RCBಯ ಪಂಚ ಬೌಲರ್ಗಳೇ ವೈಭವ್ ಸೂರ್ಯವಂಶಿಯ ಮುಂದಿನ ಟಾರ್ಗೆಟ್
RCB vs RR: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯದ; ಮೂಲಕ ಸ್ಫೋಟಕ ದಾಂಡಿಗ ವೈಭವ್ ಸೂರ್ಯವಂಶಿ ಹಾಗೂ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಮುಖಾಮುಖಿಯಾಗಲಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ದಿಗ್ಗಜ ಬೌಲರ್ಗಳ ನಿದ್ದೆಗೆಡಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀರ್ ಬುಮ್ರಾ ಅವರ ಓವರ್ನಲ್ಲಿ ಅಬ್ಬರಿಸಿದ್ದ ವೈಭವ್, ಈಗ ಏಪ್ರಿಲ್ 10 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಬುಮ್ರಾ ವಿರುದ್ಧ ‘ಬಿರುಗಾಳಿ’!
ಮುಂಬೈ ಇಂಡಿಯನ್ಸ್ ವಿರುದ್ಧದ ಮಳೆಬಾಧಿತ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತೋರಿದ ಆಟ ಅಪ್ರತಿಮವಾಗಿತ್ತು. ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಅವರ ಎಸೆತವನ್ನೇ ವೈಭವ್ ಸಿಕ್ಸರ್ಗೆ ಅಟ್ಟುವ ಮೂಲಕ ಇನ್ನಿಂಗ್ಸ್ ಆರಂಭಿಸಿದರು. ಅಲ್ಲದೆ ಬುಮ್ರಾ ಅವರ 5 ಎಸೆತಗಳಲ್ಲಿ ಬರೋಬ್ಬರಿ 13 ರನ್ ಕಲೆಹಾಕಿದರು.
ಇತ್ತ ಬುಮ್ರಾ ವಿರುದ್ಧ ಅಬ್ಬರಿಸುವ ಮೂಲಕ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಬಾರಿಸಿದ್ದರು. ಈ ಪ್ರಚಂಡ ಬ್ಯಾಟಿಂಗ್ನೊಂದಿಗೆ ವೈಭವ್ ಮುಂದಿನ ಟಾರ್ಗೆಟ್ಗಾಗಿ ಸಜ್ಜಾಗಿದ್ದಾರೆ.
‘ಪಂಚ’ ಟಾರ್ಗೆಟ್!
ಮುಂದಿನ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿರುವ ವೈಭವ್ ಸೂರ್ಯವಂಶಿ, ಐವರು ಪ್ರಮುಖ ಬೌಲರ್ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಕಳೆದ ಸೀಸನ್ನಲ್ಲಿ ತಮಗೆ ಕಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
- ಭುವನೇಶ್ವರ್ ಕುಮಾರ್: ಕಳೆದ ಬಾರಿಯ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಅವರನ್ನು 16 ರನ್ಗಳಿಗೆ ಔಟ್ ಮಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಈ ಬಾರಿ ಗುವಾಹಟಿಯ ತವರು ನೆಲದಲ್ಲಿ ಅಬ್ಬರಿಸುವ ಗುರಿ ಹೊಂದಿದ್ದಾರೆ.
- ಕೃನಾಲ್ ಪಾಂಡ್ಯ: ಸ್ಪಿನ್ ಬಲೆ ಹೆಣೆಯುವ ಕೃನಾಲ್ ವಿರುದ್ಧ ದೊಡ್ಡ ಹೊಡೆತಗಳಿಗೆ ವೈಭವ್ ತಯಾರಿ ನಡೆಸಿದ್ದಾರೆ ಎಂಬುದನ್ನು ಕೋಚ್ ಬಹಿರಂಗಪಡಿಸಿದ್ದಾರೆ.
- ಜೇಕಬ್ ಡಫಿ: ಆರ್ಸಿಬಿಯ ವಿದೇಶಿ ವೇಗಿಯ ವೇಗವನ್ನು ಎದುರಿಸಲು ವೈಭವ್ ಸಿದ್ಧರಾಗಿದ್ದಾರೆ.
- ಅಭಿನಂದನ್ ಸಿಂಗ್: ಉದಯೋನ್ಮುಖ ವೇಗಿಯ ಬೌಲಿಂಗ್ನಲ್ಲಿ ರನ್ ಕದಿಯುವ ತಂತ್ರ ರೂಪಿಸಿದ್ದಾರೆ.
- ಸುಯಶ್ ಶರ್ಮಾ: ಗೂಗ್ಲಿ ಸ್ಪಿನ್ನರ್ ಸುಯಶ್ ಶರ್ಮಾ ಅವರ ಸ್ಪಿನ್ ದಾಳಿ ಎದುರಿಸಲು ನೆಟ್ಸ್ನಲ್ಲಿ ಯುವ ದಾಂಡಿಗ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
ಈಗಾಗಲೇ ಜಸ್ಪ್ರೀತ್ ಬುಮ್ರಾ ಮುಖಾಮುಖಿಯಲ್ಲಿ ಯಶಸ್ವಿಯಾಗಿ ವೈಭವ್ ಸೂರ್ಯವಂಶಿ, ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಅವರನ್ನು ಯಾವ ರೀತಿ ಎದುರಿಸಲಿದ್ದಾರೆ ಎಂಬುದೇ ಈಗ ಎಲ್ಲರ ಕುತೂಹಲ. ಅದರಲ್ಲೂ ಕಳೆದ ಸೀಸನ್ನಲ್ಲಿ ಭುವಿ ಎಸೆತಕ್ಕೆ ಔಟಾಗಿರುವ ಕಾರಣ ಈ ಬಾರಿ ಲೆಕ್ಕ ಚುಕ್ತಾ ಮಾಡುವ ಇರಾದೆಯಲ್ಲಿದ್ದಾರೆ ಯುವ ದಾಂಡಿಗ. ಹೀಗಾಗಿ ಏಪ್ರಿಲ್ 10 ರಂದು ನಡೆಯಲಿರುವ ಆರ್ಸಿಬಿ ಮತ್ತು ಆರ್ಆರ್ ನಡುವಣ ಪಂದ್ಯದಲ್ಲಿ ವೈಭವ್ vs ಭುವಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published On - 2:09 pm, Wed, 8 April 26




