‘ಆ ಪ್ರತಿಭಟನೆಯಿಂದ ಭಾರತಕ್ಕೆ ನಿರೀಕ್ಷಿತ ಪದಕಗಳು ಬರಲಿಲ್ಲ’; WFI ಅಧ್ಯಕ್ಷರ ಗಂಭೀರ ಆರೋಪ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಭಾರತದ ಪರ ಆರು ಕುಸ್ತಿಪಟುಗಳು ಭಾಗವಹಿಸಿದ್ದರು. ಆದರೆ ಅಮನ್ ಸೆಹ್ರಾವತ್ ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇತ್ತ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ 100 ಗ್ರಾಂ ಅಧಿಕ ತೂಕದ ಕಾರಣದಿಂದ ಫೈನಲ್​ನಿಂದ ಅನರ್ಹಗೊಂಡಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ 4 ಕುಸ್ತಿಪಟುಗಳಿಗೆ ಪದಕ ಸುತ್ತಿಗೆ ತಲುಪಲು ಸಹ ಸಾಧ್ಯವಾಗಲಿಲ್ಲ.

‘ಆ ಪ್ರತಿಭಟನೆಯಿಂದ ಭಾರತಕ್ಕೆ ನಿರೀಕ್ಷಿತ ಪದಕಗಳು ಬರಲಿಲ್ಲ’; WFI ಅಧ್ಯಕ್ಷರ ಗಂಭೀರ ಆರೋಪ
ಸಂಜಯ್ ಸಿಂಗ್, ವಿನೇಶ್ ಫೋಗಟ್
Follow us
|

Updated on: Aug 16, 2024 | 3:07 PM

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತ ಕೇವಲ 6 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತ್ತು. ಭಾರತದ ಸ್ಪರ್ಧಿಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ದೇಶವಾಸಿಗಳಲ್ಲಿ ಬೇಸರ ಮೂಡಿಸಿತ್ತು. ಈ ಬಾರಿ ಭಾರತ ಪದಕಗಳ ವಿಚಾರದಲ್ಲಿ ಡಬಲ್ ಡಿಜಿಟ್ ದಾಟಲಿದೆ ಎಂಬ ವಿಶ್ವಾಸವಿತ್ತು. ಆದರೆ ಕಳೆದ ಬಾರಿಗಿಂತಲೂ ಒಂದು ಪದಕ ಕಡಿಮೆ ಗೆದ್ದ ಭಾರತ ಒಂದೇ ಒಂದು ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ ಹಲವು ಕ್ರೀಡೆಗಳಲ್ಲಿ ಭಾರತ ಅಧಿಕ ಪದಕಗಳ ನಿರೀಕ್ಷೆ ಇಟ್ಟುಕೊಂಡಿತ್ತು. ಅದರಲ್ಲಿ ಆರ್ಚರಿ, ಶೂಟಿಂಗ್, ಬ್ಯಾಡ್ಮಿಂಟನ್‌, ಕುಸ್ತಿ ವಿಭಾಗದಲ್ಲಿ ಖಚಿತವಾಗಿ ಪದಕ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಯಾವ ವಿಭಾಗಗಳಲ್ಲೂ ಭಾರತಕ್ಕೆ ನಿರೀಕ್ಷಿಸಿದಷ್ಟು ಪದಕಗಳು ಸಿಗಲಿಲ್ಲ. ಅದರಲ್ಲೂ ಕುಸ್ತಿ ವಿಭಾಗದಲ್ಲಿ ಭಾರತ ಕನಿಷ್ಠ 4 ಪದಕಗಳನ್ನು ನಿರೀಕ್ಷಿಸಿತ್ತು. ಆದರೆ ಸಿಕ್ಕಿದ್ದು ಮಾತ್ರ ಕೇವಲ ಒಂದು ಪದಕ. ಇದೀಗ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಗಳ ಕಳಪೆ ಪ್ರದರ್ಶನಕ್ಕೆ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಸಂಜಯ್ ಸಿಂಗ್ ಅಸಮಾಧಾನಗೊಂಡಿದ್ದು, ಕುಸ್ತಿ ವಿಭಾಗದಲ್ಲಿ ನಿರೀಕ್ಷಿಸಿದಷ್ಟು ಪದಕಗಳು ಬರದಿರಲು ದೇಶದಲ್ಲಿ ಕುಸ್ತಿಪಟುಗಳು ಹೂಡಿದ್ದ ಮುಷ್ಕರವೇ ಕಾರಣ ಎಂದಿದ್ದಾರೆ.

