
ಕ್ರಿಕೆಟ್ನಲ್ಲಿ ಕ್ಯಾಚ್ ಕೈಚೆಲ್ಲುವುದು ಎಂತಹ ದೊಡ್ಡ ತಪ್ಪು ಎಂಬುದು ಪ್ರಸ್ತುತ ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಸಾಭೀತಾಗಿದೆ. ಒಂದು ಬಾರಿ ಕ್ಯಾಚ್ ಬಿಟ್ಟರೆ ಅದನ್ನು ಆಕಸ್ಮಿಕ ಎನ್ನಬಹುದು. ಆದರೆ ಒಬ್ಬನೇ ಬ್ಯಾಟರ್ ನೀಡಿದ ಎರಡೆರಡು ಕ್ಯಾಚ್ಗಳನ್ನು ಕೈಚೆಲ್ಲುವುದು ದೊಡ್ಡ ಅಪರಾಧ ಎನ್ನಬಹುದು. ಈ ರೀತಿಯ ತಪ್ಪುಗಳು ತಂಡವನ್ನು ಸೋಲಿನ ದವಡೆಗೆ ತಳ್ಳಬಹುದು. ಎಷ್ಟೋ ತಂಡಗಳು ಕ್ಯಾಚ್ಗಳನ್ನು ಕೈಚೆಲ್ಲಿ ಪಂದ್ಯವನ್ನು ಸೋತಿರುವ ಸಾಕಷ್ಟು ನಿದರ್ಶನಗಳನ್ನು ನಾವು ನೋಡಿದ್ದವೆ. ಟೀಂ ಇಂಡಿಯಾ ಕೂಡ ಹಲವು ಬಾರಿ ಇಂತಹ ತಪ್ಪುಗಳನ್ನು ಮಾಡಿ ಪಂದ್ಯಗಳನ್ನು ಸೋತಿದೆ. ಇದೀಗ ಶ್ರೀಲಂಕಾ ಕೂಡ ಇದೇ ರೀತಿಯ ತಪ್ಪನ್ನು ಮಾಡಿ ಬರೋಬ್ಬರಿ 117 ರನ್ಗಳ ದಂಡ ಪಾವತಿಸಿದೆ.
ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರನೆಂದರೆ ಅದು ಕನ್ನಡಿಗ ದೇವದತ್ ಪಡಿಕ್ಕಲ್. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 167 ರನ್ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಎರಡನೇ ಇನ್ನಿಂಗ್ಸ್ನಲ್ಲಿ 44 ರನ್ಗಳ ಕಾಣಿಕೆ ನೀಡಿದ್ದರು. ಹೀಗಾಗಿ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕಬೇಕೆಂದರೆ ಶ್ರೀಲಂಕಾ ಆದಷ್ಟು ಬೇಗ ದೇವದತ್ ಪಡಿಕ್ಕಲ್ ಅವರ ವಿಕೆಟ್ ಪಡೆಯಬೇಕಿತ್ತು. ಇದಕ್ಕೆ ಪೂರಕವಾಗಿ ಬೌಲರ್ಗಳು ಕೂಡ ಪಡಿಕ್ಕಲ್ ಅವರನ್ನು ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದರು. ಒಂದಲ್ಲ ಅಂಥಾ ಎರಡು ಬಾರಿ ಪಡಿಕ್ಕಲ್ ಅವರ ವಿಕೆಟ್ ಪಡೆಯುವ ಅವಕಾಶ ಲಂಕಾ ತಂಡಕ್ಕಿತ್ತು. ಆದರೆ ಫಿಲ್ಡರ್ಗಳು, ಪಡಿಕ್ಕಲ್ ನೀಡಿದ ಎರಡು ಕ್ಯಾಚ್ಗಳನ್ನು ಕೈಚೆಲ್ಲುವ ಮೂಲಕ ತಂಡಕ್ಕೆ ಹೊರೆಯಾದರು.
ಇಲ್ಲಿ ಶ್ರೀಲಂಕಾಕ್ಕೆ ಇನ್ನೊಂದು ನೋವಿನ ಸಂಗತಿಯೆಂದರೆ ದೇವದತ್ ಪಡಿಕ್ಕಲ್ ತಮ್ಮ ರನ್ಗಳ ಖಾತೆಯನ್ನು ತೆರೆಯುವುದಕ್ಕೂ ಮುನ್ನವೇ ಅಂದರೆ ಶೂನ್ಯಕ್ಕೆ ಕ್ಯಾಚ್ ನೀಡಿದ್ದರು. ಲಂಕಾ ಫಿಲ್ಡರ್ ಆ ಕ್ಯಾಚ್ ಹಿಡಿಯಲಿಲ್ಲ. ನಂತರ 1 ರನ್ ಬಾರಿಸುವ ಮೂಲಕ ಖಾತೆ ತೆರೆದಿದ್ದ ಪಡಿಕ್ಕಲ್ ಮತ್ತೆ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಆ ಕ್ಯಾಚ್ ಅನ್ನು ಸಹ ಶ್ರೀಲಂಕಾ ಫಿಲ್ಡರ್ ತೆಗೆದುಕೊಳ್ಳಲಿಲ್ಲ. ಇದು ತಂಡವನ್ನು ಎಂತಹ ಸಂಕಷ್ಟಕ್ಕೆ ಸಿಲುಕಿಸಿತ್ತೆಂದರೆ ಈ ಎರಡು ಜೀವದಾನಗಳ ಲಾಭ ಪಡೆದ ಪಡಿಕ್ಕಲ್ ಬರೋಬ್ಬರಿ 117 ರನ್ಗಳ ಇನ್ನಿಂಗ್ಸ್ ಆಡಿದರು.
IND vs SL: ಸತತ 2ನೇ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ದೇವದತ್ ಪಡಿಕ್ಕಲ್
ಅಂದರೆ ಎರಡು ಕ್ಯಾಚ್ಗಳನ್ನು ಕೈಚೆಲ್ಲಿದಕ್ಕೆ ದಂಡದ ರೂಪದಲ್ಲಿ ಶ್ರೀಲಂಕಾ ತಂಡ ಬರೋಬ್ಬರಿ 117 ರನ್ಗಳನ್ನು ಟೀಂ ಇಂಡಿಯಾಕ್ಕೆ ನೀಡಿತು. ಇದು ಸಾಲದೆಂಬಂತೆ ಪಡಿಕ್ಕಲ್, ಮೂರನೇ ವಿಕೆಟ್ಗೆ ನಾಯಕ ಶುಭ್ಮನ್ ಗಿಲ್ ಅವರೊಂದಿಗೆ 120 ರನ್ಗಳ ಶತಕದ ಜೊತೆಯಾಟ ಕಟ್ಟಿದರು. ಹಾಗೆಯೇ ನಾಲ್ಕನೇ ವಿಕೆಟ್ಗೆ ರವೀಂದ್ರ ಜಡೇಜಾ ಅವರ ಜೊತಗೂಡಿ ಅರ್ಧಶತಕದ ಪಾಲುದಾರಿಕೆಯನ್ನು ರೂಪಿಸಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 300 ರನ್ಗಳ ಸನಿಹಕ್ಕೆ ತಲುಪಿತು.
Published On - 5:14 pm, Sun, 23 August 26