ಬರ್ತ್ ಡೇ ಬಾಯ್ ಅಭಿಷೇಕ್ಗೆ ಸಿಟ್ಅಪ್ ಶಿಕ್ಷೆ ವಿಧಿಸಿದ ಯುವರಾಜ್ ಸಿಂಗ್
ಟೀಂ ಇಂಡಿಯಾ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ತಮ್ಮ 26ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸ್ಥಿರತೆಯ ಕೊರತೆ ಎದುರಿಸುತ್ತಿರುವ ಅವರಿಗೆ ಗುರು ಯುವರಾಜ್ ಸಿಂಗ್ ವಿಶಿಷ್ಟ ಪಾಠ ಹೇಳಿದ್ದಾರೆ. ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಹೋಗದಂತೆ ಬುದ್ಧಿಮಾತು ಹೇಳಿ ಸಿಟ್ಅಪ್ ಶಿಕ್ಷೆ ವಿಧಿಸಿದ್ದಾರೆ. ಈ ಗುರು-ಶಿಷ್ಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಇಂದು ತಮ್ಮ 26 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಹೊಡಿಬಡಿ ಆಟದ ಮೂಲಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಅಭಿಷೇಕ್ ಶರ್ಮಾ ಸ್ಥಿರತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಅಭಿಷೇಕ್ ಮುಂದಿನ ಪಂದ್ಯದಲ್ಲೇ ಸೊನ್ನೆಗೆ ಔಟಾಗುತ್ತಾರೆ. ಎದುರಿಸುವ ಮೊದಲ ಎಸೆತದಿಂದಲೇ ಸಿಕ್ಸರ್ ಹೊಡೆಯುವ ಇರಾದೆ ಇಟ್ಟುಕೊಂಡಿರುವ ಅಭಿಷೇಕ್ ಹೆಚ್ಚಿನ ಸಮಯದಲ್ಲಿ ವಿಫಲವಾಗಿದ್ದೆ ಹೆಚ್ಚು. ಹೀಗಾಗಿ ಅವರ ಜನ್ಮದಿನದಂದು ಅವರ ಗುರು ಯುವರಾಜ್ ಸಿಂಗ್, ವಿನೂತನ ಶಿಕ್ಷೆಯನ್ನು ನೀಡುವ ಮೂಲಕ ಅಭಿಷೇಕ್ ಅವರಿಗೆ ಬುದ್ಧಿ ಮಾತು ಹೇಳುವ ಕೆಲಸ ಮಾಡಿದ್ದಾರೆ.
ಅಭಿಷೇಕ್ ಕಿವಿ ಹಿಂಡಿದ ಯುವಿ
ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್, ಅಭಿಷೇಕ್ ಅವರ ಬಾಲ್ಯದ ಕೋಚ್ ಅಲ್ಲ. ಆದಾಗ್ಯೂ ಅವರು ಅಭಿಷೇಕ್ ಅವರ ಸಂಕಷ್ಟದ ಸಮಯದಲ್ಲಿ ಅವರಿಗೆ ಕ್ರಿಕೆಟ್ ಪಾಠವನ್ನು ಹೇಳಿಕೊಟ್ಟು ಅವರ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿದವರು. ಅಭಿಷೇಕ್ ಉತ್ತಮ ಪ್ರದರ್ಶನ ನೀಡಿದಾಗಲೆಲ್ಲ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಯುವರಾಜ್, ಅವರು ಕಳಪೆ ಶಾಟ್ ಆಡಿ ಔಟಾದಾಗಲೂ ವ್ಯಂಗ್ಯವಾಗಿ ಅಭಿಷೇಕ್ ಅವರ ಕಿವಿ ಹಿಂಡುವ ಕೆಲಸ ಮಾಡುತ್ತಾರೆ.
ಇದೀಗ ಅಭಿಷೇಕ್ ಅವರ ಜನ್ಮದಿನದಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶೇಷ ಪೋಸ್ಟ್ವೊಂದನ್ನು ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್, ಇಬ್ಬರು ಜೊತೆಗಿರುವ ಹಲವಾರು ಫೋಟೋಗಳ ಜೊತೆಗೆ ವಿಶೇಷ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಅದರಲ್ಲಿ ಯುವರಾಜ್, ತಪ್ಪುಗಳಿಂದ ಕಲಿಯುವ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಅಭಿಷೇಕ್ ಅವರ ಮನೋಭಾವವನ್ನೂ ಅವರು ಹೊಗಳಿದ್ದಾರೆ.
SRH vs PBKS: ಭಾರತದಲ್ಲಿ ವಿಶೇಷ ತ್ರಿಶತಕ ಪೂರೈಸಿದ ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾಗೆ ಸಿಟ್ಅಪ್ ಶಿಕ್ಷೆ
ಇದರ ಜೊತೆಗೆ ಯುವರಾಜ್ ಹಂಚಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ.. ಮೇಲೆ ಹೇಳಿದಂತೆ ಅಭಿಷೇಕ್ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ಹಲವು ಬಾರಿ ವಿಕೆಟ್ ಕೈಚೆಲ್ಲಿದ್ದಾರೆ. ಇದನ್ನು ಸರಿಪಡಿಸುವ ಸಲುವಾಗಿ ಯುವರಾಜ್, ಅಭಿಷೇಕ್ ಶರ್ಮಾಗೆ ಸಿಟ್ಅಪ್ ಶಿಕ್ಷೆಯನ್ನು ವಿಧಿಸಿದ್ದಾರೆ. ಇದರ ಜೊತೆಗೆ ಯುವರಾಜ್, ಅಭಿಷೇಕ್ರಿಂದ ಕೆಲವು ತಪ್ಪುಗಳನ್ನು ಇನ್ನು ಮಾಡದಂತೆ ವಚನವನ್ನು ತೆಗೆದುಕೊಂಡಿದ್ದಾರೆ.
View this post on Instagram
ಅದರಲ್ಲಿ ಯುವರಾಜ್ ಅಭಿಷೇಕ್ಗೆ ‘ನಾನು ಮೊದಲ ಎಸೆತದಲ್ಲಿ ಬೌಂಡರಿ ಹೊಡೆಯುವುದಿಲ್ಲ. ನಾನು ಮೊದಲ ಎಸೆತವನ್ನು ಗಾಳಿಯಲ್ಲಿ ಹೊಡೆಯುವುದಿಲ್ಲ. ನಾನು ಬ್ಯಾಟಿಂಗ್ ಮಾಡಲು ನನ್ನ ಸಮಯವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳು ಎನ್ನುತ್ತಾರೆ. ಇತ್ತ ಅಭಿಷೇಕ್ ಸಿಟ್ಅಪ್ ಮಾಡುವುದರ ಜೊತೆಗೆ ಮೇಲಿನದ್ದೇಲ್ಲವನ್ನು ಹೇಳುತ್ತಿರುವುದನ್ನು ಕಾಣಬಹುದು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಗುರುಶಿಷ್ಯರ ಸಂಬಂಧಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Fri, 4 September 26