ವಾಸ್ತವವಾಗಿ ಕುಸ್ತಿ ವಿಭಾಗದಲ್ಲಿ ಭಾರತ 2008 ರ ಒಲಿಂಪಿಕ್ಸ್​ನಿಂದಲೂ ಒಂದಲ್ಲ ಒಂದು ಪದಕವನ್ನು ಗೆಲ್ಲುತ್ತಾ ಬಂದಿದೆ. ಹೀಗಾಗಿ ಕಳೆದ 16 ವರ್ಷಗಳಲ್ಲಿ ಕುಸ್ತಿಯಲ್ಲೂ ಭಾರತದ ಪ್ರಾಬಲ್ಯ ಹೆಚ್ಚಿದೆ. ಅನೇಕ ಕುಸ್ತಿಪಟುಗಳು ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಂತಹ ದೊಡ್ಡ ವೇದಿಕೆಗಳಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅದರಂತೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಭಾರತದ ಪರ ಆರು ಕುಸ್ತಿಪಟುಗಳು ಭಾಗವಹಿಸಿದ್ದರು. ಆದರೆ ಅಮನ್ ಸೆಹ್ರಾವತ್ ಮಾತ್ರ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇತ್ತ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ 100 ಗ್ರಾಂ ಅಧಿಕ ತೂಕದ ಕಾರಣದಿಂದ ಫೈನಲ್​ನಿಂದ ಅನರ್ಹಗೊಂಡಿದ್ದಾರೆ. ಇದನ್ನು ಹೊರತುಪಡಿಸಿ4 ಕುಸ್ತಿಪಟುಗಳಿಗೆ ಪದಕ ಸುತ್ತಿಗೆ ತಲುಪಲು ಸಹ ಸಾಧ್ಯವಾಗಲಿಲ್ಲ.

ಪ್ರತಿಭಟನೆಯಿಂದ ನಷ್ಟ?

ಭಾರತೀಯ ಕುಸ್ತಿ ಅಸೋಸಿಯೇಷನ್ ​​ಅಧ್ಯಕ್ಷ ಸಂಜಯ್ ಸಿಂಗ್ ಅವರು ಸ್ಪೋರ್ಟ್ಸ್ಕೀಡಾಗೆ ನೀಡಿದ ಸಂದರ್ಶನದಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್ ಅವರನ್ನು ಹೊಗಳಿದ್ದಾರೆ. ಆದಾಗ್ಯೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕುಸ್ತಿಪಟುಗಳ ಕಳಪೆ ಪ್ರದರ್ಶನದಿಂದ ತೃಪ್ತರಾಗಿಲ್ಲ ಎಂದು ಸಂಜಯ್ ಸಿಂಗ್ ಹೇಳಿಕೊಂಡಿದ್ದಾರೆ. ಏಕೆಂದರೆ ಈ ಬಾರಿ WFI ಕನಿಷ್ಠ 5 ಪದಕಗಳನ್ನು ನಿರೀಕ್ಷಿಸಿತ್ತು. ಕುಸ್ತಿಪಟುಗಳು ತುಂಬಾ ಚೆನ್ನಾಗಿ ತಯಾರಿ ನಡೆಸುತ್ತಿದ್ದರು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆದರೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ಪ್ರತಿಭಟನೆಗಳು ಸಿದ್ಧತೆಗಳನ್ನು ಹಳಿತಪ್ಪುವಂತೆ ಮಾಡಿದವು. ಇದರಿಂದಾಗಿ ಪದಕ ಗೆಲ್ಲುವ ಅವಕಾಶ ಕೈಜಾರಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

4 ಪದಕಗಳನ್ನು ಕಳೆದುಕೊಂಡಿತು

ಸಂಜಯ್ ಸಿಂಗ್ ಇಲ್ಲಿ ಯಾರ ಹೆಸರನ್ನೂ ನೇರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅವರ ಹೇಳಿಕೆ ವಿನೇಶ್ ಫೋಗಟ್ ಕಡೆಗೆ ನೇರವಾಗಿ ಬೊಟ್ಟು ಮಾಡುವಂತಿತ್ತು. ವಿನೇಶ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ನೇತೃತ್ವದಲ್ಲಿ ಹಲವು ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ಮುಷ್ಕರದಿಂದಾಗಿ ಭಾರತವು 4 ಪದಕಗಳನ್ನು ಕಳೆದುಕೊಂಡಿತು. ಇದಲ್ಲದೆ ಅದೃಷ್ಟ ಕೂಡ ಭಾರತದ ಪರವಾಗಿರಲಿಲ್ಲ ಎಂದು ಸಂಜಯ್ ಸಿಂಗ್ ಹೇಳಿಕೊಂಡಿದ್ದಾರೆ. ಇದೀಗ ಸಂಜಯ್ ಸಿಂಗ್ ಅವರ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿದೆ.

ವಿನೇಶ್ ಫೋಗಟ್ ನೇರ ಕಾರಣ

ಇನ್ನು ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹತೆಗೆ ವಿನೇಶ್ ಫೋಗಟ್ ಕಾರಣ ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ. ತೂಕವನ್ನು ಕಾಪಾಡಿಕೊಳ್ಳುವುದು ಯಾವುದೇ ಕುಸ್ತಿಪಟುವಿನ ವೈಯಕ್ತಿಕ ಜವಾಬ್ದಾರಿಯಾಗಿದೆ. ಇದಲ್ಲದೆ ವಿನೇಶ್ ಯಾವ ಸೌಲಭ್ಯಗಳನ್ನು ಕೇಳಿದ್ದರೋ ಅದೆಲ್ಲವನ್ನೂ ಆಕೆಗೆ ಒದಗಿಸಲಾಗಿತ್ತು. ಆದಾಗ್ಯೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