್ವಾಮಿಗಳಿಗೂ ಮೊದಲೇ ಸಶರೀರರಾಗಿ ವೃಂದಾವನಸ್ಥರಾದ ಯತಿಗಳು ವಾದಿರಾಜರು. ಇವರು ಆರಾದನೆ ಮಾಡುತ್ತಿದ್ದ ದೇವರು ಹಯಗ್ರೀವ. ವಾದಿರಾಜರ ವೃಂದಾವನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪ ಸೋದೆ ಎಂಬಲ್ಲಿ ಇದೆ. ಕನಕದಾಸರು ಬೆಳೆಯುತ್ತಿದ್ದ ಮಟ್ಟು ಬದನೆಯ ಖಾದ್ಯ ಮತ್ತು ಕನಕನು ಉಣ್ಣುವಂತೆ ಗಂಜಿಯನ್ನು ಕನಕದಾಸರ ಪ್ರೀತಿಗಾಗಿ ಶ್ರೀಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಸಮರ್ಪಣೆ ಮಾಡಿದವರು ವಾದಿರಾಜರು. ಈಗಲೂ ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಕನಕನ ಊಟದ ಕ್ರಮದಂತೆ ಬದನೆಹುಳಿ ಮತ್ತು ಗಂಜಿ ಸಮರ್ಪಣೆ ನಡೆಯುತ್ತಲೇ ಇದೆ.

ಇದನ್ನೂ ಓದಿ: ಉಡುಪಿ: ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ, ಮಠಾಧೀಶರಲ್ಲಿ ಭಿನ್ನಮತದ ಸುಳಿವು

ದಂಡ ತೀರ್ಥದಲ್ಲಿನ ಮಧ್ವ ಸರೋವರದಲ್ಲಿ ಸ್ನಾನ

ವಾದಿರಾಜರು ಮಾಡಿದ ಬದಲಾವಣೆಯಂತೆ, ಅದಕ್ಕೂ ಮುಂಚೆ ಇದ್ದಂಥ ಎರಡು ತಿಂಗಳ ಅವಧಿಯು ಎರಡು ವರ್ಷಕ್ಕೆ ಏರಿಕೆ ಆಯಿತು. ಅಲ್ಲಿಂದ ಈಚೆಗೆ ಒಬ್ಬ ಯತಿಗೆ ಹದಿನಾರು ವರ್ಷಗಳಿಗೆ ಒಮ್ಮೆ ಪರ್ಯಾಯ ಸರ್ವಜ್ಞ ಪೀಠಾರೋಹಣದ ಹಕ್ಕು ಬರುತ್ತದೆ. ಆ ಪರ್ಯಾಯ ಮುಗಿಸಿದ ಯತಿಗಳು ಹದಿನಾರು ವರ್ಷ ಪರ್ಯಂತ ದೇಶ ಪರ್ಯಟನ ಮಾಡಿ, ಸಕಲ ಪ್ರಜೆಗಳಿಗೂ ಜಾತಿ- ಮತ ಭೇದಗಳಿಲ್ಲದೆ ಧರ್ಮದ ಹಾದಿಯನ್ನು ಹಾಕಿಕೊಡಬೇಕು ಎಂಬ ಉದ್ದೇಶ ವಾದಿರಾಜರಿಗೆ ಇತ್ತು. ಹಾಗೆ ಪರ್ಯಾಯ ಮುಗಿಸಿ, ದೇಶ ಪರ್ಯಟನ ಮಾಡಿ, ಕಟ್ಟ ಕಡೆಗೆ ಕಾಪುವಿನಲ್ಲಿ ಇರುವಂಥ ದಂಡ ತೀರ್ಥ ಮಠಕ್ಕೆ ಬರಬೇಕು. ಅಲ್ಲಿನ ಮಧ್ವ ಸರೋವರದಲ್ಲಿ ಸ್ನಾನ ಮಾಡಿ, ( ಈ ಸ್ಥಳ ಮಧ್ವಾಚಾರ್ಯರು ಪಾಠ ಕಲಿತ ಜಾಗ) ಮಧ್ವಾಚಾರ್ಯರಿಗೆ ಪಾಠ ಕಲಿಸಿದ ತೋಟಂತಿಲ್ಲಾಯ ಗುರುಕುಲ ಮನೆತನವರಿಗೆ ಹದಿನಾಲ್ಕು ನಾಣ್ಯವನ್ನು ಗುರು ಕಾಣಿಕೆಯಾಗಿ ಇಟ್ಟು, ದೇವರಿಗೆ ಪೂಜೆ ಸಲ್ಲಿಸಿ ಪರ್ಯಾಯ ಸರ್ವಜ್ಞ ಪೀಠ ಏರಬೇಕು ಎಂಬುದು ನಿಯಮ.

