AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಸಿಬಿ ಅಧಿಕಾರಿಗಳು ಮೂರ್ಖರು ಎಂದು ಜಗತ್ತಿಗೆ ಗೊತ್ತಾಗಿದೆ!

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ಪುತ್ರರು ಮತ್ತು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ  ನಡುವಿನ ಜಟಾಪಟಿ ಈಗ ಜಾಗತಿಕ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಇಮ್ರಾನ್ ಖಾನ್ ಅವರ ಜೈಲು ಸ್ಥಿತಿಯ ಕುರಿತು ಪ್ರಸಾರವಾದ ಸಂದರ್ಶನವನ್ನು ವಿರೋಧಿಸಿ, ಪಿಸಿಬಿ ಪಂದ್ಯವನ್ನೇ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ನಾಟಕೀಯ ಘಟನೆಯು ವಿವೇಚನಾರಹಿತ ನಿರ್ಧಾರ ಎಂದು ಇಮ್ರಾನ್ ಖಾನ್ ಅವರ ಪುತ್ರರು ಆಕ್ರೋಶ ಹೊರಹಾಕಿದ್ದಾರೆ.

ಪಿಸಿಬಿ ಅಧಿಕಾರಿಗಳು ಮೂರ್ಖರು ಎಂದು ಜಗತ್ತಿಗೆ ಗೊತ್ತಾಗಿದೆ!
ಸುಲೈಮಾನ್ - ಮೊಹ್ಸಿನ್ ನಖ್ವಿ Image Credit source: x.com
ಝಾಹಿರ್ ಯೂಸುಫ್
|

Updated on: Sep 07, 2026 | 9:57 AM

Share

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ ಅವರ ಪುತ್ರರಾದ ಸುಲೈಮಾನ್ ಖಾನ್ ಮತ್ತು ಕಾಸಿಮ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ಲಾರ್ಡ್ಸ್ ಟೆಸ್ಟ್ ಮ್ಯಾಚ್​ ವೇಳೆ ಪಂದ್ಯ ಬಹಿಷ್ಕಾರ ಮಾಡುವುದಾಗಿ ಪಿಸಿಬಿ ಬೆದರಿಕೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಪಾಕ್​ ಕ್ರಿಕೆಟ್ ಮಂಡಳಿಯು “ಜಗತ್ತಿನೆದುರು ತನ್ನನ್ನು ತಾನೇ ಸಂಪೂರ್ಣ ಮೂರ್ಖನನ್ನಾಗಿ ಮಾಡಿಕೊಂಡಿದೆ” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ವಿವಾದಕ್ಕೆ ಕಾರಣವೇನು?

ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು, ಪ್ರಸಿದ್ಧ ಕ್ರೀಡಾ ವಾಹಿನಿ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾಜಿ ನಾಯಕ ಮೈಕಲ್ ಅಥರ್ಟನ್ ಅವರು ಇಮ್ರಾನ್ ಖಾನ್ ಅವರ ಪುತ್ರರನ್ನು ಸಂದರ್ಶನ ಮಾಡಿದ್ದರು. ಈ ಸಂದರ್ಶನದಲ್ಲಿ ಸಹೋದರರಿಬ್ಬರೂ ಪ್ರಸ್ತುತ ಜೈಲಿನಲ್ಲಿರುವ ತಮ್ಮ ತಂದೆಯ ಆರೋಗ್ಯದ ಸ್ಥಿತಿ ಮತ್ತು ಅವರು ಎದುರಿಸುತ್ತಿರುವ ಕಠಿಣ ಜೈಲು ವಾಸದ ಬಗ್ಗೆ ಆತಂಕ ಹಂಚಿಕೊಂಡಿದ್ದರು.

ಆದರೆ, ಈ ರಾಜಕೀಯ ಪ್ರೇರಿತ ಸಂದರ್ಶನವನ್ನು ಪ್ರಸಾರ ಮಾಡಬಾರದು ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೀವ್ರ ಒತ್ತಡ ಹೇರಿತ್ತು. ಒಂದು ವೇಳೆ ಸಂದರ್ಶನವನ್ನು ಪ್ರಸಾರ ಮಾಡಿದರೆ, ಊಟದ ವಿರಾಮದ ನಂತರ ಪಾಕಿಸ್ತಾನ್ ತಂಡವನ್ನು ಮೈದಾನಕ್ಕೆ ಇಳಿಸುವುದಿಲ್ಲ ಮತ್ತು ಪಂದ್ಯವನ್ನೇ ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿತ್ತು ಎಂದು ವರದಿಯಾಗಿದೆ. ಕೊನೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಿದ ನಂತರ ಪಂದ್ಯವು ಎಂದಿನಂತೆ ಮುಂದುವರಿದಿತ್ತು

“ಅವರು ಸಂಪೂರ್ಣ ಮೂರ್ಖರು”

ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ ಜೊತೆ ಮಾತನಾಡಿದ ಕಾಸಿಮ್ ಖಾನ್, “ಪಿಸಿಬಿ ಅಧಿಕಾರಿಗಳು ಜಗತ್ತಿನ ಮುಂದೆ ತಾವೊಬ್ಬ ಮೂರ್ಖರು ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಅಲ್ಲದೆ ತಮ್ಮದೇ ಘನತೆಗೆ ಧಕ್ಕೆ ತಂದುಕೊಂಡಿದ್ದಾರೆ” ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ

ಮತ್ತೊಬ್ಬ ಪುತ್ರ ಸುಲೈಮಾನ್ ಮಾತನಾಡಿ, “ಮಂಡಳಿಯಿಂದ ಯಾವುದಾದರೂ ಪ್ರತಿಕ್ರಿಯೆ ಬರಬಹುದು ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಪಂದ್ಯವನ್ನೇ ಆಡುವುದಿಲ್ಲ ಎಂದು ಮೈದಾನಕ್ಕೆ ಇಳಿಯಲು ನಿರಾಕರಿಸುವಷ್ಟು ಅವರು ವಿವೇಚನಾರಹಿತವಾಗಿ ವರ್ತಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“22 ವರ್ಷಗಳ ಕಾಲ ಇಂಗ್ಲೆಂಡ್‌ನಲ್ಲಿ ಬದುಕಿದ್ದ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರ ಮಾನವೀಯ ಹಕ್ಕುಗಳು ಹಾಗೂ ಆರೋಗ್ಯದ ಕುರಿತಾದ ಸಂದರ್ಶನವನ್ನು ತಡೆಯುವ ಯಾವುದೇ ಹಕ್ಕು ಪಿಸಿಬಿಗೆ ಇಲ್ಲ. ಇದು ರಾಜಕೀಯವಲ್ಲ, ಕೇವಲ ನಮ್ಮ ತಂದೆಯ ಆರೋಗ್ಯದ ಬಗೆಗಿನ ಕಾಳಜಿ” ಎಂದು ಇಮ್ರಾನ್ ಖಾನ್ ಪುತ್ರ ಸುಲೈಮಾನ್ ಸ್ಪಷ್ಟಪಡಿಸಿದ್ದಾರೆ.

ಆಡಳಿತ ಮಂಡಳಿಯ ಮುಖಭಂಗ:

ವಿಶೇಷವೆಂದರೆ, ಈ ವಿವಾದದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಮತ್ತು ಮುಖ್ಯ ತರಬೇತುದಾರರಾಗಿದ್ದ ಸರ್ಫರಾಝ್ ಅಹಮದ್ ಅವರು ತಮಗೆ ಇಂತಹ ಯಾವುದೇ ಬಹಿಷ್ಕಾರದ ನಿರ್ಧಾರದ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಕೇವಲ ಆಡಳಿತ ಮಂಡಳಿಯ ಮಟ್ಟದಲ್ಲಿ ನಡೆದ ಹೈಡ್ರಾಮಾ ಎಂಬುದನ್ನು ಸಾಬೀತುಪಡಿಸಿತ್ತು

ಪ್ರಸ್ತುತ ಪಿಸಿಬಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನ್ ಸರ್ಕಾರದ ಆಂತರಿಕ ಭದ್ರತಾ ಸಚಿವರೂ ಆಗಿರುವುದರಿಂದ, ಈ ಇಡೀ ಪ್ರಸಂಗವು ಕ್ರಿಕೆಟ್ ಮೈದಾನದಲ್ಲಿ ರಾಜಕೀಯದ ಹಸ್ತಕ್ಷೇಪಕ್ಕೆ ಸಾಕ್ಷಿಯಾಗಿದೆ ಎಂದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ನಾವು ಕೇವಲ ಭಾಗವಹಿಸಲು ಇಲ್ಲಿಗೆ ಬಂದಿಲ್ಲ: ಇಶಾನ್ ಕಿಶನ್ ರಣಕಹಳೆ!

ಒಟ್ಟಾರೆಯಾಗಿ ಹೇಳುವುದಾದರೆ, ಕ್ರೀಡೆ ಮತ್ತು ರಾಜಕೀಯದ ನಡುವಿನ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮತ್ತೊಮ್ಮೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದನ್ನು ಈ ಇಡೀ ಪ್ರಸಂಗವು ಎತ್ತಿ ತೋರಿಸುತ್ತದೆ. ಆಡಳಿತ ಮಂಡಳಿಯ ಮುಖ್ಯಸ್ಥರೇ ದೇಶದ ಸಚಿವರೂ ಆಗಿರುವುದರಿಂದ, ಕ್ರಿಕೆಟ್ ಮೈದಾನವನ್ನು ರಾಜಕೀಯ ಸೇಡಿನ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಇಮ್ರಾನ್ ಖಾನ್ ಪುತ್ರರ ಆರೋಪಕ್ಕೆ ಈ ಘಟನೆ ಸ್ಪಷ್ಟ ಸಾಕ್ಷಿಯಂತಿದೆ.

Follow Us