ಇಂದಿಗೂ ಪ್ರತೀ ಎರಡು ವರ್ಷಕ್ಕೊಮ್ಮೆ ಇದನ್ನು ಪಾಲಿಸಿಕೊಂಡು ಬರುತ್ತಾರೆ. ಈಗ ಆ ಮನೆತನದ ಹಿರಿಯ ವ್ಯಕ್ತಿ ಸೀತಾರಾಮ ಭಟ್ಟರ ಆಡಳಿತ ಇದೆ. ದಂಡ ತೀರ್ಥ ಮಠವು ಕೃಷ್ಣಾಪುರ ಮಠದ ಆಡಳಿತದಲ್ಲಿದೆ. ಇಲ್ಲಿ ಕೃಷ್ಣಾಪುರ ಮಠದ ಹಿರಿಯ ಯತಿಗಳು ಪ್ರತಿಷ್ಠಾಪಿಸಿದ ಹನುಮಂತ ದೇವರು ಮಠದ ದೇವರಿಗೆ ಇದಿರಾಗಿ ಇರುವುದು ಬಹಳ ವಿಶೇಷ. ಭಕ್ತರ ಸಕಲ ಇಷ್ಟಾರ್ಥ- ಕಾಮನೆಗಳನ್ನು ಪೂರೈಸುವ ಪ್ರಾಣದೇವರಿಗೆ ಬಹಳ ಕಾರ್ಣಿಕ ಇದೆ.

ಹತ್ತು ಕಿಲೋಮೀಟರ್ ದೂರದ ಕೃಷ್ಣ ಮಠ

ಇಲ್ಲಿಂದ ಪೂಜೆ ಸಲ್ಲಿಸಿದ ಪರ್ಯಾಯದ ಜವಾಬ್ದಾರಿ ಹೊತ್ತ ಯತಿಗಳು ಮೆರವಣಿಗೆಯ ಮೂಲಕ ಹತ್ತು ಕಿಲೋ ಮೀಟರ್ ದೂರದಲ್ಲಿ ಇರುವ ಶ್ರೀ ಕೃಷ್ಣ ಮಠಕ್ಕೆ ನಡೆದುಕೊಂಡು ಹೋಗುವ ಸಂಪ್ರದಾಯ ಇದೆ. ಆದರೆ ಈಗ ವಾಹನದಲ್ಲೇ ಹೋಗಿ, ಉಡುಪಿಯ ಜೋಡು ಕಟ್ಟೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಶ್ರೀಕೃಷ್ಣ ಮಠಕ್ಕೆ ಪಾದಯಾತ್ರೆಯ ಮೂಲಕ ಹೋಗುತ್ತಾರೆ. ಅರುಣೋದಯದ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಕೃಷ್ಣನಿಗೆ ಶರಣಾಗಿ, ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡುವ ಒಂದು ಅದ್ಭುತ ಸಂಪ್ರದಾಯ ಈವರೆಗೂ ನಡೆದು ಬಂದಿದೆ.

ಆಯಾ ಮಠದ ಸ್ವಾಮಿಗಳ ಪರ್ಯಾಯದ ಅವಧಿಯಲ್ಲಿ ಶ್ರೀ ಕೃಷ್ಣನ ಪ್ರೀತ್ಯರ್ಥ ಯಾವ ವಿಶೇಷ ಸತ್ಕರ್ಮ ಮಾಡುವ ಹಕ್ಕೂ ಇವರಿಗಿರುತ್ತದೆ. ದಾನ- ಧರ್ಮಾದಿಗಳು, ನಿತ್ಯ ಅನ್ನ ಸಂತರ್ಪಣೆ, ಪರ್ವಾದಿ ಆಚರಣೆಗಳು ನಡೆಯುತ್ತವೆ. ಅನೇಕ ಶಾಲಾ- ಕಾಲೇಜುಗಳಿಗೆ ಮದ್ಯಾಹ್ನದ ದಾಸೋಹವು ಶ್ರೀ ಕೃಷ್ಣ ಮಠದಿಂದಲೇ ನಡೆಯುತ್ತದೆ. ಮಠದ ಆಡಳಿತದಲ್ಲಿರುವ ಸಂಸ್ಕೃತ ಕಾಲೇಜಿನಲ್ಲಿ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆಯ ಕೆಲಸವೂ ನಡೆಯುತ್ತದೆ.

ಪ್ರಕಾಶ್ ಅಮ್ಮಣ್ಣಾಯ, ಅಧ್ಯಾತ್ಮ ಚಿಂತಕರು, ಜ್ಯೋತಿಷಿಗಳು, ಕಾಪು (ಉಡುಪಿ ಜಿಲ್ಲೆ)

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Wed, 17 January 24